ಮೈಸೂರಿನ ಪಾರಂಪರಿಕ ಕಟ್ಟಡಗಳ ಪುನಃಶ್ವೇತನಕ್ಕೆ, ಕಸ್ಟಮ್ಸ್ ಕಚೇರಿ ಸ್ಥಾಪನೆಗೆ ಯದುವೀರ್ ಮನವಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ಚರ್ಚಿಸಿದ ಸಂಸದರ

ಮೈಸೂರು: ಮೈಸೂರಿನಲ್ಲಿ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಡಲಾಗಿದ್ದು, ಈ ನಿಟ್ಟಿನಲ್ಲಿ ಸಾಂಸ್ಕೃತಿಕ ರಾಜಧಾನಿಯಲ್ಲಿ ಕೆಲವು ಮಹತ್ವದ ಯೋಜನೆಗಳಿಗೆ ನೆರವು ನೀಡಬೇಕು ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ, ಮೈಸೂರು ಕ್ಷೇತ್ರದಲ್ಲಿ ಆಗಬೇಕಾಗಿರುವ ಯೋಜನೆಗಳ ಬಗ್ಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ಪಾರಂಪರಿಕ ಕಟ್ಟಡಗಳು ಹಾಗೂ ವಿಶೇಷವಾಗಿ ಕೃಷ್ಣರಾಜ ಬೌಲೆವಾರ್ಡ್ನಲ್ಲಿರುವ ಕಟ್ಟಡಗಳನ್ನು ಸಮಗ್ರವಾಗಿ ಪುನಃಸ್ಥಾಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ, ನೆರವು ಬೇಕಾಗಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ತಿಳಿಸಿದ್ದಾರೆ.ಮೈಸೂರು ವಿಶ್ವವಿದ್ಯಾಲಯ ಪಾರಂಪರಿಕ ಕಟ್ಟಡಗಳು ಕರ್ನಾಟಕಕ್ಕೆ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಮೌಲ್ಯವನ್ನು ಕೊಟ್ಟಿದೆ. ಮೈಸೂರು ಸಂಸ್ಥಾನದ ಒಡೆಯರ್ ಆಳ್ವಿಕೆಯಲ್ಲಿ 20 ನೇ ಶತಮಾನದ ಆರಂಭದಲ್ಲಿ ನಿರ್ಮಿಸಲಾದ ಈ ಕಟ್ಟಡಗಳು ಆಧುನಿಕ ಶಿಕ್ಷಣಕ್ಕೆ ಮತ್ತು ಭಾರತೀಯ ಪಾರಂಪರಿಕ ಶ್ರೀಮಂತಿಕೆ ಮೈಸೂರಿನ ಕೊಡುಗೆಗಳಾಗಿವೆ ಎಂದು ವಿವರಿಸಲಾಗಿದೆ ಎಂದು ಸಂಸದರು ಹೇಳಿದ್ದಾರೆ.
ಓರಿಯಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಯುವರಾಜ ಕಾಲೇಜು, ಮಹಾರಾಜ ಕಾಲೇಜುಗಳು, ವಿದ್ವಾಂಸರು, ಕಲಾವಿದರು ಮತ್ತು ನಾಯಕರನ್ನು ಪೋಷಿಸಿದ ಸಂಸ್ಥೆಗಳಾಗಿ ಇತಿಹಾಸ ಹೊಂದಿದೆ. ಇದನ್ನು ಸಂರಕ್ಷಿಸಬೇಕಾದ ಅಗತ್ಯವಾಗಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ ಎಂದು= ಯದುವೀರ್ ತಿಳಿಸಿದ್ದಾರೆ.ಇಂಡೋ-ಸಾರ್ಸೆನಿಕ್ ಮತ್ತು ಶಾಸ್ತ್ರೀಯ ಯುರೋಪಿಯನ್ ಶೈಲಿ ಸಮ್ಮಿಲನದ ಈ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕಾಗಿದೆ. ಕೇಂದ್ರ ಬಜೆಟ್ ಅಥವಾ ಇತರ ಸೂಕ್ತ ಕಾರ್ಯವಿಧಾನಗಳ ಮೂಲಕ ಪರಂಪರೆ ಸಂರಕ್ಷಣೆ ಅಥವಾ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ವಿಶೇಷ ಆರ್ಥಿಕ ನೆರವು ನೀಡಿದರೆ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವರಿಗೆ ತಿಳಿಸಲಾಯಿತು ಎಂದು ಸಂಸದ ಯದುವೀರ್ ಸ್ಪಷ್ಟಪಡಿಸಿದ್ದಾರೆ.
ಕಸ್ಟಮ್ಸ್ ಕಚೇರಿ ಅಗತ್ಯವಿದೆ:
ನಮ್ಮ ಮೈಸೂರಿನ ಕಡಕೋಳ ಮಲ್ಟಿ ಮಾಡಲ್ ಲಾಜಿಸ್ಟಿಕ್ಸ್ ಪಾರ್ಕ್ ಅನ್ನು ಪೂರ್ಣಗೊಳಿಸಲಾಗಿದ್ದು, ಇದೊಂದು ಉತ್ತಮ ಸೌಲಭ್ಯವಾಗಿದೆ. ಕಸ್ಟಮ್ಸ್ ಕ್ಲಿಯರೆನ್ಸ್ಗೆ ಅನುಕೂಲವಾಗುವಂತೆ ಕಚೇರಿಯನ್ನು ಸ್ಥಾಪಿಸಲು ವಿನಂತಿ ಮಾಡಲಾಯಿತು ಎಂದು ಸಂಸದರು ತಿಳಿಸಿದ್ದಾರೆ.ಇದೇ ಕರಿಮೆಣಸಿನ ಮೇಲಿನ 18% ಜಿಎಸ್ಟಿಯನ್ನು ತೆಗೆದುಹಾಕಿದ್ದಕ್ಕಾಗಿ ಸಮಸ್ತ ಕೊಡಗು ಜಿಲ್ಲೆಯ ಜನತೆ ಪರವಾಗಿ ಕೇಂದ್ರ ಸಚಿವರಿಗೆ ಧನ್ಯವಾದಗಳನ್ನು ತಿಳಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.
ನನ್ನ ಎಲ್ಲಾ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಹಣಕಾಸು ಸಚಿವರು, ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅತಿ ಶೀಘ್ರದಲ್ಲೇ ಮೈಸೂರಿನಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಅನುಷ್ಠಾನಕ್ಕೆ ಬರಲಿವೆ ಎಂದು ಸಂಸದ ಯದುವೀರ್ ವಿವರಿಸಿದ್ದಾರೆ.
What's Your Reaction?






