ಕೊಡಗು ಸೈನಿಕ ಶಾಲೆ ಪುಟ್ಬಾಲ್ ನಲ್ಲಿ ಗೆಲವು: ವಿಜಯೋತ್ಸವದ ಮೆರವಣಿಗೆ
ಕುಶಾಲನಗರ: ಸೈನಿಕ ಶಾಲೆ ಕೊಡಗು ತನ್ನ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಸಾಧಿಸಿದ ಹೆಮ್ಮೆಯ ಸಾಧನೆಗೆ ಗೌರವ ಸಲ್ಲಿಸಲು ವಿಜಯೋತ್ಸವ ಮೆರವಣಿಗೆಯನ್ನು ಆಯೋಜಿಸಿತು. ಸೈನಿಕ ಶಾಲೆಗಳ ಅಂತರ ವಲಯ (ಇಂಟರ್ಝೋನ್) ಫುಟ್ಬಾಲ್ ಟೂರ್ನಮೆಂಟ್ 2025 (ಪ್ರೀ ಸಬ್ರೋಟೋ ಕಪ್) ನಲ್ಲಿ ಕೊಡಗು ಸೈನಿಕ್ ಶಾಲೆಯ ಜೂನಿಯರ್ ಫುಟ್ಬಾಲ್ ತಂಡವು ರನ್ನರ್ ಅಪ್(ದ್ವಿತೀಯ) ಸ್ಥಾನ ಪಡೆದ ಸಾಧನೆಗೆ ಈ ಮೆರವಣಿಗೆ ಕೈಗೊಳ್ಳಲಾಯಿತು. ಈ ಸ್ಪರ್ಧೆ 2025ರ ಜೂನ್ 9 ರಿಂದ 15ರವರೆಗೆ ಒರಿಸ್ಸಾ ರಾಜ್ಯದ ಭುವನೇಶ್ವರದ ಸೈನಿಕ್ ಶಾಲೆಯಲ್ಲಿ ನಡೆದಿತ್ತು.
ಅಂತಿಮ ಹಂತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಜೂನಿಯರ್ ತಂಡವು ವಿಜಯಪತಾಕೆಯೊಂದಿಗೆ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿತು. ಕ್ರೀಡಾಕೂಟದಲ್ಲಿ ಶಾಲೆಯ ಜೂನಿಯರ್ ಪುಟ್ಬಾಲ್ ತಂಡದ ನಾಯಕನಾದ ಕೆಡೆಟ್ ಯಶ್ ಪ್ರತಾಪ್ ನೇತೃತ್ವದಲ್ಲಿ ಕ್ರೀಡಾಕೂಟದ ಕೊನೆಯವರೆಗೂ ಉತ್ತಮ ಪ್ರದರ್ಶನ ನೀಡಿದರೆ, ತಂಡದ ಗೋಲ್ ಕೀಪರ್ ಕೆಡೆಟ್ ಆರ್ಯನ್ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾದರು. ಇದು ಶಾಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ವೇದಿಕೆಯ ಮೇಲೆ ನಡೆದ ಚಿರಸ್ಮರಣೀಯ ಸಾಧನೆಯಾಗಿದೆ.
ವಿಜಯೋತ್ಸವ ಮೆರವಣಿಗೆಯು ಹಳೆ ಕೂಡಿಗೆಯ ಏಂಜಲ ಶಾಲೆಯ ಮುಖ್ಯ ರಸ್ತೆಯಿಂದ ಆರಂಭವಾಗಿ ಶಾಲೆಯ ಮುಖ್ಯ ದ್ವಾರದವರೆಗೆ ಜರುಗಿತು. ಈ ಸಂದರ್ಭದಲ್ಲಿ ಶಾಲೆಯ ಸುಮಾರು 600 ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿವರ್ಗ, ಎನ್ ಸಿ ಸಿ ಸಿಬ್ಬಂದಿ, ದೈಹಿಕ ಶಿಕ್ಷಕರು ಹಾಗೂ ಕೂಡಿಗೆ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಪ್ರಸ್ತುತ ವಿಜಯೋತ್ಸವ ಮೆರವಣಿಗೆಯಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್, ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಷಾಜಿ, ಶಾಲೆಯ ಪ್ರಥಮ ಮಹಿಳೆ ಶ್ರೀಮತಿ ದಿವ್ಯಾ ಸಿಂಗ್ ಹಾಗೂ ಸ್ಥಳೀಯ ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದರು. ಕೊಡವ ನಾಡಿನ ಸಂಸ್ಕೃತಿಯ ಪ್ರತೀಕವಾಗಿ ಶಾಲೆಯ ಬಾಲಕಿಯರು ಕೊಡವ ಮಹಿಳೆಯರ ಉಡುಪಿನಲ್ಲಿ ಪುಟ್ಬಾಲ್ ಆಟಗಾರರನ್ನು ಪುಷ್ಟಗುಚ್ಛದೊಂದಿಗೆ ಸ್ವಾಗತಿಸಿದರು. ಹಾಗೆಯೇ ಶಾಲೆಯ ಡೊಳ್ಳು ಕುಣಿತ ತಂಡ ಹಾಗೂ ತಮಟೆ ತಂಡಗಳೂ ಸಹ ತಮ್ಮ ಹಸ್ತ ಕೌಶಲ್ಯದ ಪ್ರತಿಭೆಯ ಮೂಲಕ ಮೆರವಣಿಗೆಗೆ ಮೆರಗನ್ನು ತಂದರು.
ನಂತರ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್ ರವರು ವಿಜೇತರಾದ ಎಲ್ಲಾ ಆಟಗಾರರಿಗೂ ಪ್ರಶಸ್ತಿಪತ್ರ ಮತ್ತು ಉಡುಗೊರೆ ಪ್ರಧಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಉಪಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ ಮೊಹಮ್ಮದ್ ಷಾಜಿಯವರು ಶಾಲಾ ಪುಟ್ಬಾಲ್ ತಂಡವು ದಕ್ಷಿಣ ವಲಯ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಷ್ಟ್ರೀಯ ಮಟ್ಟದ ಪೈನಲ್ ಪಂದ್ಯದವರೆಗೂ ತಂಡವು ತೋರಿದ ಹೋರಾಟವನ್ನು ಕುರಿತು ಶ್ಲಾಘಿಸಿದರು.
ಹಾಗೆಯೇ ಪ್ರಾಂಶುಪಾಲರು ಸಹ ತಂಡವು ತೋರಿದ ಧೈರ್ಯ, ಕೌಶಲ, ಸಾಂಘಿಕ ಪ್ರದರ್ಶನವನ್ನು ಪ್ರಶಂಸಿಸುವುದರೊಂದಿಗೆ ತಂಡದ ತರಬೇತುದಾರ ಶೇಕ್ ಅಜ್ಜದ್ (ಎ ಐ ಎಫ್ ಎಫ್ ಕೋಚ್) ಹಾಗೂ ಶಾಲೆಯ ಕ್ರೀಡೆಗಳ ಮೇಲ್ವಿಚಾರಕರಾದ ಶ್ರೀ ವೆಂಕಟರಮಣರವರು ತೋರಿದ ಅವಿರತ ಪ್ರಯತ್ನ ಮತ್ತು ಅರ್ಪಣಾ ಮನೋಭಾವವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.
ಹಾಗೆಯೇ ತಂಡಕ್ಕೆ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ಶಾಲಾ ಶಿಕ್ಷಕಿ ವಿ ಎಸ್ ಶ್ರೀಲೇಖಾ, ಕಾವ್ಯ ಲೋಕೇಶ್, ದೈಹಿಕ ಶಿಕ್ಷಕ ಸಿ ಎಚ್ ಎಮ್ ವಿಕ್ರಮಜೀತ್ ಸಿಂಗ್ ರನ್ನು ಪ್ರಶಂಸಿಸಿದರು
.
What's Your Reaction?






