ತ್ಯಾಗ ಮತ್ತು ಬಲಿದಾನದ ಸಂಕೇತ್ ಬಕ್ರೀದ್: ಸಮಾನತೆ ಸಾರುವ ಪವಿತ್ರ ಬಕ್ರೀದ್

ಬರಹ: ಆಶಿಕ್ ಕೊಡಗು
ಕೊಡಗು ಬಕ್ರೀದ್ ಅಂದರೆ ಭಕ್ತಿಗೆ, ಶ್ರೇಷ್ಠತೆಯ ಹಬ್ಬ. ದೇವರ ಆದೇಶದ ಮುಂದೆ ತನ್ನ ಇಷ್ಟವನ್ನು ತ್ಯಾಗ ಮಾಡುವುದು, ಸಹೃದಯತೆ ಹಾಗೂ ಸಮಾನತೆ ಎಂಬ ಮೌಲ್ಯಗಳನ್ನು ಪಾಲಿಸುವುದು ಈ ಹಬ್ಬದ ತತ್ವ ಇಂತಹ ಹಬ್ಬಗಳು ಮಾನವೀಯ ಮೌಲ್ಯಗಳನ್ನು ಪುನರುಚ್ಚರಿಸುವ ಸಂದರ್ಭಗಳಾಗಿವೆ. ಬಕ್ರೀದ್, ಅಥವಾ ಈದ್-ಉಲ್- ಅಧಾ, ಇಸ್ಲಾಮಿಕ ಧರ್ಮದಲ್ಲಿ ಅತ್ಯಂತ ಮಹತ್ವಪೂರ್ಣವಾದ ಹಬ್ಬಗಳಲ್ಲೊಂದಾಗಿದೆ.ಇದನ್ನು "ತ್ಯಾಗದ ಹಬ್ಬ" ಎಂಬುದಾಗಿ ಕರೆಯಲಾಗುತ್ತದೆ. ಪ್ರತಿ ವರ್ಷವೂ ದುಲ್ ಹಿಜ್ಜ ಎಂಬ ಇಸ್ಲಾಮಿಕ್ ತಿಂಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಹಜ್ ಯಾತ್ರೆಯ ಅಂತ್ಯಕ್ಕೂ ಸಹ ಪೂರಕವಾಗಿದೆ.
ಬಕ್ರೀದ್ ಹಬ್ಬದ ಹಿನ್ನೆಲೆಯೆಂದರೆ ಪ್ರವಾದಿ ಇಬ್ರಾಹಿಂ ರವರಿಗೆ ಸಂಬಂಧಪಟ್ಟಿದ್ದಾಗಿದೆ.ದೇವರ ಆದೇಶದಂತೆ ತನ್ನ ಪ್ರೀತಿಯ ಮಗ ಇಸ್ಮಾಯೀಲ್ ನನ್ನು ಬಲಿ ನೀಡಿ ತ್ಯಾಗ ಮಾಡುವ ನಿರ್ಧಾರವನ್ನು ಅವರು ತೆಗೆದುಕೊಂಡರು.ಆದರೆ ದೇವರು ಅವರ ನಿಷ್ಠೆ ಮತ್ತು ಭಕ್ತಿಯನ್ನು ಪರೀಕ್ಷಿಸಿ, ಮನುಷ್ಯನ ಬದಲು ಒಂದು ಆಡನ್ನು ನೀಡಿ ಅದನ್ನು ಬಲಿ ನೀಡುವಂತೆ ಕರುಣೆ ತೋರಿದನು.ಈ ಘಟನೆಯ ಸ್ಮರಣಾರ್ಥವಾಗಿ ಮುಸ್ಲಿಂ ಧರ್ಮೀಯರು ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ.ಬಕ್ರೀದ್ ಹಬ್ಬದಂದು ಮುಸ್ಲಿಂ ಸಮುದಾಯದವರು ಮುಂಜಾನೆ ವಿಶೇಷ ಈದ್ ನಮಾಜ್ ಮಾಡುತ್ತಾರೆ. ನಂತರ ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಕುರಿ,ಹಾಗೂ ಬಲಿಕೊಡಲು ಅನುವು ಮಾಡಿರುವ ಪ್ರಾಣಿಗಳನ್ನು ಬಲಿ ಕೊಡುತ್ತಾರೆ.ಈ ಬಲಿಯ ಮಾಂಸವನ್ನು ಮೂರು ಭಾಗಗಳಾಗಿ ವಿಭಜಿಸಲಾಗುತ್ತದೆ – ಒಂದು ಭಾಗವನ್ನು ಗರೀಬರಿಗೆ (ಬಡವರಿಗೆ), ಒಂದು ಭಾಗವನ್ನು ಬಂಧು-ಮಿತ್ರರಿಗೆ, ಹಾಗೂ ಮಿಕ್ಕೊಂದನ್ನು ತಮ್ಮ ಕುಟುಂಬಕ್ಕಾಗಿ ಉಳಿಸುತ್ತಾರೆ.
ಈ ಹಬ್ಬವು ಕೇವಲ ಆಹಾರ ಅಥವಾ ಆಚರಣೆಗಳಿಗಷ್ಟೇ ಸೀಮಿತವಲ್ಲ. ಇದು ಮಾನವೀಯತೆ, ಸಹಾನುಭೂತಿ ಮತ್ತು ಪರಸ್ಪರ ಸಹಾಯವನ್ನು ಒತ್ತಿಹೇಳುತ್ತದೆ. ಬಡವರು ಕೂಡ ಸಮಾನವಾಗಿ ಸಂತೋಷವನ್ನು ಅನುಭವಿಸುವುದಕ್ಕೆ ಇದು ಒಂದು ಸದುದಾಹರಣೆಯಾಗಿದೆ.
ನಾಡಿನ ಸಮಸ್ತ ಮುಸ್ಲಿಮ್ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು
What's Your Reaction?






