ಬೆಂಗಳೂರು ಜೆ.ಸಿ. ನಗರದಲ್ಲಿರುವ ಸೈನಿಕ ಸ್ಮಾರಕ ಸಂರಕ್ಷಿಸಿ: ಯದುವೀರ್ ಒಡೆಯರ್
ಮೈಸೂರು: ಆಪರೇಷನ್ ಸಿಂಧೂರ್ ನಂತರ ನಮ್ಮ ಭಾರತೀಯ ಸೇನಾ ಪಡೆಗಳ ಮೇಲೆ ಎಲ್ಲೆಡೆ ಗೌರವ ಹೆಚ್ಚಾಗಿದೆ. ಆದರೆ ಬೆಂಗಳೂರಿನಲ್ಲಿ ಸೇನಾ ಸ್ಮಾರಕಗಳನ್ನು ಅತ್ಯಂತ ನಿರ್ಲಕ್ಷ್ಯ ಮಾಡಿರುವುದು, ಕಿಡಿಗೇಡಿಗಳು ಇದನ್ನು ವಿರೂಪಗೊಳಿಸುತ್ತಿರುವುದು ಆಕ್ಷೇಪಾರ್ಹ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಸ್ಮಾರಕ ವೀಕ್ಷಿಸಿದ ಕೂಡಲೇ ಸಂಬಂಧಪಟ್ಟವರಿಗೆ ಪತ್ರ ಬರೆದಿರುವ ಸಂಸದರು ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.ಮೊದಲನೇ ಮಹಾಯುದ್ಧದ ಸ್ಮಾರಕವಾಗಿ ಬೆಂಗಳೂರಿನ ಜೆ.ಸಿ. ನಗರದಲ್ಲಿ ಸುಮಾರು ನೂರು ವರ್ಷಗಳ ಹಿಂದೆ ಇದನ್ನು ಮೈಸೂರು ಮಹಾರಾಜರು ಸ್ಥಾಪಿಸಿದ್ದರು ಎಂದು ಸಂಸದರು ನೆನಪಿಸಿದರು.
ಭಾರತೀಯ ಸೇನಾ ಪಿಆರ್ಟಿಸಿ ಮುಂಬಾಗದಲ್ಲಿರುವ ಈ ಸ್ಮಾರಕವನ್ನು ಕೆಲವು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ. ಇಡೀ ದೇಶದಲ್ಲಿ ಈಗ ಸೇನಾ ಯೋಧರ ಬಗ್ಗೆ, ಹುತಾತ್ಮರ ಬಗ್ಗೆ ವಿಶೇಷ ಗೌರವ ಇರುವಾಗ, ಸೈನಿಕರ ಸ್ಮಾರಕಗಳಿಗೆ ಅಗೌರವ ತೋರುವುದು ಸರಿಯಲ್ಲ ಎಂದು ಸಂಸದರು ತಿಳಿಸಿದರು.ಭಾರತೀಯ ಸೇನೆಯ ಶೌರ್ಯವನ್ನು ನಾವು ಶ್ಲಾಘಿಸುತ್ತಿರುವ ಈ ಸಮಯದಲ್ಲಿ. ಭಾರತಕ್ಕಾಗಿ ಪ್ರಾಣ ನೀಡಿದ ಹುತಾತ್ಮರ ಗೌರವವನ್ನು ನಾವು ರಕ್ಷಿಸಲು ಸಾಧ್ಯವಾಗದಿರುವುದು ತೀವ್ರ ದುರದೃಷ್ಟಕರ ಎಂದು ಯದುವೀರ್ ತಿಳಿಸಿದರು.
ಇಂಥ ಸ್ಮಾರಕಗಳಿಗೆ ಗೌರವ ಕೊಡಲು ಆಗದವರು, ಇದನ್ನು ರಕ್ಷಿಸಿಕೊಳ್ಳಲು ಆಗದವರು ಕೂಡಲೇ ಇದನ್ನು ಭಾರತೀಯ ಸೇನೆಗೆ ವಹಿಸಿಕೊಡಬೇಕು. ಇಲ್ಲವೇ ಭಾರತೀಯ ಸೇನೆಯೇ ಇದನ್ನು ಸ್ವಾಧೀನಪಡಿಸಿಕೊಂಡು ನಿರ್ವಹಣೆ ಮಾಡಿದರೆ ನಮ್ಮ ಯೋಧರಿಗೆ ಗೌರವ ಸಿಗುವಂತಾಗುತ್ತದೆ ಎಂದು ತಿಳಿಸಿದರು.ಈ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಮತ್ತು ಭಾರತೀಯ ಸೇನೆಗೆ ಪತ್ರ ಬರೆದಿದ್ದು, ಈ ಸ್ಮಾರಕಕ್ಕೆ ಗೌರವ ಸಿಗುವಂತಾಗಬೇಕು. ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದರು.
What's Your Reaction?






