ಡ್ರಾಪ್ ನೀಡಿದ ಬೈಕ್ ಸವಾರನನ್ನೇ ಕುಡಿದ ಮತ್ತಿನಲ್ಲಿ ಚಾಕುವಿನಿಂದ ಹಲ್ಲೆ
ಬೆಂಗಳೂರು: ಕುಡಿದ ಮತ್ತಿನಲ್ಲಿ ಡ್ರಾಪ್ ಪಡೆದುಕೊಂಡು ದ್ವಿಚ್ರಕವಾಹನ ಸವಾರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ. ಹೆಚ್.ಎಸ್. ಸಂದೀಪ್ ಹಾಗೂ ಶ್ಯಾಮ್ ಎಂಬುವರನ್ನು ಬಂಧಿಸಲಾಗಿದೆ.
ಬಂಧಿತರಿಂದ ಸುಮಾರು 2.20 ಲಕ್ಷ ಮೌಲ್ಯದ ಬೈಕ್, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ಒದಗಿಸಿದ್ದಾರೆ.
ಘಟನೆಯ ಹಿನ್ನೆಲೆ ಹೀಗಿದೆ: ಮಾರ್ಚ್ 25ರ ಬೆಳಗಿನ ಜಾವ 2.30ರ ವೇಳೆ ವ್ಯಕ್ತಿಯೊಬ್ಬರು ತನ್ನ ಬೈಕ್ನಲ್ಲಿ ತೆರಳುವಾಗ ಹುಣಸಮಾರನಹಳ್ಳಿ ಬಳಿ ಇಬ್ಬರು ಆರೋಪಿಗಳು ಡ್ರಾಪ್ ನೀಡುವಂತೆ ಕೇಳಿಕೊಂಡಿದ್ದರು. ಇಬ್ಬರನ್ನು ಕೂರಿಸಿಕೊಂಡು ಹೊಸಹಳ್ಳಿಯ ರಸ್ತೆ ಬಳಿ ಬರುತ್ತಿದ್ದಂತೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದರು.
ಬೈಕ್ನಿಂದ ಕೆಳಗಿಳಿಯುತ್ತಿದ್ದಂತೆ ಬೆದರಿಸಿ ಚಾಕು ಹಾಗೂ ಹೆಲ್ಮೆಟ್ನಿಂದ ಹಲ್ಲೆ ಮಾಡಿದ್ದಾರೆ.
ಬಂಧಿತರ ಮೇಲೆ ಕಳ್ಳತನ ಪ್ರಕರಣಗಳು ದಾಖಲು: ಅವಾಚ್ಯ ಶಬ್ಧಗಳಿಂದ ನಿಂದಿಸಿ ವ್ಯಕ್ತಿಯ ಬೈಕ್, ಪರ್ಸ್ ಹಾಗೂ ಮೊಬೈಲ್ ಕಸಿದು ಪರಾರಿಯಾಗಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಹುಣಸಮಾರನಹಳ್ಳಿ ನಿವಾಸಿಗಳಾದ ಇಬ್ಬರನ್ನು ಬಂಧಿಸಲಾಗಿದೆ. ಇಬ್ಬರು ಮೇಲೂ ತಲಾ ಒಂದು ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಚಿಕ್ಕಜಾಲ ಪೊಲೀಸರು ಮಾಹಿತಿ ನೀಡಿದ್ದಾರೆ.