ದುಬೈನಿಂದ ಬಂದು ಪತ್ನಿಯನ್ನು ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ!
ಬೆಂಗಳೂರು: ದುಬೈನಿಂದ ಹಿಂತಿರುಗಿದ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆಮಾಡಿ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತರನ್ನು ಧರ್ಮಶೀಲಂ (30) ಮತ್ತು ಆತನ ಪತ್ನಿ ಮಂಜು (27) ಎಂದು ಗುರುತಿಸಲಾಗಿದೆ. ಧರ್ಮಶೀಲಂ ದುಬೈನಲ್ಲಿ ಮೇಸ್ತ್ರಿ ಆಗಿ ಕೆಲಸ ಮಾಡುತ್ತಿದ್ದು, 2022 ರಲ್ಲಿ ಮದುವೆಯಾಗಿದ್ದ. ಇತ್ತೀಚೆಗೆ ದುಬೈ ನಿಂದ ವಾಪಸಾಗಿದ್ದ ಎನ್ನಲಾಗಿದೆ. ಮಂಜು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಪೊಲೀಸರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ದಂಪತಿಗಳ ನಡುವೆ ವೈವಾಹಿಕ ಕಲಹವಿತ್ತು ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಮನೆಯಲ್ಲಿ ವಾಗ್ವಾದ ನಡೆದಿದೆ. ಈ ಸಂದರ್ಭ ಧರ್ಮಶೀಲಂ ಪತ್ನಿ ಮಂಜುವನ್ನು ಹತ್ಯೆಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.