ಮಗುವಿಗೆ ಎದೆಹಾಲುಣಿಸಲು ನಿರಾಕರಿಸಿದ ಬಾಣಂತಿ; ನನ್ನ ಮಗು ಅಲ್ಲ, ನಾನು ಬೆಳೆಸಲ್ಲ ಎಂದ ಮಹಿಳೆ !
ಗೋರಖ್ಪುರ, ಡಿ. 18:ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆಯೊಬ್ಬಳು ಹೆರಿಗೆಯ ಬಳಿಕ ಮಗುವಿಗೆ ಎದೆಹಾಲು ಕುಡಿಸಲು ನಿರಾಕರಿಸಿ, ಮಗುವನ್ನು ಬೆಳೆಸುವುದಿಲ್ಲ ಎಂದು ಹಠ ಹಿಡಿದ ಘಟನೆ ನಡೆದಿದೆ. ಈ ಘಟನೆ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರಲ್ಲಿ ಅಚ್ಚರಿ ಮೂಡಿಸಿದೆ.
ಆಸ್ಪತ್ರೆ ಮೂಲಗಳ ಪ್ರಕಾರ, ಹೆರಿಗೆಯ ನಂತರ ಮಗುವಿಗೆ ಹಾಲುಣಿಸುವಂತೆ ವೈದ್ಯರು ಹಾಗೂ ಕುಟುಂಬದವರು ಮನವಿ ಮಾಡಿದರೂ ಮಹಿಳೆ ಅದಕ್ಕೆ ಒಪ್ಪಲಿಲ್ಲ. ತನ್ನನ್ನು ಬಿಟ್ಟುಹೋದ ಪತಿಯ ಮಗುವನ್ನು ತಾನು ಬೆಳೆಸುವುದಿಲ್ಲ ಎಂದು ಆಕೆ ಹೇಳಿದ್ದಾಳೆ ಎಂದು ತಿಳಿದುಬಂದಿದೆ.
ಮಹಿಳೆಯ ಹೇಳಿಕೆಯಂತೆ, ಆಕೆಯ ಪತಿ ಕೆಲವು ತಿಂಗಳ ಹಿಂದೆ ಬೇರೆ ಮಹಿಳೆಯೊಂದಿಗೆ ಸಂಬಂಧ ಹೊಂದಿ ತನ್ನನ್ನು ತೊರೆದಿದ್ದಾನೆ. ಪತಿ ಜವಾಬ್ದಾರಿಯಿಂದ ದೂರವಾದ ಸ್ಥಿತಿಯಲ್ಲಿ ತಾನು ಒಬ್ಬಳೇ ಮಗುವನ್ನು ಸಾಕುವುದು ಅಸಾಧ್ಯ ಎಂದು ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
ಈ ವಿಷಯ ತಿಳಿದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಹಿಳೆಯನ್ನು ಮನವೊಲಿಸಲು ಪ್ರಯತ್ನಿಸಿದರು. ಇದೇ ವೇಳೆ, ಮಗುವನ್ನು ದತ್ತು ಪಡೆಯಲು ಆಸಕ್ತಿ ತೋರಿದವರೂ ಆಸ್ಪತ್ರೆಗೆ ಬಂದಿದ್ದರು.
ಸತತವಾಗಿ ಸುಮಾರು 48 ಗಂಟೆಗಳ ಕಾಲ ನಡೆದ ಸಮಾಧಾನ ಪ್ರಯತ್ನಗಳ ನಂತರ, ಕೊನೆಗೆ ಮಹಿಳೆ ತನ್ನ ನಿರ್ಧಾರವನ್ನು ಬದಲಿಸಿಕೊಂಡು ಮಗುವನ್ನು ತನ್ನ ಜೊತೆ ಇಟ್ಟುಕೊಂಡು ಬೆಳೆಸುವುದಕ್ಕೆ ಒಪ್ಪಿಕೊಂಡಿದ್ದಾಳೆ. ತಾಯಿಯ ನಿರ್ಧಾರ ಬದಲಾವಣೆಯಿಂದ ಆಸ್ಪತ್ರೆ ಸಿಬ್ಬಂದಿ ನೆಮ್ಮದಿಯ ಉಸಿರೆಳೆದಿದ್ದಾರೆ.
ಮಹಿಳೆಯು ಒಂದು ವರ್ಷದ ಹಿಂದೆ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದು, ಪತಿಯೊಂದಿಗೆ ಬಿಹಾರದ ದರ್ಭಾಂಗದಲ್ಲಿ ವಾಸವಾಗಿದ್ದರು. ನಂತರ ಪತಿ ಆಕೆಯನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿಯೇ ತೊರೆದುಹೋಗಿದ್ದಾನೆ ಎನ್ನಲಾಗಿದೆ. ಗರ್ಭಿಣಿಯಾಗಿದ್ದ ಆಕೆ ಪತಿ ವಾಪಸ್ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿ ಇದ್ದರೂ, ಮಗುವಿನ ಜನನದ ನಂತರವೂ ಆತ ಸಂಪರ್ಕಿಸದ ಕಾರಣ ಆಕೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.