ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ಎ.ಎಸ್.ಪೊನ್ನಣ್ಣ
ಮಡಿಕೇರಿ; ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ( ಸದನ ಸಮಿತಿ) ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರನ್ನು ಸರ್ಕಾರ ನೇಮಕಾತಿ ಮಾಡಿದೆ.
ಕರ್ನಾಟಕ ಲೋಕಸೇವಾ ಆಯೋಗ( KPSE) ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು ಸರ್ಕಾರಿ ಉದ್ಯೋಗಗಳಾದ ಕೆ.ಎ.ಎಸ್,ಗ್ರೂಪ್ ಎ,ಗ್ರೂಪ್ ಬಿ,ಗ್ರೂಪ್ ಸಿ,ಗ್ರೂಪ್ ಡಿ ಹುದ್ದೆಗಳಿಗೆ ಆಯ್ಕೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಂಸ್ಥೆಯಾಗಿದೆ.
ಸರ್ಕಾರಿ ಉದ್ಯೋಗಕ್ಕಾಗಿ ನೇರ ನೇಮಕಾತಿ, ಸ್ಪರ್ಧಾತ್ಮಕ ಪರೀಕ್ಷೆ, ಮುಂತಾದ ಆಯ್ಕೆ ಪ್ರಕ್ರಿಯೆ ಗಳು ಈ ಸಂಸ್ಥೆಯ ವತಿಯಿಂದ ನಡೆಯುತ್ತದೆ. ಎ.ಎಸ್.ಪೊನ್ನಣ್ಣ ನವರು ಈ ಸಂಸ್ಥೆಯ ಆಡಳಿತಾತ್ಮಕ ಬದಲಾವಣೆಗಾಗಿ ರಚಿಸಲಾದ ಸದನ ಸಮಿತಿಯ ಸದಸ್ಯರಾಗಿ ಸ್ಥಾನ ಪಡೆದಿರುವುದು ಕೊಡಗು ಜಿಲ್ಲೆಯ ಪಾಲಿಗೆ ವರದಾನವಾಗಿದೆ ಎಂದು ಭಾವಿಸಲಾಗಿದೆ.
1956 ರಿಂದ ಕೊಡಗು ಜಿಲ್ಲೆ ಕರ್ನಾಟಕ ರಾಜ್ಯದಲ್ಲಿ ವಿಲೀನವಾದ ನಂತರ ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಜಿಲ್ಲೆಗೆ ಅನ್ಯಾಯವಾಗುತ್ತಿದೆ ಎಂಬ ಕೊರಗು ಕೇಳಿ ಬರುತ್ತಿದ್ದು ಈಗ ಪೊನ್ನಣ್ಣ ನವರ ಪ್ರವೇಶದಿಂದ ಕೊಡಗಿನ ಯುವ ಸಮುದಾಯಗಳಿಗೆ ಸರ್ಕಾರಿ ಉದ್ಯೋಗದ ಆಯ್ಕೆಯಲ್ಲಿ ವಿಫುಲ ಅವಕಾಶಗಳೊಂದಿಗೆ ನ್ಯಾಯ ದೊರಕುವ ಭರವಸೆ ಸಿಕ್ಕಿದೆ.