ಹಾಡಿ ನಿವಾಸಿಗಳಿಗೆ ಎ.ಎಸ್.ಪೊನ್ನಣ್ಣ ನವರಿಂದ ರಸ್ತೆ ಭಾಗ್ಯ
ವಿರಾಜಪೇಟೆ; ಹುಟ್ಟಿನಿಂದಲೇ ರಸ್ತೆಯನ್ನೇ ಕಾಣದೆ ಬೇರೆಯವರ ತೋಟದ ನಡುವೆ ನುಗ್ಗಿ ಪ್ರಯಾಸದಿಂದ ಸಾಗಿ ಜೀವನ ನಡೆಸುತ್ತಿದ್ದ ಹಾಡಿಯ ನಿವಾಸಿಗಳಿಗೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರ ಪ್ರಯತ್ನದಿಂದ ಸುಸಜ್ಜಿತ ರಸ್ತೆಯ ಭಾಗ್ಯ ಲಭ್ಯವಾಗಿದೆ.
ಕಾನೂರು ಪಂಚಾಯತ್ ವ್ಯಾಪ್ತಿಯ ನೀರುಗುಂಡಿ ಪೈಸಾರಿ ಹಾಗೂ ಕೇಚಮನೆ ಹಾಡಿ ಎಂಬ ಎರಡು ಕಾಲೋನಿಗಳ ಜನರ ಮನೆಗೆ ತೆರಳಲು ಯಾವುದೇ ರಸ್ತೆ ವ್ಯವಸ್ಥೆ ಇರಲಿಲ್ಲ. ಓಡಾಡಲು ಬೇರೆಯವರ ತೋಟಕ್ಕಾಗಿ ಗಿಡಗಳ ನಡುವೆ ಓಡಾಡಬೇಕಿತ್ತು. ಕಾಫಿ ಫಸಲು ಇರುವ ಸಮಯದಲ್ಲಿ ಕಾಡಿನ ಒಳಗೆ ಬಹುದೂರ ಕ್ರಮಿಸಿ ಮುಖ್ಯ ರಸ್ತೆಗೆ ಬರುತ್ತಿದ್ದರು.ಹಲವು ದಶಕಗಳಿಂದ ತಮ್ಮ ಬವಣೆಯನ್ನು ಸರ್ಕಾರದ ಮುಂದೆ,ಜನಪ್ರತಿನಿಧಿಗಳ ಮುಂದೆ ಇಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ಸಮಸ್ಯೆ ಶಾಸಕ ಪೊನ್ನಣ್ಣ ನವರ ಗಮನಕ್ಕೆ ಬಂದಾಗ ವಿಶೇಷ ಪ್ರಕರಣ ಎಂದು ಪರಿಗಣಿಸಿ ಎರಡೂ ಕಾಲೋನಿಗಳಿಗೆ ರಸ್ತೆ ನಿರ್ಮಾಣಕ್ಕೆ ತಮ್ಮ ನಿಧಿಯಿಂದ ಅನುದಾನ ಒದಗಿಸಿ ನಿವಾಸಿಗಳ ಬವಣೆಯನ್ನು ನಿವಾರಿಸಿದ್ದಾರೆ. ತಮ್ಮ ಬಹುಕಾಲದ ಬೇಡಿಕೆ ಈಡೇರಿದ ಹಿನ್ನಲೆ ಕಾಲೋನಿ ನಿವಾಸಿಗಳಾದ ದಿವ್ಯಕುಮಾರ್,ಗಜೇಂದ್ರ, ಚೇತನ್,ಉಮೇಶ್ ಮತ್ತಿತರರು ಸ್ಥಳೀಯ ಮುಖಂಡರಾದ ಸಿದ್ದು ನಾಚಪ್ಪ ನವರೊಂದಿಗೆ ಪೊನ್ನಣ್ಣ ನವರ ಗೃಹ ಕಛೇರಿಗೆ ಆಗಮಿಸಿ ಶಾಸಕರಿಗೆ ಧನ್ಯವಾದ ಅರ್ಪಿಸಿದರು.