ಡಾ.ಮಂತರ್ಗೌಡ ಅವರ ಅಭಿವೃದ್ಧಿ ಕೆಲಸವನ್ನು ಕಂಡು ಬಿಜೆಪಿ ಭ್ರಮನಿರಸನಗೊಂಡಿದೆ:, ಬಿ.ಬಿ ಸತೀಶ್
ಸೋಮವಾರಪೇಟೆ:ಬಿಜೆಪಿ ಶಾಸಕರು 25 ವರ್ಷಗಳಲ್ಲಿ ಮಾಡದ ಅಭಿವೃದ್ಧಿ ಕಾಮಗಾರಿಗಳನ್ನು ಹಾಲಿ ಶಾಸಕರಾದ ಡಾ.ಮಂತರ್ಗೌಡ ಅವರು ಎರಡೂವರೆ ವರ್ಷಗಳಲ್ಲಿ ಮಾಡಿದ್ದಾರೆ ಎಂದು ಬ್ಲಾಕ್ ಅಧ್ಯಕ್ಷ ಬಿ.ಬಿ.ಸತೀಶ್ ಹೇಳಿದರು. ಡಾ.ಮಂತರ್ಗೌಡ ಅವರ ಅಭಿವೃದ್ಧಿ ಕೆಲಸವನ್ನು ಕಂಡು ಬಿಜೆಪಿ ಭ್ರಮನಿರಸನಗೊಂಡು, ಪ್ರತಿಭಟನೆ ನೆಪದಲ್ಲಿ ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಸಂತೋಷ ಪಡುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವುದನ್ನು ನಿಲ್ಲಿಸಿಬೇಕು, ಚುನಾವಣೆ ಸಂದರ್ಭದಲ್ಲಿ ಮಾತ್ರ ಅವಶ್ಯಕತೆ ಇದ್ದಷ್ಟು ರಾಜಕೀಯ ಮಾಡಿದರೆ, ವ್ಯವಸ್ಥೆಗೂ ಒಳ್ಳೆಯದು ಎಂದು ಹೇಳಿದ ಅವರು, ಕ್ಷೇತ್ರದ ಜನರು ಬಿಜೆಪಿಯನ್ನು ಮರೆಯುತ್ತಿದ್ದಾರೆ ಎಂಬ ಆತಂಕದಿಂದ ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಎಂದು ದೂರಿದರು. ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಹೆಚ್ಚಿನ ಬೂತ್ಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬೀಳುತ್ತಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯವಾಗಿದೆ.
ಆದರೂ ಕಳೆದ 25 ವರ್ಷಗಳಿಂದ ತೋಳೂರುಶೆಟ್ಟಳ್ಳಿ, ಕೂತಿ ಮಾರ್ಗದ ರಸ್ತೆ ಅಭಿವೃದ್ಧಿಗೆ ಅಂದಿನ ಬಿಜೆಪಿ ಶಾಸಕರು ಅನುದಾನ ಕೊಡಲಿಲ್ಲ. ರಸ್ತೆ ಮಾಡಲು ಕಾಂಗ್ರೆಸ್ ಶಾಸಕರು ಗೆದ್ದು ಬರಬೇಕಾಯಿತು ಎಂದು ಟೀಕಿಸಿದರು. ಡಾ.ಮಂತರ್ಗೌಡ ಅವರು, ಅಲೇಕಟ್ಟೆ ರಸ್ತೆಯಿಂದ ಹರಪಳ್ಳಿ ಗ್ರಾಮದ ವರೆಗೆ ರಸ್ತೆ ಕಾಮಗಾರಿಗೆ 20 ಕೋಟಿ ರೂ.ಗಳ ಅನುದಾನ ಕಲ್ಪಿಸಿದ್ದಾರೆ. ಬಹುತೇಕ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಗುಣಮಟ್ಟದ ಕಾಮಗಾರಿ ನಡೆದಿರುವ ಬಗ್ಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಅಲೇಕಟ್ಟೆ ರಸ್ತೆಯಲ್ಲಿ ಸ್ವಲ್ಪ ಭಾಗ ಕಾಂಕ್ರೀಟಿಕರಣವಾಗಬೇಕಿದೆ.
ಕಳೆದ ಮೇಯಿಂದ ನವೆಂಬರ್ ತನಕ ಮಳೆಗಾಲವಿತ್ತು. ರಸ್ತೆ ಬದಿಯಲ್ಲಿ ಮರ ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಸಿಗಬೇಕಾದ ಅನುಮತಿ ವಿಳಂಬವಾಗಿರುವುದರಿಂದ ಒಂದೆರಡು ಕಿ.ಮಿ.ಕಾಮಗಾರಿ ವಿಳಂಬವಾಗಿದೆ. ಮಾರ್ಚ್ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಇಂಜಿನಿಯರ್ಗಳು ತಿಳಿಸಿದ್ದಾರೆ. ಈ ಸಮಸ್ಯೆಗಳು ಬಿಜೆಪಿ ಮುಖಂಡರಿಗೂ ಗೊತ್ತಿರುವ ವಿಷಯವಾಗಿದೆ. ಆದರೂ ಪ್ರತಿಭಟನೆ ನೆಪದಲ್ಲಿ ರಸ್ತೆಯಲ್ಲಿ ಬಾಳೆಗಿಡ ನೆಟ್ಟು, ಶಾಸಕರಿಗೆ ಧಿಕ್ಕಾರ ಕೂಗುವುದು ಖಂಡನೀಯ ಎಂದು ಹೇಳಿದರು. ಪ್ರತಿಭಟನೆಯಲ್ಲಿದ್ದ ಅನೇಕರು ಬಿಜೆಪಿ ಶಾಸಕರಿದ್ದ ಸಂದರ್ಭ ಗುತ್ತಿಗೆದಾರರಾಗಿ ಸಾಧನೆ ಮಾಡಿದವರು.
ಕೆಲವರನ್ನು ಕಪ್ಪುಪಟ್ಟಿಗೆ ಸೇರಿಸುತ್ತೇನೆ ಎಂದು ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಅವರು ಅಂದೇ ಎಚ್ಚರಿಕೆ ನೀಡಿದ್ದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗಿತ್ತು. ಈಗ ಅವರುಗಳು ರಸ್ತೆಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಎರಡೂವರೆ ವರ್ಷಗಳಲ್ಲಿ ಮಡಿಕೇರಿ ಕ್ಷೇತ್ರö್ಕಕೆ 1700 ಕೋಟಿ ರೂ.ಗಳಷ್ಟು ಅನುದಾನ ಹಾಲಿ ಶಾಸಕರು ತಂದಿದ್ದಾರೆ.
ಬಿಜೆಪಿ ಮುಖಂಡರಿಗೆ ಅನುಮಾನವಿದ್ದರೆ, ಇಲಾಖೆಗಳ ಮೂಲಕ ಮಂಜೂರಾದ ಕಾಮಗಾರಿಗಳು, ಪ್ರಗತಿಯಲ್ಲಿರುವ ಕಾಮಗಾರಿಗಳು ಹಾಗು ಪೂರ್ಣಗೊಂಡ ಕಾಮಗಾರಿಗಳ ಬಗ್ಗೆ ಮಾಹಿತಿ ಹಕ್ಕಿನಲ್ಲಿ ವಿವರ ಪಡೆದುಕೊಳ್ಳಬಹುದು ಎಂದು ಹೇಳಿದರು.
ಗೋಷ್ಠಿಯಲ್ಲಿ ಬ್ಲಾಕ್ ಮಹಿಳಾ ಘಟಕ ಅಧ್ಯಕ್ಷೆ ಜಾನಕಿ ವೆಂಕಟೇಶ್, ಬ್ಲಾಕ್ ಕಾರ್ಯದರ್ಶಿ ಕೆ.ಎಸ್.ಸುನಿಲ್, ಪ್ರಮುಖರಾದ ಬಿ.ಬಿ.ಬಸವರಾಜ್, ವಿ.ಎ.ಲಾರೆನ್ಸ್, ಎಸ್.ಐ.ಚೇತನ್ ಇದ್ದರು.