ಬೆಂಗಳೂರು ಎಟಿಎಂ ವ್ಯಾನ್ ದರೋಡೆ | ದರೋಡೆ ಮಾಡಲು ಬಂದಿದ್ದು ಎರಡು ಕೋಟಿ ಆದರೆ ಸಿಕ್ಕಿದ್ದು ಏಳು ಕೋಟಿ! : ದರೋಡೆ ಮಾಡಿದ ಗ್ಯಾಂಗಿಗೆ ಕಾದಿತ್ತು ಶಾಕ್
ಬೆಂಗಳೂರು, ನ. 30: ನಗರದಲ್ಲಿ ನಡೆದಿದ್ದ 7.11 ಕೋಟಿ ರೂ.ಗಳ ಭಾರೀ ಎಟಿಎಂ ವ್ಯಾನ್ ದರೋಡೆ ಪ್ರಕರಣದಲ್ಲಿ ಬಂಧಿತರ ವಿಚಾರಣೆಯಿಂದ ಮತ್ತಷ್ಟು ಆಶ್ಚರ್ಯಕಾರಿ ಸಂಗತಿಗಳು ಬಯಲಾಗುತ್ತಿವೆ. ಕೇವಲ 2 ಕೋಟಿ ರೂ. ದೋಚುವ ಉದ್ದೇಶದಿಂದ ಸ್ಕೆಚ್ ಹಾಕಿದ್ದ ಗ್ಯಾಂಗ್, ಘಟನೆಯ ದಿನ 7 ಕೋಟಿಗೂ ಅಧಿಕ ಹಣ ಕೈಗೆ ಸಿಕ್ಕಿದ್ದು, ಆರೋಪಿಗಳೇ ದಿಗ್ಭ್ರಾಂತರಾಗಿದ್ದರೆಂಬುದು ತನಿಖೆಯಿಂದ ತಿಳಿದು ಬಂದಿದೆ.
ಮೂರು ತಿಂಗಳ ಕಾಲ ಪ್ಲಾನ್ ಮಾಡಿದ್ದ ಈ ದರೋಡೆಗೆ ಸಿಎಎಂಎಸ್ ಸಂಸ್ಥೆಯ ಮಾಜಿ ಉದ್ಯೋಗಿ ಕ್ಸೇವಿಯರ್ನೇ ಮಾಸ್ಟರ್ ಮೈಂಡ್ ಎನ್ನಲಾಗಿದೆ. ಎಟಿಎಂ ವಾಹನದಲ್ಲಿ 5 ಕೋಟಿಗಿಂತ ಹೆಚ್ಚು ಹಣ ಸಾಗಿಸುವುದು ನಿಯಮಬಾಹಿರ. “2 ಕೋಟಿ ರೂ. ಕದ್ದರೆ ದೊಡ್ಡ ಕೇಸ್ ಆಗೋದಿಲ್ಲ” ಎಂಬ ಕ್ಸೇವಿಯರ್ನ ಭರವಸೆಯ ಮಾತು ಗ್ಯಾಂಗ್ನ್ನು ಪ್ರೇರೇಪಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೊಂದು ಬಾಕ್ಸ್ನಲ್ಲಿ 50 ಲಕ್ಷ ರೂ. ಇರಬಹುದು ಎಂಬ ಲೆಕ್ಕದಲ್ಲಿ ಗ್ಯಾಂಗ್ ನಾಲ್ಕು ಬಾಕ್ಸ್ಗಳನ್ನು ಮಾತ್ರ ಶಿಫ್ಟ್ ಮಾಡಿತ್ತು. “ಇಷ್ಟೊಂದು ಸಾಕು, 2 ಕೋಟಿ ಸಿಗುತ್ತೆ” ಎಂಬ ಭಾವನೆಯಲ್ಲಿದ್ದ ಆರೋಪಿಗಳು, ಬಾಕ್ಸ್ಗಳನ್ನು ಚೀಲಗಳಿಗೆ ಖಾಲಿ ಮಾಡಿಕೊಂಡು ದಾರಿಯಲ್ಲೇ ಎಸೆದಿದ್ದರು. ಚಿತ್ತೂರಿನಲ್ಲಿ ಪ್ರಾಥಮಿಕ ಹಂಚಿಕೆಯಾಗಿದ್ದರೂ, ನಿಜವಾದ ಮೊತ್ತದ ಅರಿವು ಯಾರಿಗೂ ಇರಲಿಲ್ಲ.
ಕೊನೆಗೆ ಕುಪ್ಪಂ ಹತ್ತಿರ ಪಾಳು ಮನೆಯಲ್ಲಿ ಹಣ ಸುರಿದು ನೋಡಿದಾಗ “2 ಕೋಟಿಗೆ ಪ್ಲಾನ್… ಆದರೆ ಬಂದಿದ್ದು 7 ಕೋಟಿ!”
ಎಂದು ತಿಳಿದಾಗ ಗ್ಯಾಂಗ್ ಸದಸ್ಯರೇ ನಡುಗಿದ್ದಾರೆ. ಬ್ಯಾಂಕ್ ನ ದೊಡ್ಡ ಮೊತ್ತದ ಹಣವಾಗಿರುವುದು ತಿಳಿದು ಭಯಗೊಂಡ ಆರೋಪಿಗಳು, ಹಣ ಬಚ್ಚಿಟ್ಟು ವಿವಿಧ ದಿಕ್ಕುಗಳಿಗೆ ಪರಾರಿಯಾಗಿದ್ದರು.
ಚೆನ್ನೈ, ಕುಪ್ಪಂ, ಹೈದರಾಬಾದ್ ಸೇರಿದ ಬಳಿಕ, ಪೊಲೀಸರು ನಡೆಸಿದ ಸತತ ಕಾರ್ಯಾಚರಣೆಯಲ್ಲಿ ಒಟ್ಟು 9 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ಸು ಕಂಡಿದ್ದಾರೆ.