ಬೆಂಗಳೂರು: ಕಾರು ರಿವರ್ಸ್ ತೆಗೆಯುವಾಗ ಡಿಕ್ಕಿ: 11 ತಿಂಗಳ ಶಿಶು ದಾರುಣ ಮೃತ್ಯು
ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿಯಲ್ಲಿ ಕಾರಿನ ರಿವರ್ಸ್ ವೇಳೆ ಸಂಭವಿಸಿದ ದುರಂತದಲ್ಲಿ 11 ತಿಂಗಳ ಶಿಶುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ.
ಸೋಮವಾರ ಬೆಳಿಗ್ಗೆ ಸುಮಾರು 9.45ರ ಸುಮಾರಿಗೆ ನಡೆದ ಈ ಘಟನೆಗೆ ಗೊಲ್ಲರಹಟ್ಟಿ ನಿವಾಸಿ ಅಬ್ದುಲ್ಲಾ ಅವರ ಮಗು ಮಹಮ್ಮದ್ ಉಮರ್ ಫಾರೂಕ್ (11 ತಿಂಗಳು) ಬಲಿಯಾಗಿದ್ದಾನೆ. ಘಟನೆಯ ಸಂಬಂಧ ಕಾರು ಚಾಲಕ ಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಅಬ್ದುಲ್ಲಾ ಕುಟುಂಬವು ಸ್ವಾಮಿ ಅವರಿಗೆ ಸೇರಿದ ಮನೆಯಲ್ಲಿ ಬಾಡಿಗೆಗೆ ವಾಸಿಸುತ್ತಿತ್ತು. ಘಟನೆ ನಡೆದ ವೇಳೆ ಅಬ್ದುಲ್ಲಾ ಅವರ ಪತ್ನಿ ಮನೆಯೊಳಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಆಟವಾಡುತ್ತಿದ್ದ ಮಗು ತೆವಳುತ್ತಾ ಕಾರಿನ ಹತ್ತಿರಕ್ಕೆ ಹೋದಿದೆ. ಇದೇ ವೇಳೆ ಕೆಲಸಕ್ಕೆ ತೆರಳುತ್ತಿದ್ದ ಸ್ವಾಮಿ ಅವರು ಮಗುವನ್ನು ಗಮನಿಸದೆ ಕಾರನ್ನು ರಿವರ್ಸ್ ತೆಗೆದಿದ್ದು, ಕಾರಿನ ಚಕ್ರ ಹರಿದು ಮಗು ಸ್ಥಳದಲ್ಲೇ ಮೃತಪಟ್ಟಿದೆ.
ಚಾಲಕನ ನಿರ್ಲಕ್ಷ್ಯದಿಂದ ಈ ದಾರುಣ ಘಟನೆ ಸಂಭವಿಸಿದ್ದು, ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.