ಪಿಂಚಣಿ ಹಣಕ್ಕಾಗಿ ನಾಲ್ಕು ತಿಂಗಳು ಸಹೋದರಿಯನ್ನು ಗೃಹಬಂಧನದಲ್ಲಿಟ್ಟ ಅಣ್ಣಂದಿರು!
ಹಾವೇರಿ: ಪಿಂಚಣಿ ಹಣಕ್ಕಾಗಿ ಅಣ್ಣಂದಿರೇ ತಮ್ಮ ಸಹೋದರಿಯನ್ನು ನಾಲ್ಕು ತಿಂಗಳು ಗೃಹಬಂಧನದಲ್ಲಿಟ್ಟಿರುವ ಅಮಾನುಷ ಘಟನೆ ಹಾವೇರಿಯಲ್ಲಿ ನಡೆದಿದೆ.
ಬುಜಂಬಿ ಕೆ. ಕೋಟಿ ಎಂಬ ಮಹಿಳೆ, ತನ್ನ ಅಣ್ಣಂದಿರಾದ ಮಾಬುಸಾಬ್ ಮತ್ತು ಸಂಶುದ್ದೀನ್ ಅವರ ವಿರುದ್ಧ ಹಾವೇರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ. ತಾಯಿಯ ಮರಣದ ನಂತರ ತಿಂಗಳಿಗೆ ರೂ. 13,500 ಪಿಂಚಣಿ ಹಣವು ಬುಜಂಬಿಯ ಹೆಸರಿಗೆ ಬರುತ್ತಿರುವುದನ್ನು ತಿಳಿದ ಅಣ್ಣಂದಿರಿಬ್ಬರು ಆಕೆಯನ್ನು ಮನೆಯೊಳಗೆ ಬೀಗ ಹಾಕಿ, ಹೊರ ಜಗತ್ತಿನ ಸಂಪರ್ಕದಿಂದ ದೂರ ಇಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
“ನನ್ನ ಮೊಬೈಲ್, ಎಟಿಎಂ ಕಾರ್ಡ್ ಹಾಗೂ ಚಿನ್ನಾಭರಣವನ್ನೆಲ್ಲ ಕಸಿದುಕೊಂಡು, ನಾಲ್ಕು ತಿಂಗಳು ನನಗೆ ನರಕದ ಜೀವನವನ್ನೇ ಅನುಭವಿಸಬೇಕಾಯಿತು,” ಎಂದು ಕಣ್ಣೀರಿನಿಂದ ಬುಜಂಬಿ ಹೇಳಿದ್ದಾರೆ. ಸಹೋದರರಿಂದ ತಪ್ಪಿಸಿಕೊಂಡು ನೇರವಾಗಿ ಮಹಿಳಾ ಪೊಲೀಸ್ ಠಾಣೆಗೆ ಧಾವಿಸಿ ಅವರು ಘಟನೆಯನ್ನು ವಿವರಿಸಿದ್ದಾರೆ.
ಘಟನೆ ಕುರಿತು ಮೊದಲಿನಿಂದಲೇ ಪೊಲೀಸರಿಗೆ ಮಾಹಿತಿ ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದಿರುವುದಾಗಿ ಬುಜಂಬಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನನ್ನನ್ನು ಬದುಕಲು ಬಿಡಿ ಎಂದು ಬೇಡಿಕೊಂಡರೂ, ಯಾರೂ ಕಿವಿಗೊಡಲಿಲ್ಲ,” ಎಂದು ಅವರು ದೂರು ನೀಡಿದ್ದಾರೆ.
ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಮಹಿಳೆಗೆ ತ್ವರಿತ ನ್ಯಾಯ ಒದಗಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.