ದಟ್ಟಾರಣ್ಯಕ್ಕೆ ಅಕ್ರಮ ಪ್ರವೇಶಿಸಿ ಫೈರ್ ಕ್ಯಾಂಪ್, ರೀಲ್ಸ್: ಇಬ್ಬರ ವಿರುದ್ಧ ಪ್ರಕರಣ
ಚಾಮರಾಜನಗರ: ಸಂರಕ್ಷಿತ ಅರಣ್ಯದೊಳಗೆ ರಾತ್ರಿ ಹೊತ್ತು ಅಕ್ರಮವಾಗಿ ನುಗ್ಗಿ ಫೈರ್ ಕ್ಯಾಂಪ್ ಮಾಡಿ, ಅದನ್ನು ರೀಲ್ಸ್ ರೂಪದಲ್ಲಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ ಇಬ್ಬರು ಯುವಕರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿರುವ ಘಟನೆ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಚಾಮರಾಜನಗರ ತಾಲೂಕಿನ ಪುಣಜನೂರು ವಲಯದ ರಾಗಿಕಲ್ಲಮಡು ಅರಣ್ಯ ಭಾಗದಲ್ಲಿ ನ. 30ರಂದು ಈ ಘಟನೆ ನಡೆದಿದೆ. ಬೆಂಗಳೂರಿನ ಹನುಮಂತನಗರದ ಜಿ. ಹರ್ಷರಾಜ್ ಹಾಗೂ ಬ್ಯಾಟರಾಯನಪುರದ ಸತೀಶ್ ಕುಮಾರ್ ಎಂಬ ಯುವಕರು ಕೆಂಪು ಬಣ್ಣದ ಮಹೀಂದ್ರ ಥಾರ್ ನಲ್ಲಿ ಅರಣ್ಯದೊಳಗೆ ನುಗ್ಗಿ, ಕಾಡಿನ ಮಧ್ಯದಲ್ಲಿ ಫೈರ್ ಕ್ಯಾಂಪ್ ನಡೆಸಿ, ಅಲ್ಲೇ ರಾತ್ರಿ ವಾಸ್ತವ್ಯ ಮಾಡಿದ್ದಾಗಿ ಆರೋಪಿಸಲಾಗಿದೆ. ಬಳಿಕ ಆ ದೃಶ್ಯಗಳನ್ನು ರೀಲ್ಸ್ ರೂಪದಲ್ಲಿ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದರು.
ಅರಣ್ಯ ಪ್ರದೇಶಕ್ಕೆ ಅನಧಿಕೃತ ಪ್ರವೇಶ ಕುರಿತ ಮಾಹಿತಿ ತಿಳಿದ ತಕ್ಷಣ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅಧಿಕಾರಿಗಳಿಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದರು. ಸಚಿವರ ನಿರ್ದೇಶನದಂತೆ, ಅರಣ್ಯ ಅಧಿಕಾರಿಗಳು ಡಿಸೆಂಬರ್ 2ರಂದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.