ಅಡಿಗೆ ಅನಿಲ ವ್ಯತ್ಯಯ: ಸೋಮವಾರಪೇಟೆ ಪಟ್ಟಣದ ಹೋಟೆಲ್ ಹಾಗೂ ಬೇಕರಿಗಳಲ್ಲಿ ಆಹಾರ ನಿರೀಕ್ಷಕರಿಂದ ಪರಿಶೀಲನೆ
ಸೋಮವಾರಪೇಟೆ: ಅಡಿಗೆ ಅನಿಲ ವ್ಯತ್ಯಯದ ಹಿನ್ನಲೆಯಲ್ಲಿ ಪಟ್ಟಣದ ಹೋಟೆಲ್ ಹಾಗೂ ಬೇಕರಿಗಳ ಮೇಲೆ ಆಹಾರ ನಿರೀಕ್ಷಕರು ಮಂಗಳವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ಕೈಗೊಂಡರು.
ಆಹಾರ ನಿರೀಕ್ಷಕರಾದ ಯಶಸ್ವಿನಿ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ವಿವಿಧ ಹೋಟೆಲ್ಗಳು ಮತ್ತು ಬೇಕರಿಗಳಲ್ಲಿ ಬಳಸುತ್ತಿರುವ ಅನಿಲ ಸಿಲಿಂಡರ್ ಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಮಾತನಾಡಿದ ಅವರು, ವಾಣಿಜ್ಯ ಉದ್ದೇಶಗಳಿಗೆ ಕಾರ್ಯನಿರ್ವಹಿಸುವ ಹೋಟೆಲ್ ಹಾಗೂ ಬೇಕರಿಗಳು ಕಡ್ಡಾಯವಾಗಿ ವಾಣಿಜ್ಯ ಬಳಕೆಯ ಅಡಿಗೆ ಅನಿಲವನ್ನು ಮಾತ್ರ ಬಳಸಬೇಕು ಎಂದು ಸೂಚಿಸಿದರು.
ಗೃಹ ಬಳಕೆಗೆ ಮೀಸಲಾದ ಅನಿಲವನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸುವುದು ಕಾನೂನುಬಾಹಿರವಾಗಿದ್ದು, ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪರಿಶೀಲನೆಯ ಸಂದರ್ಭದಲ್ಲಿ ಕೆಲವು ಸ್ಥಳಗಳಲ್ಲಿ ಅಗತ್ಯ ಸೂಚನೆಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ನಿಯಮ ಪಾಲನೆಗೆ ವಿಶೇಷ ಗಮನ ಹರಿಸುವಂತೆ ತಿಳಿಸಲಾಯಿತು.
ಕಾರ್ಯಾಚರಣೆಯಲ್ಲಿ ಇಲಾಖೆಯ ಸಿಬ್ಬಂದಿಗಳಾದ ವಿನೋದ್, ಮುರುಳಿ ಸೇರಿದಂತೆ ಇತರರು ಇದ್ದರು.