ಸೌಜನ್ಯ ಕೊಲೆ ಪ್ರಕರಣ; ಕಾರಿನಲ್ಲಿ ಅಪಹರಿಸಿ ಕಾಲುವೆಯಲ್ಲಿ ಮೃತದೇಹ ಎಸೆದಿರುವ ಶಂಕೆ | ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

ಸೌಜನ್ಯ ಕೊಲೆ ಪ್ರಕರಣ; ಕಾರಿನಲ್ಲಿ ಅಪಹರಿಸಿ ಕಾಲುವೆಯಲ್ಲಿ ಮೃತದೇಹ ಎಸೆದಿರುವ ಶಂಕೆ |  ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
Photo credit: Tv 09

ಯಾದಗಿರಿ, ಅ.26: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಹೊರವಲಯದ ಕಾಲುವೆಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾದ ಘಟನೆ ಜಿಲ್ಲೆಯಾದ್ಯಂತ ಸಂಚಲನ ಸೃಷ್ಟಿಸಿದೆ.

ಹುಣಸಗಿ ತಾಲೂಕಿನ ಕೊಡೇಕಲ್ ಗ್ರಾಮದ ಸೌಜನ್ಯ (18) ಕಳೆದ ಕೆಲವು ದಿನಗಳಿಂದ ಕಾಣೆಯಾಗಿದ್ದು, ಕಾರಿನಲ್ಲಿ ಬಂದು ಅಪಹರಿಸಿ ಕೊಲೆಮಾಡಿ ಶವವನ್ನು ಕಾಲುವೆಯಲ್ಲಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.

ಮಗಳ ಅಪಹರಣ ಮತ್ತು ಕೊಲೆ ಕುರಿತು ಸೌಜನ್ಯದ ತಂದೆ ಶರಣಪ್ಪ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಚಿರು, ಪಾಂಡಾ ಮತ್ತು ರಾಜೇಶ್ ಎಂಬ ಮೂವರು ಯುವಕರು ಈ ಕೃತ್ಯಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಆದರೆ, ಪೊಲೀಸರ ನಿರ್ಲಕ್ಷ್ಯದಿಂದ ಪ್ರಕರಣ ತಕ್ಷಣ ದಾಖಲೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಮಗಳ ಕಾಣೆಯಾದ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಆಕೆ ಬದುಕುತ್ತಿದ್ದಳು,” ಎಂದು ಶರಣಪ್ಪ ಆರೋಪಿಸಿದ್ದಾರೆ.

ಘಟನೆಯ ನಂತರವೂ ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೊಲೀಸರ ವಾಹನ ತಡೆದು ಪ್ರತಿಭಟನೆ ನಡೆಸಿದರು. ಸೌಜನ್ಯಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದರು.