ಮಧ್ಯರಾತ್ರಿ ಪ್ರಿಯಕರನನ್ನು ಮನೆಗೆ ಕರೆತಂದ ಮಗಳು; ತಾಯಿ ವಿರೋಧಿಸಿದ್ದಕ್ಕೆ ಕೊಲೆ!
ಬೆಂಗಳೂರು: ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಉತ್ತರಹಳ್ಳಿಯಲ್ಲೊಂದು ಅಸಹಜ ಸಾವು ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ದೊರೆತಿದೆ. ಕಳೆದ ಶನಿವಾರ ವರದಿಯಾಗಿದ್ದ ನೇತ್ರಾವತಿ (34) ಅವರ ಸಾವು ಆತ್ಮಹತ್ಯೆ ಅಲ್ಲ, ಮಗಳು ಮತ್ತು ಪ್ರಿಯಕರ ಹಾಗೂ ಅವನ ಸ್ನೇಹಿತರ ಸಹಕಾರದಿಂದ ಮಾಡಿದ ಕೊಲೆ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ.
ನೇತ್ರಾವತಿಯವರ ಅಪ್ರಾಪ್ತ ಮಗಳು ಕೆಲಕಾಲದಿಂದ ಒಬ್ಬ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ತಾಯಿಗೆ ಈ ಸಂಬಂಧ ಇಷ್ಟವಾಗಿರಲಿಲ್ಲ. ಆದರೂ ಶನಿವಾರ ರಾತ್ರಿ, ಪ್ರಿಯಕರ ಮತ್ತು ಆತನ ಮೂವರು ಸ್ನೇಹಿತರನ್ನು ಮಗಳು ಮನೆಗೆ ಕರೆದುಕೊಂಡು ಬಂದಳು. ನೇತ್ರಾವತಿ ಅವರು ಇದನ್ನು ಕಂಡು ಆಕ್ರೋಶಗೊಂಡು ಮಗಳನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.
ಪೊಲೀಸರ ತನಿಖೆಯ ಪ್ರಕಾರ, ಜಗಳ ತೀವ್ರಗೊಂಡ ಬಳಿಕ ಮಗಳು ಹಾಗೂ ಹುಡುಗರು ಸೇರಿ ನೇತ್ರಾವತಿಯವರ ಬಾಯಿ ಮುಚ್ಚಿ, ಟವಲ್ನಿಂದ ಕುತ್ತಿಗೆ ಬಿಗಿದು, ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಕೃತ್ಯದ ನಂತರ, ಆತ್ಮಹತ್ಯೆ ಎಂದು ಬಿಂಬಿಸಲು ನೇತ್ರಾವತಿಯವರ ಕುತ್ತಿಗೆಗೆ ಸೀರೆ ಕಟ್ಟಿ ಫ್ಯಾನಿಗೆ ನೇತು ಹಾಕಿ, ಮನೆಯ ಬಾಗಿಲು ಲಾಕ್ ಮಾಡಿ ಪರಾರಿಯಾಗಿರುವುದು ತನಿಖೆಯಲ್ಲಿ ಹೊರಬಂದಿದೆ.
ಮರುದಿನ ಅಕ್ಕ ಕರೆ ಮಾಡಿದಾಗ ನೇತ್ರಾವತಿ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಸೋಮವಾರ ಮನೆಗೆ ಬಂದು ಕಿಟಿಕಿಯಿಂದ ನೋಡಿದಾಗ ನೇತ್ರಾವತಿ ಅವರು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾದರು.
ಮೊದಲಿಗೆ ಅಸಹಜ ಸಾವು ಎಂದು ಪ್ರಕರಣ ದಾಖಲಾಗಿತ್ತು.ಆದರೆ ಶವ ಸಂಸ್ಕಾರಕ್ಕೂ ಮಗಳು ಗೈರಾಗಿದ್ದು ಅನುಮಾನ ಮೂಡಿಸಿದೆ.
ಪೊಲೀಸರು ಮಗಳನ್ನು ಮತ್ತು ಆಕೆಯ ಪ್ರಿಯಕರನ ವಿಚಾರಣೆ ನಡೆಸಿ ಕೊಲೆ ರಹಸ್ಯ ಬಯಲಾಗಿದೆ.
ಘಟನೆಯ ನಂತರ ಅಜ್ಜಿ ಮನೆಗೆ ಬಂದ ಮಗಳು,“ಪ್ರಿಯಕರ ಬಂದಿದ್ದ. ಅಮ್ಮ ಪೊಲೀಸರಿಗೆ ಹೇಳುತ್ತೇನೆ ಎಂದರು. ನನ್ನ ಸ್ನೇಹಿತರು ಚಾಕು ತೋರಿಸಿ ಅಮ್ಮನನ್ನು ಕೊಂದು ನೇಣು ಹಾಕಿದ್ದಾರೆ. ಯಾರಿಗೂ ಹೇಳದಂತೆ ಬೆದರಿಸಿದ್ದಾರೆ” ಎಂದು ಸುಳ್ಳು ಕಥೆ ಹೇಳಿದ್ದಳು.
ಆದರೆ ದೊಡ್ಡಮ್ಮನ ಅನುಮಾನದಿಂದಲೇ ಪೊಲೀಸರು ಐವರನ್ನು ಬಂಧಿಸಿದ್ದಾರೆ. ನೇತ್ರಾವತಿಯವರ ಮಗಳು ಸೇರಿದಂತೆ ಬಂಧಿತರೆಲ್ಲರೂ ಅಪ್ರಾಪ್ತರು ಎಂದು ತಿಳಿದು ಬಂದಿದೆ.