ಕಾರ್ಮಿಕರ ಮಧ್ಯೆ ಕಲಹ,ಕೊಲೆಯಲ್ಲಿ ಅಂತ್ಯ;ಇಬ್ಬರಿಗೆ ಜೈಲು ಶಿಕ್ಷೆ ಪ್ರಕಟ 2020 ರಲ್ಲಿ ಬಿ.ಶೆಟ್ಟಿಗೇರಿಯಲ್ಲಿ ನಡೆದದ್ದೇನು ಗೊತ್ತೇ!
ವಿರಾಜಪೇಟೆ:ಕುಡಿಯುವ ನೀರಿನ ನೆಪ,ಕಾರಣ ಕೇಳಿದ ಪತಿ ಸ್ನೇಹಿತರಿಂದ ಕಾರ್ಮಿಕನನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಈರ್ವರು ಕಾರ್ಮಿಕರಿಗೆ ವಿರಾಜಪೇಟೆ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ನೀಡಿದೆ.
ಮೂಲತಃ ಕುಶಾಲನಗರ ರಾಣಿಗೇಟ್ ನಿವಾಸಿ ಹಾಲಿ ವಾಸ ಕುಟ್ಟಂದಿ ಗ್ರಾಮದ ನಿವಾಸಿ ನಾಮೇರ ಪ್ರಸನ್ನ ಅವರ ಲೈನ್ ಮನೆಯಲ್ಲಿ ವಾಸವಿರುವ ಜೇನು ಕುರುಬರ ತಿಮ್ಮ ಎಂಬುವವರ ಪುತ್ರ ರವಿ ಅಲಿಯಾಸ್ ಮಂಜು ಪ್ರ (21),ಕುಂದ ಗ್ರಾಮ ಪೆಗ್ಗಮೊಟ್ಟೆ ನಿವಾಸಿ ತಾತೀರ ಪವನ್ ಅವರ ಲೈನ್ ಮನೆ ನಿವಾಸಿ ಮತ್ತು ಹಾಲಿ ವಾಸ ಕುಟ್ಟಂದಿ ಗ್ರಾಮದ ನಿವಾಸಿ ಅಮ್ಮೇಕಂಡ ಡಾಲಿ ಎಂಬುವವರ ಲೈನ್ ಮನೆಯಲ್ಲಿ ವಾಸವಿರುವ ಜೇನುಕುರುಬರ ರಾಮು ಎಂಬುವವರ ಪುತ್ರ ವಿನೋದ್ ಅಲಿಯಾಸ್ ವಿನು (22) ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳು.
ತಿತಿಮತಿ ನೋಕ್ಯ ಗ್ರಾಮದ ನಿವಾಸಿ ಕಾಳೇಂಗಡ ಪ್ರಭು ಅಚ್ಚಯ್ಯ ಅವರು ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಹೊಂದಿರುವ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಜೇನು ಕುರುಬರ ರಾಜು ಅಲಿಯಾಸ್ ದೇವು ( 30 ವರ್ಷ) ಹತ್ಯೆಯಾದ ವ್ಯಕ್ತಿ.
ಘಟನೆಯ ವಿವರ; ತಿತಿಮತಿ ನೊಕ್ಯ ಗ್ರಾಮದ ನಿವಾಸಿ ಕಾಳೇಂಗಡ ಪ್ರಭು ಅಚ್ಚಯ್ಯ ಎಂಬುವವರು ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟ ಮತ್ತು ಗದ್ದೆಯನ್ನು ಹೊಂದಿದ್ದರು. ಕಾಫಿ ತೋಟದಲ್ಲಿ ಕರ್ತವ್ಯ ನಿರ್ವಹಿಸಲು ಜೇನು ಕುರುಬರ ರಾಜು ಅಲಿಯಾಸ್ ದೇವು ಎಂಬುವನನ್ನು ಗೊತ್ತುಪಡಿಸಿದ್ದರು.
ಈ ಮಧ್ಯೆ ಕೆ.ಡಿ. ನಾಗೇಶ್ ಎಂಬುವವರು ತನ್ನ ವಾಹನದಲ್ಲಿ ತಿತಿಮತಿಯಿಂದ ಬಿ.ಶೆಟ್ಟಿಗೇರಿ ಗ್ರಾಮದ ತೋಟಕ್ಕೆ ದಿನ ನಿತ್ಯ ಕಾರ್ಮಿಕರನ್ನು ಕೆಲಸಕ್ಕೆ ಕೊಂಡೊಯ್ಯುವುದು, ಬಳಿಕ ಸ್ವ ಸ್ಥಳಕ್ಕೆ ಕರೆದುಕೊಂಡು ಬರುವುದು ಕಾಯಕ ಮಾಡುತ್ತಿದ್ದನು. ತಾ. 08-05-2020 ರಂದು ಎಂದಿನಂತೆ ಬಿ.ಶೆಟ್ಟಿಗೇರಿ ಕಾಫಿ ತೋಟಕ್ಕೆ ಕಾರ್ಮಿಕರೊಂದಿಗೆ ತೆರಳಿದ ವಾಹನ ಮಾಲೀಕ ನಾಗೇಶ್ ಸುಮಾರು 11 ಗಂಟೆ ವೇಳೆಗೆ ಲೈನ್ ಮನೆಗೆ ಹೋಗಿದ್ದಾನೆ. ರಾಜು ಮನೆಯಲ್ಲಿ ಇಲ್ಲದಾಗಿದ್ದಾನೆ.
ಕೊಂಚ ಹೊತ್ತು ಮನೆಯ ಅಂಗಳದಲ್ಲಿ ನೋಡಲಾಗಿ ರಕ್ತದ ಅಂಶಗಳು ಕಂಡುಬಂದಿದೆ ( ರಕ್ತಸಿಕ್ತ ದೇಹವನ್ನು ಎಳೆದ್ಯೊಯ್ದ ರೀತಿಯಲ್ಲಿ ಕಂಡು ಬಂದಿದೆ) ಜಾಡು ಹಿಡಿದ ನಾಗೇಶ್ ರಕ್ತ ಬಿದ್ದ ಸ್ಥಳ ನೋಡಿಕೊಂಡು ಮುಂದುವರೆದಿದ್ದಾರೆ. ಕೊನೆಯಲ್ಲಿ ತೋಟದ ಮಾಲೀಕರು ಹೊಂದಿರುವ ಕೆರೆಯ ಸನಿಹದಲ್ಲಿ ಕತ್ತು ಸೀಳಿ ರಕ್ತ ಮಡುಗಟ್ಟಿದ ರೀತಿಯಲ್ಲಿ ಹೆಣವಾಗಿ ರಾಜು ಪತ್ತೆಯಾಗಿರುವುದಾಗಿ ತೋಟದ ಮಾಲೀಕರಿಗೆ ದೂರವಾಣಿ ಕರೆ ಮಾಡಿ ನಾಗೇಶ್ ತಿಳಿಸಿದ್ದಾರೆ.
ನಂತರ ಗೋಣಿಕೊಪ್ಪ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಾಹಜರು ನಡೆಸಿ, ತೋಟದ ಮಾಲೀಕರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳಿಂದ ವ್ಯಕ್ತಿಯೋರ್ವನ ಕೊಲೆ ಪ್ರಕರಣ ದಾಖಲಾಗುತ್ತದೆ. ಕೊಲೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎನ್.ಎನ್.ರಾಮ ರೆಡ್ಡಿ ಅವರು ತೋಟದ ಕಾರ್ಮಿಕರನ್ನು ತನಿಖೆಗೆ ಒಳಪಡಿಸುತ್ತಾರೆ.
ತನಿಖೆ ವೇಳೆಯಲ್ಲಿ ಬಂಧಿತ ಆರೋಪಿಗಳಾದ ವಿನೋದ್ ಮತ್ತು ರವಿ ಅವರು ವಾಹನ ಚಾಲಕನ ಪತ್ನಿ ತೋಟದ ಕೆಲಸಕ್ಕೆ ಬರುತ್ತಿದ್ದು ರಾಧಿಕ ಕುಡಿಯಲು ನೀರು ಕೇಳಿಕೊಂಡು ಮೃತ ರಾಜು ಲೈನ್ ಮನೆಗೆ ಆಗಮಿಸುತ್ತಿದ್ದ. ಕುಪಿತನಾದ ರಾಜು ಇಲ್ಲಿ ಬರಬಾರದು ಮಾಲೀಕರ ಬಳಿ ಕೇಳಬೇಕು ಎಂದು ಗಧರಿಸಿ ಹಿಂದಕ್ಕೆ ಕಳುಹಿಸಿದ್ದ.
ಈ ಸಂಬಂಧ ತಾ. 07-05-2020 ರಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುವ ಸಮಯ ನಾಗೇಶ್ ಮತ್ತು ನಾವುಗಳು ರಾಜು ಬಳಿ ಪತ್ನಿ ( ನಾಗೇಶನ ಪತ್ನಿ ರಾಧಿಕ) ಳಿಗೆ ನೀರು ಕೊಡುವುದಿಲ್ಲ ಎಂದು ಹೇಳಿದು,ಎಂದು ಕೇಳಿದಾಗ ರಾಜು ಮತ್ತು ನಮಗಳ ಮಧ್ಯೆ ಜಗಳವಾಯಿತು. ಈರ್ವರು ರಾಜುವಿನ ತಲೆಭಾಗಕ್ಕೆ ಬಡಿಗೆಯಿಂದ ಹೊಡೆದು ಕೈಯಲ್ಲಿದ್ದ ಕತ್ತಿಯಿಂದ ಸೀಳಿ ಕೊಲೆ ಮಾಡಿ ಸ್ಥಳದಿಂದ ಕೆರೆಯ ದಡದಲ್ಲಿ ಎಳೆದುಕೊಂಡು ಹಾಕಿದ್ದೆವು ಎಂದು ಹೇಳಿಕೊಂಡಿದ್ದಾರೆ.
ಬಂಧಿಸಿದ ವ್ಯಕ್ತಿಗಳ ಮೇಲೆ 57/2020 ಕಲಂ 302,201 ರೆ/ವಿ 34 ರ ಅನ್ವಯ ಕೊಲೆ ಪ್ರಕರಣ ದಾಖಲಾಗುತ್ತದೆ. ಪ್ರಕರಣದ ತನಿಖಾಧಿಕಾರಿಗಳು ಎ/ಸಂ/56/2020 ತಾ 10-06-2020 ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ವಿರಾಜಪೇಟೆ ಯ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಕರಣದ ಆರೋಪಿಗಳ ಮೇಲೆ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ,
ಗೌ. ನ್ಯಾಯಾಧೀಶರಾದ ಎಸ್ ನಟರಾಜು ಅವರು ತಾ. 02-04-2026 ರಂದು ಆರೋಪಿಗಳಾದ ವಿನೋದ್ ಮತ್ತು ರವಿ ಎಂಬುವವರಿಗೆಅಪರಾಧಿ ಎಂದು ತೀರ್ಮಾನಿಸಿ ಆರೋಪಿಗಳಿಗೆ ಕಲಂ 302 ರೆ/ವಿ 34 ಐ.ಪಿ.ಸಿ ಅನ್ವಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ 25000 /- ದಂಢ ಹಾಗೂ ಕಲಂ 201 ರೆ/ವಿ 34 ಐ.ಪಿ.ಸಿ 03 ವರ್ಷ ಗಳ ಕಾರಾಗೃಹ ಶಿಕ್ಷೆ ಹಾಗೂ 10,000/- ರೂ ದಂಢ ವಿಧಿಸಿ ತೀರ್ಪು ನೀಡಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಯಾಸಿನ್ ಅಹಮದ್ ಅವರು ತಮ್ಮ ವಾದ ಮಂಡಿಸಿದರು.
ವರದಿ;ಕಿಶೋರ್ ಕುಮಾರ್ ಶೆಟ್ಟಿ
