ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಗಣಿತ ಕಲಿಕಾ ಆಂದೋಲನದ ಅಂಗವಾಗಿ ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣ
ಕುಶಾಲನಗರ/ ಕೂಡಿಗೆ, ಮಾ.10: ಶಾಲಾ ಶಿಕ್ಷಣ ಇಲಾಖೆ ಹಾಗೂ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯ ವತಿಯಿಂದ *ಅಕ್ಷರ ಫೌಂಡೇಶನ್* ಸ್ವಯಂ ಸೇವಾ ಸಂಸ್ಥೆ ಯ ಸಹಯೋಗದಲ್ಲಿ ಗಣಿತ ಕಲಿಕಾ ಆಂದೋಲನದ ಅಂಗವಾಗಿ 2025-26 ನೇ ಸಾಲಿನಲ್ಲಿ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿರುವ ಗಣಿತ ಕಲಿಕಾ ಆಂದೋಲನದ ಅಂಗವಾಗಿ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣ:
2026 ಹಾಗೂ ಗಣಿತ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ 25 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರು ಹಾಗೂ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ( ಸಿ.ಆರ್.ಪಿ.) ಗಳನ್ನು ಸನ್ಮಾನಿಸಲಾಯಿತು. ಜಿಲ್ಲಾಮಟ್ಟದ ಗಣಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಗಣಿತ ಸ್ಪರ್ಧೆಯ ಸಮೀಕ್ಷಾ ವರದಿ ಬಿಡುಗಡೆಗೊಳಿಸಿ ಮಾತನಾಡಿದ,
ಡಯಟ್ ಸಂಸ್ಥೆಯ ಪ್ರಾಂಶುಪಾಲರೂ ಆದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಅಭಿವೃದ್ಧಿ ) ರಾಮಚಂದ್ರರಾಜೇ ಅರಸ್, ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ಗಣಿತ ಕಲಿಕೆಯನ್ನು ಉತ್ತಮಪಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಗಣಿತ ಕಲಿಕಾ ಆಂದೋಲನದ ಮೂಲಕ 4, 5 ಮತ್ತು 6 ನೇ ತರಗತಿಗಳ ಮಕ್ಕಳಲ್ಲಿ ಗಣಿತ ಕಲಿಕಾಭ್ಯಾಸವನ್ನು ಉತ್ತಮಪಡಿಸಲು ಸಹಕಾರಿಯಾಗಿದೆ ಎಂದರು.
ಗಣಿತವು ಶಾಲೆಯಲ್ಲಿ ಭವಿಷ್ಯದ ಕಲಿಕೆಯ ಮೇಲೆ ಅವಲಂಬಿತವಾಗಿರುವ ಒಂದು ಮೂಲಭೂತ ಕಲಿಕೆಯಾಗಿದೆ. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಗಣಿತ ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಲು ಗಣಿತ ಕಲಿಕಾ ಆಂದೋಲನವು ಸಹಕಾರಿಯಾಗಿದೆ ಎಂದರು. ಗಣಿತ ಕಲಿಕಾ ಅಭ್ಯಾಸವು ಮಕ್ಕಳಲ್ಲಿ ಆಟದ ಮೂಲಕ ಗಣಿತದ ಪರಿಕಲ್ಪನೆಗಳನ್ನು ಬಲಪಡಿಸುವ, ತಾರ್ಕಿಕ ಚಿಂತನೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವ ಒಂದು ಸಮುದಾಯ-ಚಾಲಿತ ಪ್ರಯತ್ನವಾಗಿದೆ.
ಅಕ್ಷರ ಫೌಂಡೇಶನ್ ವತಿಯಿಂದ ಇದು ಆಂಡ್ರಾಯ್ಡ್ ಆಪ್ಗಳು ಮತ್ತು ಪುಸ್ತಕಗಳ ಮೂಲಕ ಮಕ್ಕಳಲ್ಲಿ ಗಣಿತದ ಕಲಿಕೆಯನ್ನು ಮೋಜಿನಾಯಕಗೊಳಿಸುತ್ತಿದೆ. ಇದರಿಂದ ಮಕ್ಕಳು ಸಂತಸದಿಂದ ಗಣಿತ ಕಲಿಕಾಭ್ಯಾಸ ಮಾಡಲು ಸಹಕಾರಿಯಾಗಿದೆ ಎಂದು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಹೇಳಿದರು.
ಗಣಿತ ಕಲಿಕಾ ಆಂದೋಲನದ ಉದ್ದೇಶ ಹಾಗೂ ಮಕ್ಕಳ ಗಣಿತ ಸ್ಪರ್ಧೆಯ ಮಹತ್ವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಅಕ್ಷರ ಫೌಂಡೇಶನ್ ನ ಹಿರಿಯ ವಿಭಾಗೀಯ ವ್ಯವಸ್ಥಾಪಕಿ ಅಂಜಲೀನಾ ಗ್ರೇಗರಿ, ಗಣಿತ ಕಲಿಕಾ ಆಂದೋಲನವು ಸರ್ಕಾರಿ ಪ್ರಾಥಮಿಕ ಶಾಲೆಗಳ 4, 5 ಮತ್ತು 6 ನೇ ತರಗತಿಗಳ ಮಕ್ಕಳಲ್ಲಿ ನಿರಂತರವಾಗಿ ಗಣಿತ ಕಲಿಕೆಯ ಕೌಶಲ್ಯ ಹಾಗೂ ಜ್ಞಾನ ಬೆಳೆಸಲು ಸಹಕಾರಿಯಾಗಿದೆ. ಗಣಿತದ ಚಟುವಟಿಕೆಗಳ ನಂತರ ಮಕ್ಕಳ ಕಲಿಕಾ ಸಾಮರ್ಥ್ಯ ಹಾಗೂ ಅವರ ಪ್ರತಿಭೆಯನ್ನು ಗುರುತಿಸಲು ಗಣಿತ ಸಾಧನಾ ಸ್ಪರ್ಧೆ ನಡೆಸುವ ಮೂಲಕ ಅವರನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದರು.
ಆಂದೋಲನದ ಸಂಯೋಜಕರಾದ ಕೂಡಿಗೆ ಡಯಟ್ ಸಂಸ್ಥೆಯ ಉಪನ್ಯಾಸಕ ವಿ.ವಿಜಯ್ ಮಾತನಾಡಿ, ಗಣಿತ ಕಲಿಕಾ ಆಂದೋಲನದ ಚಟುವಟಿಕೆಗಳ ಕುರಿತು ವಿವರಿಸಿದರು.
ಗಣಿತ ಕಲಿಕಾ ಆಂದೋಲನದ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿದ 25 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಪರವಾಗಿ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಹಾಗೂ ಇದಕ್ಕೆ ಪೂರಕವಾಗಿ ಸಹಕರಿಸಿದ 25 ಮಂದಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ( ಸಿ.ಆರ್.ಪಿ.ಗಳು) ಗಳಿಗೆ ಡಯಟ್ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್, ಪ್ರಶಂಸನಾ ಪತ್ರ ವಿತರಿಸಿ ಸನ್ಮಾನಿಸಿದರು. ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಎನ್.ವಿ.ಸ್ವಾಮಿ, ಬಿ.ಎನ್.ಪುಷ್ಪ, ಅಕ್ಷರ ಫೌಂಡೇಶನ್ ನ ಹಿರಿಯ ಜಿಲ್ಲಾ ಕ್ಷೇತ್ರ ಸಂಯೋಜಕ ಕುಮಾರಸ್ವಾಮಿ, ಜಿಲ್ಲೆಯ ವಿವಿಧ ಸಿ ಆರ್ ಪಿ ಗಳು, ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯಸ್ಥರು, ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು. ಕೂಡಿಗೆ ಕ್ಲಸ್ಟರ್ ನ ಸಿ ಆರ್ ಪಿ ಕೆ.ಶಾಂತಕುಮಾರ್ ನಿರ್ವಹಿಸಿದರು.