ಯಂತೀಂದ್ರ ಸಿದ್ದರಾಮಯ್ಯ, ತಮ್ಮ ತಂದೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ, ಎಂಬ ಮಾತ್ರಕ್ಕೆ ಮಾಧ್ಯಮಗಳ ಮುಂದೆ ಮಾತಿನ ಮಿತಿ ಕಳೆದುಕೊಳ್ಳಬೇಡಿ: ಸಂಸದ ಯದುವೀರ್ ಒಡೆಯರ್
ಮೈಸೂರು:ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸರ್ವಾಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದ ಮಹನೀಯರ ಸಾಧನೆಗಳನ್ನು ಗೌರವಿಸಿ ಸ್ಮರಿಸಬೇಕೆ ಹೋರತು ಅದನ್ನು ಅಳೆದು ತೂಗಿ ಹೋಲಿಸಬಾರದು. ಯಂತೀಂದ್ರ ಸಿದ್ದರಾಮಯ್ಯ ಅವರ ತಂದೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ ಎಂಬ ಮಾತ್ರಕ್ಕೆ ಮಾಧ್ಯಮಗಳ ಮುಂದೆ ಮಾತಿನ ಮಿತಿ ಕಳೆದುಕೊಂಡು ತಾವು ಏನು ಬೇಕಾದರು ಮಾತನಾಡಬಹುದು ಎಂಬ ಹುರುಪಿನಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡಬಾರದು. ತಾವು ಮಾಧ್ಯಮದ ಮುಂದೆ ನೀಡಿರುವ ಈ ಹೇಳಿಕೆ ಸಂಪೂರ್ಣ ಸತ್ಯಕ್ಕೆ ದೂರವಾದ ಮಾತು ಅಥವಾ ಸುಳ್ಳು ಎಂಬುದು ತಮ್ಮ ಆತ್ಮಕ್ಕಾದರೂ ಮನವರಿಕೆಯಾಗಿರುತ್ತದೆ ಎಂದು ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುರಿತು ಪ್ರಕಟಣೆ ನೀಡಿರುವ ಯದುವೀರ್ ಒಡೆಯರ್, ಇಡಿ ವಿಶ್ವವೇ ಮೈಸೂರು ಸಂಸ್ಥಾನವನ್ನು ತಿರುಗಿ ನೋಡುವಂತೆ ಅಭಿವೃದ್ದಿಗೊಳಿಸಿˌ ಜನಪರ ಆಡಳಿತವನ್ನು ನಡೆಸಿˌ ಕನ್ನಡಿಗರ ಹೃದಯ ಸಿಂಹಾನದಲ್ಲಿ ಎಂದೆಂದಿಗೂ ಅಜರಾಮರರಾಗಿರುವ ಮೈಸೂರು ಸಂಸ್ಥಾನದ ಹೆಮ್ಮೆಯ ಅರಸರಾದ ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು ಏನೆಂಬುದು ಸಾಕ್ಷಿಯಾಗಿ ನಮ್ಮ ಕಣ್ಣ ಮುಂದೆಯೇ ನಿಂತಿವೆ. ಮೈಸೂರು ಜಿಲ್ಲೆಯವರಾದ ಶ್ರೀ ಸಿದ್ದರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿಗಳಾಗಿದ್ದರೂˌ ಅವರು ಎಷ್ಟೇ ಅನುದಾನಗಳನ್ನು ನೀಡಿˌ ಅಭಿವೃದ್ದಿಗೊಳಿಸಿದ್ದರೂ ಅದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದು ಸಮಾಜಕ್ಕೆ ತಲುಪಿದೆ ಎಂಬುದು ಜನತೆ ನೋಡಿದ್ದಾರೆ.
ಅದಕ್ಕೆ ಸರಿಯಾದ ಉತ್ತರವಾಗಿ 2018ರಲ್ಲೇ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಿದ್ದಾರೆ. ಅಂದಿನ ಪರಿಸ್ಥಿತಿಯಲ್ಲಿ ಶ್ರೀ ನಾಲ್ವಡಿ ಮಹಾರಾಜರು ಈ ಮೈಸೂರು ಪ್ರಾಂತ್ಯದಲ್ಲಿ ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡು ತಮ್ಮ ದೂರದೃಷ್ಟಿಯ ಆಡಳಿತದಿಂದ ಅಕ್ಷರಶಹ ಸುವರ್ಣಯುಗವನ್ನೆ ಸೃಷ್ಟಿಸಿದ್ದರು. ಮೈಸೂರು ಸಂಸ್ಥಾನವನ್ನಾಳಿದ ಪ್ರತಿಯೊಬ್ಬ ಮಹಾರಾಜರು ಈ ನೆಲದಲ್ಲಿ ಅಭಿವೃದ್ದಿಯ ಬೀಜವನ್ನು ಬಿತ್ತಿದ್ದಾರೆˌ ಅವ್ವು ಹೆಮ್ಮರವಾಗಿ ಬೆಳೆದು ನಿಂತು ಈಗಲೂ ನಮಗೆಲ್ಲರಿಗೂ ಆಸರೆಯಾಗಿವೆ. ಆ ಮರಗಳ ಆಶ್ರಯದಲ್ಲಿ ಬೆಳೆದ ಜನರು ಪ್ರತಿ ನಿತ್ಯ ಅವರ ಕೊಡುಗೆಗಳನ್ನು ಸ್ಮರಿಸುತ್ತಾರೆ. ಕೇವಲ ತಮ್ಮ ರಾಜಕೀಯ ಕಾರಣಕ್ಕಾಗಿ ಅರಣ್ಯದಂತಿರುವ ಅವರ ಸಾಧನೆ ಹಾಗೂ ಕೊಡುಗೆಗಳಿಗೆ ತಮ್ಮ ಮಾತಿನ ಕೊಡಲಿ ಪೆಟ್ಟನ್ನು ನೀಡುವ ಪ್ರಯತ್ನ ಮಾಡಬೇಡಿˌ ಅದು ಎಂದಿಗೂ ಫಲ ಕೊಡುವುದಿಲ್ಲ. ಸಾಂವಿಧಾನಿಕ ಹಾಗೂ ಪ್ರಜಾತಂತ್ರದ ಜವಾಬ್ದಾರಿಯುತ ಹುದ್ದೆಯಲ್ಲಿರುವ ತಮಗೂ ಮತ್ತು ತಮ್ಮ ತಂದೆಯವರ ಗೌರವಕ್ಕೂ ಅದು ಶ್ರೇಯಸ್ಸು ತುರುವುದಿಲ್ಲ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.