ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣ | ಪತಿ ಡಾ. ಮಹೇಂದ್ರ ರೆಡ್ಡಿಯ ‘ಸಹಜ ಸಾವು’ ಎಂದು ರೂಪಿಸುವ ಮಾಸ್ಟರ್ ಪ್ಲಾನ್ ಬಹಿರಂಗ : ಹೆಂಡತಿ ಸಾಯಬೇಕು, ಆದರೆ ತಾನು ಕೆಟ್ಟವನಾಗಬಾರದು ಎಂದಿದ್ದ ಹಂತಕ!
ಬೆಂಗಳೂರು, ಅ. 23: ವೈದ್ಯೆ ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಆರೋಪಿ ಹಾಗೂ ಪತಿ ಡಾ. ಮಹೇಂದ್ರ ರೆಡ್ಡಿ ಕೊನೆಗೂ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ತನಿಖೆಯ ವೇಳೆ ಅನೇಕ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಹತ್ಯೆಯ ಹಿಂದಿನ ಉದ್ದೇಶ ಮತ್ತು ಆರೋಪಿಯ ನಿಖರ ಪ್ಲಾನ್ ಈಗ ಬಯಲಾಗಿದೆ.
ಡಾ. ಮಹೇಂದ್ರ ರೆಡ್ಡಿಯು ಪತ್ನಿಯ ಸಾವನ್ನು ‘ಸಹಜ ಸಾವು’ಯಂತೆ ತೋರಿಸಲು ಪೂರ್ವನಿಯೋಜಿತವಾಗಿ ಯೋಜನೆ ರೂಪಿಸಿದ್ದ. ಸಾವನ್ನು ಸಹಜವೆಂದು ಬಿಂಬಿಸಿದರೆ ಮರಣೋತ್ತರ ಪರೀಕ್ಷೆ ನಡೆಯದ ಕಾರಣ, ನಿಜವಾದ ಕಾರಣವನ್ನು ಮರೆಮಾಡಬಹುದು ಎಂಬುದು ಆರೋಪಿಯ ಮಾಸ್ಟರ್ ಪ್ಲಾನ್ ಆಗಿದ್ದು ಎಂದು ಪೊಲೀಸರು ತಿಳಿಸಿದ್ದಾರೆ.
ಮಹೇಂದ್ರ ರೆಡ್ಡಿಗೆ ಪತ್ನಿಯ ಆರೋಗ್ಯ ಸಮಸ್ಯೆಯಿಂದ ಬೇಸರ ಉಂಟಾಗಿದ್ದು, ವೈಯಕ್ತಿಕ ಜೀವನ ಸರಿಯಿಲ್ಲ ಎಂಬ ಕಾರಣದಿಂದ ವಿಚ್ಛೇದನ ಆಲೋಚನೆ ಮಾಡಿದ್ದಾನೆ. ಆದರೆ ವಿಚ್ಛೇದನ ಪಡೆದರೆ ಆಸ್ತಿ ಕೈ ತಪ್ಪಬಹುದೆಂಬ ಭಯದಿಂದ, ಪತ್ನಿಯ ಆರೋಗ್ಯದ ಸಮಸ್ಯೆಯನ್ನು ಬಂಡವಾಳ ಮಾಡಿಕೊಂಡು ಕೊಲೆ ಮಾಡಲು ನಿರ್ಧರಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವೈದ್ಯಕೀಯ ದಾಖಲೆಗಳ ಪ್ರಕಾರ, ಡಾ. ಕೃತಿಕಾ ರೆಡ್ಡಿಯ ದೇಹದ ತೂಕಕ್ಕೆ ಕೇವಲ 7–8 ಮಿಲಿ ಅನಸ್ತೇಶಿಯಾ ಕೊಡಬಹುದಿತ್ತು. ಆದರೆ ಡಾ. ಮಹೇಂದ್ರ ರೆಡ್ಡಿ 15 ಮಿಲಿ ಪ್ರಮಾಣದ ಅನಸ್ತೇಶಿಯಾ ನೀಡಿದ್ದು, ಅದು ಸಾವಿಗೆ ಕಾರಣವಾಯಿತು ಎಂದು ವೈಜ್ಞಾನಿಕ ವರದಿಗಳು ದೃಢಪಡಿಸಿವೆ.
ತನಿಖೆಯ ವೇಳೆ ಪೊಲೀಸರು ಆರೋಪಿಯ ಮೊಬೈಲ್ ಡೇಟಾವನ್ನು ಮರುಪಡೆಯಲಾಗಿದ್ದು, ಅದರಲ್ಲಿ “I have killed Kruthika” ಎಂಬ ಸಂದೇಶ ಪತ್ತೆಯಾಗಿದೆ. ಜೊತೆಗೆ “ಹೆಂಡತಿ ಸಾಯಬೇಕು, ಆದರೆ ತಾನು ಕೆಟ್ಟವನಾಗಬಾರದು; ಆಸ್ತಿಯೂ ಕೈ ತಪ್ಪಬಾರದು” ಎಂಬ ಉದ್ದೇಶದಿಂದ ಆರೋಪಿ ಪ್ಲಾನ್ ರೂಪಿಸಿದ್ದಾನೆ ಎಂಬುದೂ ದಾಖಲಾಗಿದೆ.
ಇದೇ ವೇಳೆ, ಪ್ರೊಫೊಫೋಲ್ ಔಷಧ ಖರೀದಿಯ ದಾಖಲೆ, ಇಂಜೆಕ್ಷನ್ ನೀಡಲು ಬಳಸಿದ ಕ್ಯಾನ್, ಮೃತ ದೇಹದಲ್ಲಿ ಪತ್ತೆಯಾದ ಅರವಳಿಕೆ ಅಂಶಗಳು ಹಾಗೂ ಕೊಲೆ ಕುರಿತು ಆರೋಪಿ ಮತ್ತೊಬ್ಬರೊಂದಿಗೆ ನಡೆಸಿದ ಚಾಟ್ಗಳು ತನಿಖಾ ಅಧಿಕಾರಿಗಳ ಕೈಗೆ ಸಿಕ್ಕಿವೆ ಎಂದು ತಿಳಿದು ಬಂದಿದೆ.