ನಾಪೋಕ್ಲು; ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ನಾಪೋಕ್ಲು; ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ವಿಭಾಗದ ದ್ವಿತೀಯ ಪಿ ಯು ಸಿ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಥಮ ಪಿ ಯು ಸಿ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.

 ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸಂಸ್ಥೆಯ ಪ್ರಭಾರ ಪ್ರಾಂಶುಪಾಲರಾದ ಎ. ಎಂ.ವಿಶಾಲ ಅವರು ಮಾತನಾಡಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಯಾವುದೇ ತಪ್ಪುಗಳು ಆದಲ್ಲಿ ಅವರನ್ನು ಸರಿದಾರಿಗೆ ತರುವುದು ನಮ್ಮ ಆದ್ಯ ಕರ್ತವ್ಯವಾಗಿದೆ.ಆ ನಿಟ್ಟಿನಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳ ತಪ್ಪನ್ನು ತಿದ್ದಿಕೊಳ್ಳಲು ನಿರಂತರ ಪ್ರಯತ್ನ ಪಡುತ್ತೇವೆ.

 ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ಎಲ್ಲರೂ ತೇರ್ಗಡೆಯಾಗಿ ಶೇಕಡ 100 ರಷ್ಟು ಫಲಿತಾಂಶವನ್ನು ತಂದು ನಮ್ಮ ಶಾಲೆಗೆ ಕೀರ್ತಿಯನ್ನು ತರಬೇಕು ಎಂದು ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು. ಸಂಸ್ಥೆಯ ಉಪ ಪ್ರಾಂಶುಪಾಲರಾದ ಎನ್. ಎಸ್. ಶಿವಣ್ಣ ಮಾತನಾಡಿ ಪರೀಕ್ಷೆಗೆ ಕೆಲವೇ ದಿನಗಳು ಬಾಕಿಇದ್ದು ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಓದಿನ ಕಡೆ ಗಮನ ಹರಿಸಿ ಉತ್ತಮ ಅಂಕದೊಂದಿಗೆ ತೇರ್ಗಡೆ ಆಗುವ ನಿಟ್ಟಿನಲ್ಲಿ ಪ್ರಯತ್ನ ಪಡಬೇಕು ಎಂದು ಕಿವಿಮಾತು ಹೇಳಿ ಶುಭ ಹಾರೈಸಿದರು.

 ಸಂಸ್ಥೆಯ ಸಿವಿಲ್ ಕಾಮಗಾರಿ ಉಪ ಸಮಿತಿ ಅಧ್ಯಕ್ಷ ಕೆ. ಎ.ಹಾರಿಸ್ ಮಾತನಾಡಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜು ಪ್ರಾರಂಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡಂತೆ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿರುವ ಬೀಳ್ಕೊಡುಗೆ ಕಾರ್ಯಕ್ರಮ ಈ ದಿನ ವಿದ್ಯಾರ್ಥಿಗಳಿಗೆ ಸಂತಸ ಸಂಭ್ರಮದೊಂದಿಗೆ ದುಃಖವೂ ಕೂಡ ಇರುತ್ತದೆ.

 ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕೇವಲ ಅಂಕಕ್ಕೋಸ್ಕರ ಕಲಿಯದೆ ಬದುಕಿ ಗೋಸ್ಕರ ಕಲಿಯಬೇಕು.ಕೇವಲ ಅಂಕದಿಂದ ಮಾತ್ರ ಉತ್ತಮ ಭವಿಷ್ಯವಲ್ಲ ಹಿರಿಯರ ಪೋಷಕರ ಶಿಕ್ಷಕರ ಆಶೀರ್ವಾದ ಪಡೆದುಕೊಂಡು, ಜೀವನದಲ್ಲಿ ಅನುಸರಣೆ ಅಳವಡಿಸಿಕೊಂಡು ಶ್ರಮ ಪಟ್ಟರೆ ಮಾತ್ರ ಉಜ್ವಲ ಭವಿಷ್ಯ ಕಂಡುಕೊಳ್ಳಲು ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಕರನ್ನು, ಪೋಷಕರನ್ನು ಹಿರಿಯರನ್ನು ಗೌರವಿಸಿ ವಿದ್ಯಾರ್ಥಿಗಳು ಉತ್ತಮ ಅಂಕ ದೊಂದಿಗೆ ತೇರ್ಗಡೆಯಾದರೆ ನಿಮ್ಮ ಭವಿಷ್ಯಕ್ಕೆ ಬದ್ರ ಬುನಾದಿ ಆಗಲಿದೆ. ಇದರಿಂದ ನಿಮ್ಮ ಶಿಕ್ಷಕರಿಗೂ ಪೋಷಕರಿಗೂ ಮತ್ತು ಶಾಲೆಗೂ ಕೂಡ ಕೀರ್ತಿ ತಂದಂತಾಗುತ್ತದೆ ಎಂದರಲ್ಲದೆ ವಿದ್ಯಾರ್ಥಿಗಳು ಕಲಿತ ಶಾಲೆಯೊಂದಿಗೆ ನಿರಂತರ ಸಂಬಂಧ ಇಟ್ಟುಕೊಳ್ಳಬೇಕೆಂದು ತಿಳಿಸಿ ಶುಭ ಹಾರೈಸಿದರು.

 ಸಂಸ್ಥೆಯ ಉಪನ್ಯಾಸಕರಾದ ಸಚಿನ್, ಗಗನ್ , ವಿಜಿತ, ಶೈಜಿ ಮತ್ತು ಕೃತಿಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರನ್ನು ರಂಜಿಸಿತು. ಈ ಸಂದರ್ಭ ಶಾಲೆಯ ಉಪನ್ಯಾಸಕ ವೃಂದದವರು, ಶಾಲೆಯ ಸಿಬ್ಬಂದಿಗಳು,ವಿದ್ಯಾರ್ಥಿಗಳು ಹಾಜರಿದ್ದರು.