ಮೂರನೇ ಮಗುವೂ ಹೆಣ್ಣಾಗುತ್ತದೆಂದು ಹೆದರಿ ಗರ್ಭಿಣಿ ಹೆಂಡತಿ, ಮಕ್ಕಳನ್ನು ನೀರಲ್ಲಿ ಮುಳುಗಿಸಿ ಕೊಂದ ಪಾಪಿ
ಹೈದರಾಬಾದ್, ಏಪ್ರಿಲ್ 3: ತೆಲಂಗಾಣದಲ್ಲಿ ಶಾಕಿಂಗ್ ಘಟನೆಯೊಂದು ನಡೆದಿದೆ. ಮತ್ತೊಂದು ಬಾರಿ ಗರ್ಭಿಣಿಯಾಗಿದ್ದ (Pregnant Death) ಹೆಂಡತಿ ಈ ಬಾರಿಯೂ ಹೆಣ್ಣುಮಗುವನ್ನೇ ಹೆರುತ್ತಾಳೆ ಎಂಬ ಭಯದಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಈಜುಕೊಳಕ್ಕೆ ತಳ್ಳಿ, ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾನೆ.
ಆ ಬಳಿಕ ಇದೊಂದು ಆಕಸ್ಮಿಕ ಸಾವು ಎಂದು ಎಲ್ಲರನ್ನೂ ನಂಬಿಸಿದ್ದಾನೆ. ಆದರೂ ಮೃತ ಮಹಿಳೆಯ ಕುಟುಂಬಸ್ಥರ ಅನುಮಾನದಿಂದಾಗಿ ಆತ ಸಿಕ್ಕಿಹಾಕಿಕೊಂಡಿದ್ದಾನೆ. ತೆಲಂಗಾಣದ ಹನ್ಮಕೊಂಡ ಜಿಲ್ಲೆಯ ಐನವೊಲು ಮಂಡಲದ ಪುನ್ನೇಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಅಜರುದ್ದೀನ್ ಎಂಬ ವ್ಯಕ್ತಿಗೆ ಈಗಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದರು. ಅವರ ಪತ್ನಿ ಗರ್ಭಿಣಿಯಾಗಿದ್ದರು. ಈಗಾಗಲೇ ಇಬ್ಬರು ಹೆಣ್ಣುಮಕ್ಕಳು ಇದ್ದುದರಿಂದ ಈ ಬಾರಿಯೂ ಹೆಣ್ಣುಮಗುವಾಗುತ್ತದೆ ಎಂದು ಆತನಿಗೆ ಆತಂಕವಿತ್ತು. ಆಕೆ ಗರ್ಭಪಾತ ಮಾಡಿಸಿಕೊಳ್ಳಲು ನಿರಾಕರಿಸಿದ್ದರಿಂದ ಆತನ ಭಯ ಹೆಚ್ಚಾಗಿತ್ತು. ಆಕೆಯ ಹೊಟ್ಟೆಯಲ್ಲಿರುವುದು ಹೆಣ್ಣು ಮಗುವೇ ಎಂಬ ಅನುಮಾನದಿಂದ ಆತ ಕೋಪಗೊಂಡಿದ್ದ. ಎರಡು ಬಾರಿ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರೂ ಆಕೆ ಒಪ್ಪಿರಲಿಲ್ಲ.
ಅಜರುದ್ದೀನ್ ಮತ್ತು ಫರ್ಹತ್ ಅವರಿಗೆ ಉಮೇರಾ (8) ಮತ್ತು ಆಯೇಷಾ (6) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ವಾರಂಗಲ್-ಖಮ್ಮಮ್ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಗ್ರಾಮದ ಹೊರವಲಯದಲ್ಲಿರುವ ಈಜುಕೊಳವನ್ನು ನಿರ್ವಹಿಸುವ ಕೆಲಸವನ್ನು ಅಜರುದ್ದೀನ್ ಮಾಡುತ್ತಿದ್ದರು. ಅದೇ ಅವರ ಜೀವನಕ್ಕೆ ಆಧಾರವಾಗಿತ್ತು.
ವಿಚಿತ್ರ ಸಂಗತಿಯೆಂದರೆ, ಇಬ್ಬರು ಹೆಣ್ಣು ಮಕ್ಕಳ ಜನನದ ನಂತರ ಫರ್ಹತ್ ಮತ್ತೆ 2 ಬಾರಿ ಗರ್ಭಿಣಿಯಾಗಿದ್ದರು. ಆದರೆ ಎರಡೂ ಬಾರಿ ಆಕೆ ಇನ್ನೊಂದು ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ ಎಂಬ ಭಯದಿಂದ ಅಜರುದ್ದೀನ್ ಗರ್ಭಪಾತ ಮಾಡಿಸಿದ್ದ. ಅದಾದ 4 ವರ್ಷಗಳ ನಂತರ ಆಕೆ ಮತ್ತೆ ಗರ್ಭಿಣಿಯಾಗಿದ್ದರು. ಈ ಬಾರಿಯೂ ಹೆಣ್ಣುಮಗುವೇ ಆಗುತ್ತದೆ ಎಂದು ಅಜರುದ್ದೀನ್ಗೆ ಅನಿಸತೊಡಗಿತ್ತು. ಹೀಗಾಗಿ, ಮತ್ತೆ ಗರ್ಭಪಾತ ಮಾಡಿಸಿಕೊಳ್ಳಲು ಒತ್ತಾಯಿಸಿದ್ದ. ಆದರೆ, ಈ ಬಾರಿ ಆಕೆ ಅದಕ್ಕೆ ಒಪ್ಪಿರಲಿಲ್ಲ.
ಏನೇ ಆದರೂ ಈ ಮಗುವಿಗೆ ಜನ್ಮ ನೀಡುತ್ತೇನೆ ಎಂದು ಆಕೆ ಹಠ ಹಿಡಿದಿದ್ದರು. ಇದರಿಂದ ಆತ ಕೋಪಗೊಂಡಿದ್ದ. ಬಳಿಕ ಆತ ತಾನು ಕೆಲಸ ಮಾಡುವ ಈಜುಕೊಳಕ್ಕೆ ತನ್ನ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಕರೆದೊಯ್ದು, ನೀರಿಗೆ ತಳ್ಳಿ ಕೊಲೆ ಮಾಡಿದ.
ಇದಾದ ನಂತರ ಈ ಘಟನೆಯನ್ನು ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿರುವುದಾಗಿ ಬಿಂಬಿಸಲು ಪ್ರಯತ್ನಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನ್ನ ಮಗಳು ಮತ್ತು ಮೊಮ್ಮಕ್ಕಳ ಸಾವು ಸಹಜವಲ್ಲ ಎಂದು ಫರ್ಹತ್ನ ತಂದೆ ಅನುಮಾನ ವ್ಯಕ್ತಪಡಿಸಿ ಅಜರುದ್ದೀನ್ ವಿರುದ್ಧ ಆರೋಪ ಮಾಡಿದ್ದರು. ಇದರ ಆಧಾರದ ಮೇಲೆ ಪೊಲೀಸರು ಅವನನ್ನು ವಿಚಾರಣೆಗಾಗಿ ವಶಕ್ಕೆ ಪಡೆದರು. ಆ ಸಮಯದಲ್ಲಿ ಆತ ತಾನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.