20 ವರ್ಷದ ಸ್ನೇಹವನ್ನೇ ಬಂಡವಾಳ ಮಾಡಿ ವಂಚನೆ; ಗೆಳತಿ–ಕುಟುಂಬದಿಂದ 68 ಲಕ್ಷ ರೂ. ಲೂಟಿ
ಬೆಂಗಳೂರು, ನ.23: ಎರಡು ದಶಕಗಳ ಆಪ್ತ ಸ್ನೇಹ ಮತ್ತು ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಗೆಳತಿಯೇ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ. ಜಯನಗರದ ಪ್ರಿಯಾಂಕ ಅವರ ದೂರು ಮೇರೆಗೆ ಲತಾ, ಆಕೆಯ ತಂದೆ ವೆಂಕಟೇಶ್ ಮತ್ತು ಸಹೋದರ ಹರ್ಷ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಲೀಸರ ಪ್ರಕಾರ, ಬಾಲಾಜಿ ಆಟೋಮೊಬೈಲ್ಸ್ ನಲ್ಲಿ ಪಾಲುದಾರಳಾಗಿರುವ ಲತಾ, ವೈಯಕ್ತಿಕ ಸಮಸ್ಯೆ ನೆಪದಲ್ಲಿ 2012-14ರ ಅವಧಿಯಲ್ಲಿ ಪ್ರಿಯಾಂಕಳಿಂದ 35 ಲಕ್ಷ ರೂ. ಪಡೆದಿದ್ದಾಳೆ. ನಂತರ 2017ರಲ್ಲಿ ಮತ್ತೆ ತಂದೆ ವೆಂಕಟೇಶ್ ಮೂಲಕ 32 ಲಕ್ಷ ರೂ. ಪಡೆದುಕೊಂಡಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಹರ್ಷ ಕೂಡ ಒಂದೂವರೆ ಲಕ್ಷ ರೂ. ಹೂಡಿಕೆ ಹೆಸರಿನಲ್ಲಿ ಪಡೆದಿದ್ದಾನೆ.
ಒಟ್ಟು 68 ಲಕ್ಷ ರೂ. ಪಡೆದ ಆರೋಪಿಗಳು ಕೇವಲ 17 ಲಕ್ಷ ರೂ. ಮಾತ್ರ ವಾಪಸ್ ನೀಡಿ, ಉಳಿದ ಹಣ ನೀಡುವುದಾಗಿ ನಂಬಿಸಿ ವಂಚಿಸಿರುವುದು ದೂರಿನಲ್ಲಿ ಉಲ್ಲೇಖವಾಗಿದ್ದು, ಹಣ ವಾಪಸ್ ನೀಡಲು ನೀಡಿದ್ದ ಚೆಕ್ಗಳು ಬೌನ್ಸ್ ಆಗಿವೆ. ನೆಲಮಂಗಲ ಸೇರಿ ಹಲವು ಕಡೆ ಸೈಟ್ ಕೊಡುತ್ತೇವೆ ಎಂದು ಭರವಸೆ ನೀಡಿ ಮತ್ತಷ್ಟು ವಂಚಿಬಿರುವ ಆರೋಪವೂ ಕೇಳಿಬಂದಿದೆ.
ಹಣ ಕೇಳಲು ಪ್ರಿಯಾಂಕ ಆರೋಪಿಗಳ ನಿವಾಸಕ್ಕೆ ಹೋದಾಗ “ಕೈಕಾಲು ಮುರಿಯುತ್ತೇವೆ” ಎಂದು ಬೆದರಿಕೆಯೊಡ್ಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಜ್ಞಾನಭಾರತಿ ಪೊಲೀಸರು ಆರೋಪಿ ಮೂವರ ವಿರುದ್ಧ ತನಿಖೆ ಮುಂದುವರೆಸಿದ್ದಾರೆ.