1.5 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿ ದರೋಡೆ; ಐವರ ಬಂಧನ, ಅಪ್ರಾಪ್ತನೇ ಸೂತ್ರಧಾರಿ!

1.5 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿ ದರೋಡೆ; ಐವರ ಬಂಧನ, ಅಪ್ರಾಪ್ತನೇ ಸೂತ್ರಧಾರಿ!
Photo credit: istock photo

ಮಂಗಳೂರು: ಸೆಪ್ಟೆಂಬರ್ 26 ರಂದು ಕಾರ್ ಸ್ಟ್ರೀಟ್‌ನಲಕಲಿ 1,650 ಗ್ರಾಂ ಚಿನ್ನದ ಗಟ್ಟಿಯನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಮಂಗಳೂರು ನಗರ ಪೊಲೀಸರ ತಂಡ ಸೋಮವಾರ ನಾಲ್ವರು ಯುವಕರನ್ನು ಹಾಗೂ ಒಬ್ಬ ಬಾಲಾಪರಾಧಿಯನ್ನು ಬಂಧಿಸಿದೆ.

ಬಂಧಿತರನ್ನು ಫರೀಷ್ (18, ಕೋಟೆಕಾರ್), ಸಫ್ವಾನ್ (23, ಮುಕ್ಕಚ್ಚೇರಿ), ಅರಾಫತ್ ಅಲಿ (18, ಮಾಸ್ತಿಕಟ್ಟೆ), ಫರಾಜ್ (19, ಉಳ್ಳಾಲ) ಮತ್ತು ಅಪ್ರಾಪ್ತ ಎಂದು ಗುರುತಿಸಲಾಗಿದೆ.

 ಪೋಲಿಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ವಿವರಿಸಿದ್ದಾರೆ,

 ಅಪ್ರಾಪ್ತ ವಯಸ್ಕ ಹಂಪನಕಟ್ಟೆಯ ಚಿನ್ನದ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದನು. ಆತನು ದೂರುದಾರ ಮುಸ್ತಫಾ ಚಿನ್ನದ ಗಟ್ಟಿಯನ್ನು ಕಾರ್ ಸ್ಟ್ರೀಟ್‌ನ ಅಂಗಡಿಗೆ ಸಾಗಿಸುತ್ತಿರುವ ಬಗ್ಗೆ ಫರೀಷ್‌ಗೆ ಮಾಹಿತಿ ನೀಡಿದನು. ಫರೀಷ್‌ ಈ ಹಿಂದೆ ಅದೇ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಮಾಹಿತಿ ಆಧಾರವಾಗಿ ದರೋಡೆಗೆ ಯೋಜನೆ ರೂಪಿಸಲಾಗಿತ್ತು. ಸಫ್ವಾನ್ ಅಪರಾಧಕ್ಕೆ ಕಾರನ್ನು ವ್ಯವಸ್ಥೆ ಮಾಡಿದ್ದನು.

ಸೆಪ್ಟೆಂಬರ್ 26ರಂದು ರಾತ್ರಿ 8:30 ರ ಸುಮಾರಿಗೆ, ಮುಸ್ತಫಾ ಚಿನ್ನದ ಗಟ್ಟಿಯನ್ನು ತನ್ನ ಸ್ಕೂಟರ್‌ನಲ್ಲಿ ಕಾರ್ ಸ್ಟ್ರೀಟ್‌ಗೆ ತರುತ್ತಿದ್ದಾಗ, ಆರೋಪಿ ಅರಾಫತ್ ಅಲಿ ಮತ್ತು ಫರಾಜ್ ಅವರನ್ನು ತಡೆದರು. ನಂತರ ಇತರರು ಕಾರಿನಲ್ಲಿ ಬಂದು ಚಾಕುವಿನಿಂದ ಬೆದರಿಸಿ, ಮುಸ್ತಫಾವನ್ನು ಬಲವಂತವಾಗಿ ಕಾರಿನಲ್ಲಿ ಅಪಹರಿಸಿದರು. ನಂತರ ಚಿನ್ನದ ಗಟ್ಟಿಯನ್ನು ಕಳ್ಳತನ ಮಾಡಿದ್ದರು.

ಅಪರಾಧಕ್ಕೆ ಬಳಸಿದ ಸ್ಕೂಟರ್ ಪೋಲಿಸ್ ವಶಪಡಿಸಿಕೊಂಡಿದ್ದಾರೆ. ಉಳಿದ ಚಿನ್ನದ ಗಟ್ಟಿಯನ್ನು, ಇತರ ಅಪರಾಧಿಗಳಿಗಾಗಿ ಹುಡುಕಾಟ ಮುಂದುವರೆದಿದೆ. ಕಾರು ಇನ್ನಷ್ಟೇ ಪತ್ತೆಯಾಗಬೇಕಿದೆ.

ಮಂಗಳೂರು ಉತ್ತರ ಪೊಲೀಸ್ ಠಾಣೆ ಮತ್ತು ಸಿಸಿಬಿ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಉಪ ಪೊಲೀಸ್ ಆಯುಕ್ತ (ಅಪರಾಧ ಮತ್ತು ಸಂಚಾರ) ರವಿಶಂಕರ್ ಕೆ, ಕೇಂದ್ರ ಉಪವಿಭಾಗದ ಎಸಿಪಿ ಪ್ರತಾಪ್ ಸಿಂಗ್ ಥೋರಟ್ ಮತ್ತು ಎಸಿಪಿ ಸಿಸಿಬಿ ಮನೋಜ್ ಕುಮಾರ್ ನಾಯಕ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

 ಈ ಪ್ರಕರಣ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 137(2), 310(2) ಅಡಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.