ಪಾರಾಣೆಯಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ

ಪಾರಾಣೆಯಲ್ಲಿ ಹಿಂದೂ ಸಂಗಮ ಶೋಭಾಯಾತ್ರೆ

ವಿರಾಜಪೇಟೆ: ಪಾರಾಣೆ ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ಹಿಂದೂ ಸಂಗಮದ ಅದ್ದೂರಿ ಬೃಹತ್ ಶೋಭಾಯಾತ್ರೆ ನಡೆಯಿತು.

  ಪಾರಾಣೆ ಮೂಲೆ ಅಂಗಡಿಯಿಂದ ಆರಂಭವಾದ ಶೋಭಾಯಾತ್ರೆಯ ಮೆರವಣಿಗೆಗೆ ಭಾರತೀಯ ಸೇನೆಯ ನಿವೃತ್ತ ಯೋಧರಾದ ಕಿರುಂದಾಡು ಗ್ರಾಮದ ಬಿಟ್ಟೀರ ಮನು ಕುಮಾರ್ ಚಾಲನೆ ನೀಡಿದರು.

  ನಂತರ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶೋಭಾಯಾತ್ರೆ ಮೆರವಣಿಗೆ ಪಾರಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಮೀಪ ಮೂಲಕ ತೆರಳಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಸಮಾಪ್ತಿಗೊಂಡಿತು. 

  ವಿವಿಧ ವೇಷಧಾರಿ ಮಕ್ಕಳು, ಭಾರತಾಂಭೆ ಭಾವಚಿತ್ರ, ಒಳಗೊಂಡ ವಾಹನದೊಂದಿಗೆ ಕಳಸ ಹೊತ್ತ ಮಹಿಳೆಯರು, ಕೊಡಗಿನ ವಾಲಗ, ಡೊಳ್ಳು ಕುಣಿತ, ಚಂಡೆವಾಧ್ಯ, ದೇಶ ಭಕ್ತಿಯನ್ನು ಸಾರುವ ಪೋಸ್ಟರ್‌ಗಳು ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಶೋಭಾಯಾತ್ರೆಯ ಮೆರುಗನ್ನು ಹೆಚ್ಚಿಸಿದರು. ಅಧಿಕ ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪುರುಷರು ಮಹಿಳೆಯರಾದಿಯಾಗಿ ಕೇಸರಿ ಶಲ್ಯ ಧರಿಸಿ ಭಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿಬಂದರು.

ಮೆರವಣಿಗೆ ಉದ್ದಕ್ಕೂ ವಿರಾಜಪೇಟೆಯ ನಾಟ್ಯಂಜಲಿ ನೃತ್ಯ ಸಂಸ್ಥೆಯ ಮಕ್ಕಳಿಂದ ಸಾಂಪ್ರದಾಯಿಕ ಭಜನೆ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ಬಳಿಕ ಪಾರಾಣೆ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಹಿಂದೂ ಸಮಾಜದ ಗಣ್ಯರು ಉದ್ಘಾಟಿದರು.

   ಪಾರಾಣೆ ಹಿಂದೂ ಸಂಗಮ ಮಂಡಲ ಅಧ್ಯಕ್ಷ ಎಳ್ತಂಡ ಬೊಪಣ್ಣ ಮಾತನಾಡಿ ಮುಂದಿನ ಯುವ ಪೀಳಿಗೆಗೆ ಧರ್ಮ ಮತ್ತು ಸಂಸ್ಕೃತಿ ಮಹತ್ವದ ಅರಿವು ಮೂಡಿಸಿ ಎಲ್ಲರನ್ನು ಒಗ್ಗೂಡಿಸುವಂತಾಗಬೇಕು ಎಂದರು.

  ಮಹಿಳಾ ಭಾಷಣಗಾರರಾಗಿ ಪಾಲ್ಗೊಂಡ ಕದ್ದಣಿಯಂಡ ವಂದನಾ ಚಿಣ್ಣಪ್ಪ ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ನಮ್ಮ ಹೆಣ್ಣು ಮಕ್ಕಳ ರಕ್ಷಣೆಯಾಗಬೇಕು, ನಮ್ಮ ಹೆಣ್ಣು ಮಕ್ಕಳು ಮತಾಂತರಕ್ಕೆ ಒಳಗಾಗಬಾರದು ಅದಕ್ಕೆ ಬೇಕಾದ ಅರಿವು ಮೂಡಿಸಬೇಕೆಂದರು.

   ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸಂಪರ್ಕ ಸಂಚಾಲಕರಾದ ಕುಟ್ಟಂಡ ಪಿನ್ಸ್ ಬೋಪಣ್ಣ ದಿಕ್ಸೂಚಿ ಭಾಷಣ ಮಾಡಿ ಎಲ್ಲಾ ಗ್ರಾಮಗಳ ಮಂಡಲಗಳಲ್ಲಿ ಈ ರೀತಿಯ ಹಿಂದೂ ಸಂಗಮದ ಮುಖಾಂತರ ಆ ಭಾಗದ ಹಿಂದುಗಳನ್ನು ಸೇರಿಸಿಕೊಂಡು ಹಿಂದೂ ಧರ್ಮ, ನಮ್ಮ ಸಂಸ್ಕೃತಿ, ಸಾಂಪ್ರದಾಯ, ನಮ್ಮ ನಾಗರಿಕತೆ, ಪರಂಪರೆಯನ್ನು ಸ್ಮರಣೆ ಮಾಡಿ, ನೆನಪು ಮಾಡಿ ಇವತ್ತಿನ ಯುವ ಪೀಳಿಗೆಗೆ ನಮ್ಮ ಚಿಂತನೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

  ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಣಂಜಗೇರಿ ಗ್ರಾಮದ ಪೊಂಜಂಡ ಮಂದಣ್ಣ ವಹಿಸಿ ಮಾತನಾಡಿದರು.

  ಕಾರ್ಯಕ್ರಮ ನಿಮಿತ್ತ ತೆರಳುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಕಾರ್ಯಕ್ರವ ಆಯೋಜನಾ ಸ್ಥಳಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

  ಈ ಸಂದರ್ಭ ಹಿಂದೂ ಸಂಗಮದ ಉಪಾಧ್ಯಕ್ಷರಾದ ಬೊಳ್ಳಚೆಟ್ಟಿರ ಜಯಂತಿ, ಕಾರ್ಯದರ್ಶಿ ಪಳಂಗಂಡ ಬೆಳ್ಯಪ್ಪ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಚಾರ ಪಮುಖ್ ಬೊಳಕಾರಂಡ ಶ್ಯಾನ್, ಸೂರಜ್ ವಾಟೆಕಾಡು, ಅಪ್ಪನೆರವಂಡ ರಾಜೇಶ್, ಆಂಗೀರ ಕುಸುಮ ಸೇರಿದಂತೆ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪ್ರಮುಖರು, ಹಿಂದೂ ಸಂಗಮ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತಿತರರು ಇದ್ದರು.