ಐಗೂರು ಮಂಡಲದ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ

ಐಗೂರು ಮಂಡಲದ  ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ

ಸೋಮವಾರಪೇಟೆ: ಐಗೂರು ಮಂಡಲದ ವತಿಯಿಂದ ಹಿಂದೂ ಸಂಗಮ ಕಾರ್ಯಕ್ರಮ ಈಚೆಗೆ ಕಾಜೂರು ಶ್ರೀ ಹರಿಹರ ಯುವಕ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿಕ್ಸೂಚಿ ಭಾಷಣ ಮಾಡಿದ ನವೀನ್ ಸುಬ್ರಮಣ್ಯ, ಹಿಂದೂ ಸಂಗಮ ಕಾರ್ಯಕ್ರಮದ ಮೂಲಕ ನಮ್ಮ ಧರ್ಮವನ್ನು ಉಳಿಸಬೇಕು. ನಮ್ಮ ಸಂಸ್ಕೃತಿಯಲ್ಲಿ ಮಣ್ಣು, ನೀರನ್ನು ದೇವರೆಂದು ಪೂಜಿಸುತ್ತೇವೆ. ಜಾತಿಯತೆಯನ್ನು ತೊಲಗಿಸಿ, ಅದರಿಂದ ಹೊರಬಂದು ಎಲ್ಲಾ ಹಿಂದೂ ಬಾಂಧವರು ಒಗ್ಗಟ್ಟಿನಿಂದ ಬಾಳಿದರೆ ಮಾತ್ರ ಸುಭದ್ರ ದೇಶವನ್ನು ಕಟ್ಟಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೋಂಟದಾರ್ಯ ಮಠದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಹಿಂದೂಗಳೆಲ್ಲರೂ ನಾವೆಲ್ಲರೂ ಬಂಧುಗಳು ಎಂದು ಭಾವಿಸಿಕೊಂಡು ಬದುಕಬೇಕು. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವುದರ ಬದಲು, ದೇಶಪ್ರೇಮ, ಧರ್ಮ ನಿಷ್ಠೆ ಮತ್ತು ಸಂಸ್ಕಾರದ ಬೀಜವನ್ನು ಬಿತ್ತಬೇಕು. ಲವ್ ಜಿಹಾದ್ ನಂತಹ ಸಂಚಿನ ಮೂಲಕ ಹೆಣ್ಣುಮಕ್ಕಳನ್ನು ಮತಾಂತರ ಮಾಡಲಾಗುತ್ತಿದೆ. ಈ ಕುರಿತು ಹಿಂದೂ ಸಮಾಜ ಜಾಗೃತೆ ವಹಿಸಬೇಕು ಎಂದು ಹೇಳಿದರು. 

ಕಾರ್ಯಕ್ರಮಕ್ಕೂ ಮುನ್ನಾ, ಹೊಸತೋಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು. ಐಗೂರಿನ ಚಂಡೆ ಮೇಳದಲ್ಲಿ ಸದ್ದಿನೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಹೊಸತೋಟದ ಗ್ರಾಮದ ಭಾರತ ಮಾತೆಯ ಭವ್ಯ ಮೂರ್ತಿ, ಐಗೂರಿನ ಭಗತ್ ಸಿಂಗ್ ಯುವಕ ಸಂಘದ ಆಂಜನೇಯನ ಸ್ತಬ್ದ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿತ್ತು. 

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ಹಾಗೂ ಪುರುಷರು ಕೇಸರಿ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಶ್ರೀಕೃಷ್ಣ, ರಾಮ, ಸೀತೆ ಮತ್ತು ಓಬವ್ವನ ವೇಷಧಾರಿಗಳಾಗಿದ್ದ ಮಕ್ಕಳು ಜನರ ಗಮನಸೆಳೆದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಗೂರು ಮಂಡಲದ ಹಿಂದೂ ಸಂಗಮ ಸಮಿತಿ ಅಧ್ಯಕ್ಷ ಬಾರನ ಪ್ರಮೋದ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ಸೈನಿಕ ಮೂಲೆಮಜಲು ಕಾಳಪ್ಪ ಇದ್ದರು.