ಮಾರ್ಚ್ 1 ರಂದು ಕಡಗದಾಳುವಿನಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಮತ್ತು ಬೃಹತ್ ಶೋಭಾಯಾತ್ರೆ
ಮಡಿಕೇರಿ;ಹಿಂದೂ ಸಂಗಮ ಆಯೋಜನಾ ಸಮಿತಿ ಕಡಗದಾಳು ವತಿಯಿಂದ ಮಾರ್ಚ್ 1 ರಂದು ಭಾನುವಾರ ಹಿಂದೂ ಸಂಗಮ ಕಾರ್ಯಕ್ರಮ ಮತ್ತು ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಮಾತೃಭೂಮಿ, ಹಿಂದೂ ಸಂಸ್ಕೃತಿ, ಆಚಾರ, ವಿಚಾರ, ಪರಂಪರೆ, ಸಂಪ್ರದಾಯವನ್ನು ರಕ್ಷಣೆ ಮಾಡುವುದರ ಜೊತೆಗೆ ಉಳಿಸಿ ಬೆಳೆಸುವ ಮೂಲಕ ಸುಭದ್ರವಾದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಪ್ರತಿಯೊಬ್ಬ ಹಿಂದೂ ಕೂಡ ಸಂಘಟಿತವಾಗುವ ಮೂಲಕ ಹಿಂದುತ್ವದ ವಿಚಾರದಲ್ಲಿ ಮುಂದಾಲೋಚನೆಯೊಂದಿಗೆ ಬದುಕಿದರೆ ಮಾತ್ರ ಹಿಂದೂ ಧರ್ಮ ಮತ್ತು ಸಂಸ್ಕೃತಿಯಲ್ಲಿ ಉಳಿಸಲು ಸಾಧ್ಯ. ಮಾತೃ ಭೂಮಿಯ ರಕ್ಷಣೆ ಜೊತೆಗೆ ಧರ್ಮವನ್ನು ಉಳಿಸುವ ಉದ್ದೇಶವಾಗಿ ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆಗೊಂಡಿದೆ.
ಹಿಂದೂ ಸಂಗಮ ಕಾರ್ಯಕ್ರಮದ ಪ್ರಯುಕ್ತ ಭವ್ಯ ಶೋಭಾಯಾತ್ರೆ ಕಡಗದಾಳು ಸರಕಾರಿ ಪ್ರೌಢ ಶಾಲಾ ಮೈದಾನದಿಂದ ಬೆಳಗ್ಗೆ 10.30 ಗಂಟೆಗೆ ಆರಂಭವಾಗಲಿದೆ. ಕಳಶ ಹೊತ್ತ ಮಹಿಳೆಯರು, ಸ್ತಬ್ಧಚಿತ್ರ, ಭಜನೆ, ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿದೆ. ಕೊಡಗಿನ ಸಾಂಪ್ರದಾಯಿಕ ವಾಲಗ, ಚಂಡೆ ವಾದ್ಯ, ಸಾಂಪ್ರದಾಯಿಕ ಉಡುಗೆ, ಛದ್ಮವೇಷ ತೊಟ್ಟ ಮಕ್ಕಳು ವಿಶೇಷ ಮೆರುಗು ತುಂಬಲಿದ್ದಾರೆ.
ಕಡಗದಾಳು ಮಂಡಲ ವ್ಯಾಪ್ತಿಯ ಬೋಯಿಕೇರಿ, ನೀರುಕೊಲ್ಲಿ, ಕತ್ತಲೆಕಾಡು, ಕ್ಲೋಸ್ಬರ್ನ್, ಕಡಗದಾಳು ಭಾಗದ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ 12 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.ಭಾರತ ಮಾತೆಗೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಹಿಂದು ಸಂಗಮ ಯೋಜನಾ ಸಮಿತಿ ಅಧ್ಯಕ್ಷ ಮಾದೇಟಿರ ಬೆಳ್ಯಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉಜಿರೆಯ ಶಿವಪ್ರಸಾದ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ.
ಮಂಡಲ ವ್ಯಾಪ್ತಿಯ ಮಾಜಿ ಸೈನಿಕರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಬಳಿಕ ಸಹಭೋಜನ ವ್ಯವಸ್ಥೆ ಇರಲಿದೆ. ಭವ್ಯ ಹಿಂದು ಸಂಗಮ ಕಾರ್ಯಕ್ರಮಕ್ಕೆ ಮಂಡಲ ವ್ಯಾಪ್ತಿಯ ಹಿಂದುಗಳು ಪಾಲ್ಗೊಳ್ಳುವಂತೆ ಆಯೋಜಕರು ಕೋರಿದ್ದಾರೆ.