ಕೂಡಮಂಗಳೂರಿನಲ್ಲಿ ಹಿಂದೂ ಸಂಗಮ ಕಾರ್ಯಕ್ರಮ
ಕುಶಾಲನಗರ : ಸಾವಿರಾರು ವರ್ಷಗಳ ಇತಿಹಾಸ ಇರುವ ತಾಯಿ ಭಾರತಾಂಬೆಯ ನೆಲದಲ್ಲಿ ಕುಟುಂಬ ಪದ್ಧತಿ ಗಟ್ಟಿಯಾಗಿರುವ ಕಾರಣ ಇಲ್ಲಿನ ಸಂಸ್ಕ್ರತಿ ಹಾಗೂ ಪರಂಪರೆಯನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಾಗದ ಕಾರಣ ಭಾರತವಾಗಿಯೇ ಈ ದೇಶ ಉಳಿದಿದ್ದು ವಿಶ್ವಕ್ಕೆ ಜ್ಞಾನದ ಬೆಳಕು ನೀಡಿದ ದೇಶ ಭಾರತ ಎಂದು ಮರುಡೇಶ್ವರದ ಜಿತೇಂದ್ರ ಹೇಳಿದರು.
ಕೂಡುಮಂಗಳೂರು ಗ್ರಾಮದ ದೊಡ್ಡಮ್ಮ ದೇವಾಲಯದ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಜಗತ್ತಿಗೆ ಅಮೃತತ್ವದ ಹಾಲು ಕುಡಿಸಿ ತೊಟ್ಟಿಲಲ್ಲಿ ಇಟ್ಟು ಹಾಲುಣಿಸಿದ ಮಾತೃದೇಶ ನಮ್ಮದು.
ಸಂಘಕ್ಕೆ 100 ವರ್ಷ ಸಂದ ಅಂಗವಾಗಿ ದೇಶವ್ಯಾಪಿ 80 ಸಾವಿರ ಮಂಡಲಗಳಲ್ಲಿ ಹಿಂದೂ ಸಂಗಮ ನಡೆಯುತ್ತಿದೆ ಎಂದರು. ಸಾನಿಧ್ಯ ವಹಿಸಿದ್ದ ಶನಿವಾರಸಂತೆ ಮುಳ್ಳೂರಿನ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಹಿಂದೂಗಳ ಒಗ್ಗಟ್ಟು, ಐಕ್ಯತೆ ಹಾಗೂ ಸಾಮರಸ್ಯ ಕ್ಕಾಗಿ ಹಿಂದೂ ಸಂಗಮ ಕಾರ್ಯಕ್ರಮಗಳು ದೇಶದೆಲ್ಲೆಡೆ ನಡೆಯುತ್ತಿವೆ. ಆದಾಗ್ಯೂ ಹಿಂದೂ ಗಳು ಜಾಗೃತಗೊಂಡು ಹಿಂದೂ ಸಮಾಜಕ್ಕೆ ಆಗುತ್ತಿರುವ ಸಮಸ್ಯೆಗಳ ವಿರುದ್ಧ ಪ್ರತಿಭಟಿಸದಿದ್ದಲ್ಲಿ ಭವಿಷ್ಯದಲ್ಲಿ ಮತಾಂಧರಿಂದ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪ್ರಚೋದನಾತ್ಮಕ ಭಾಷಣದ ವಿರೋಧಿ ಕಾಯಿದೆ ಜಾರಿಗೆ ತರುವುದಾದರೆ, ನಾನು ಮೀನು ತಿಂದು ಬಂದೆ ಎಂದು ಹಿಂದೂಗಳ ಶ್ರದ್ಧಾ ಕೇಂದ್ರ ಧರ್ಮಸ್ಥಳದ ಮಂಜುನಾಥ ಸನ್ನಿಧಿಯಲ್ಲಿ ಬಹಳಷ್ಟು ಜಂಭದಿಂದ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಳೆದ ವಾರ ಸದನದಲ್ಲಿ ಆರ್ ಎಸ್ ಎಸ್ ಬಗ್ಗೆ ಲಘುವಾಗಿ ಮಾತನಾಡಿದ ಅರಸೀಕೆರೆಯ ಶಾಸಕರ ವಿರುದ್ಧ ದೂರು ದಾಖಲಿಸಬೇಕಲ್ಲವೇ ಎಂದು ಶ್ರೀಗಳು ಪ್ರಶ್ನಿಸಿದರು.
ಬಸವಾಪಟ್ಟಣದ ಶ್ರೀ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕುಶಾಲನಗರ ತಾಲ್ಲೂಕು ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ದೇವಿಪ್ರಸಾದ್, ಮಂಡಲ ಸಂಯೋಜಕರಾದ ಸಿ.ಸಿ.ಸ್ವಾಮಿ, ಸಹ ಸಂಯೋಜಕರಾದ ವಿಮಲ್ ನಾಯರ್, ಕೂಡಿಗೆಯ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದಿಂದ ಹೊರಟ ಶೋಭಾಯಾತ್ರೆಗೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ಕೂಡ್ಲೂರು ಉದ್ಯಮಿ ಕೆ.ಎನ್.ಪವನ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕುಶಾಲನಗರದ ವಿವೇಕಾನಂದ ಕಾಲೇಜು ಆಡಳಿತಾಧಿಕಾರಿ ಮಹೇಶ್ ಅಮೀನ್ ವಂದೇ ಮಾತರಂ ದೇಶ ಭಕ್ತಿಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ದೇಶಭಕ್ತರು ಹಾಗೂ ವೀರ ರಾಣಿಯರ ಛದ್ಮವೇಶ ಗಮನ ಸೆಳೆಯಿತು. ಹಾಗೆಯೇ ಕಿಕ್ ಬಾಕ್ಸಿಂಗ್ ವಿಜೇತೆ ಕೂಡುಮಂಗಳೂರಿನ ಬಾಲ ಪ್ರತಿಭೆ ಆಜ್ಞಾ ಅವರನ್ನು ಗುರುತಿಸಿ ಗೌರವಿಸಲಾಯಿತು.