ಫೆ.06ರಿಂದ 10ರವರೆಗೆ ಇತಿಹಾಸ ಪ್ರಸಿದ್ಧ ಚೆರಿಯಪರಂಬು ಮಖಾಂ ಉರೂಸ್

Jan 30, 2026 - 17:05
 0  138
ಫೆ.06ರಿಂದ 10ರವರೆಗೆ ಇತಿಹಾಸ ಪ್ರಸಿದ್ಧ ಚೆರಿಯಪರಂಬು ಮಖಾಂ ಉರೂಸ್

ಮಡಿಕೇರಿ ಜ.೩೦ : ಇತಿಹಾಸ ಪ್ರಸಿದ್ಧ ಚೆರಿಯಪರಂಬು ಮಖಾಂ ಉರೂಸ್ ಸಮಾರಂಭವು ಫೆ.೬ ರಿಂದ ೧೦ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಚೆರಿಯಪರಂಬು ಜಮಾಅತ್ ಪ್ರಧಾನ ಕಾರ್ಯದರ್ಶಿ ಪರವಂಡ.ಎ.ಸಿರಾಜ್ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆರಿಯಪರಂಬು ದರ್ಗಾ ಶರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶಹೀದ್ ಅಬ್ದುಲ್ ರಹ್ಮಾನ್ ವಲಿಯುಲ್ಲಾಹಿ (ನ.ಮ)ಹಾಗೂ ಹೌಲಿಯಾಗಳ ಹೆಸರಿನಲ್ಲಿ ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಫೆ.೬ ರಂದು ಜುಮಾ ನಮಾಜ್ ನಂತರ ಉರೂಸ್‌ಗೆ ಚಾಲನೆ ದೊರೆಯಲಿದೆ. ಇದೇ ಸಂದರ್ಭ ಗ್ರಾಮಸ್ಥರೆಲ್ಲರೂ ಮಸೀದಿಯಿಂದ ನೇರವಾಗಿ ದರ್ಗಾಶರೀಫ್ ಆಗಮಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇದರ ನೇತೃತ್ವವನ್ನು ಚೆರಿಯಪರಂಬು ಜಮಾಅತ್ ಖತೀಬರಾದ ಮುಹಮ್ಮದ್ ಶಫೀಕ್ ಅಲಿ ಸಿರಾಜಿ ಉಸ್ತಾದ್ ಅವರು ವಹಿಸಲಿದ್ದಾರೆ. ಮಧ್ಯಾಹ್ನ ೨ ಗಂಟೆಗೆ ಜಮಾಅತ್ತಿನ ಅಧ್ಯಕ್ಷರಾದ ಪಿ.ಎ.ಅಹಮದ್ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು. ಮಗ್ರಿಬ್ ನಮಾಝಿನ ಬಳಿಕ ಮಖಾಂ ಅಲಂಕಾರ ಹಾಗೂ ಖತಂ ದುಆ ಮಜ್ಲಿಸ್ ನಡೆಯಲಿದ್ದು, ನಿಝಾರ್ ಅಹ್ಸನಿ ಕಕ್ಕಡಿಪುರಂ ಉಸ್ತಾದ್ ಅವರು ನೇತೃತ್ವ ನೀಡಲಿದ್ದಾರೆ.

ಸಂಜೆ ೭ ಗಂಟೆಗೆ ಝಬೈರ್ ಮಾಸ್ಟರ್ ತೋಟಿಕ್ಕಲ್ ಮತ್ತು ಸಂಗಡಿಗರು ನಡೆಸಿಕೊಡಲಿರುವ ಕಥಾ ಪ್ರಸಂಗ ಗಮನ ಸೆಳೆಯಲಿದೆ ಎಂದು ತಿಳಿಸಿದರು. ಫೆ.೭ ಸಂಜೆ ೭ ಗಂಟೆಗೆ ಸಿಂಸಾರುಲ್ ಹಖ್ ಹುದವಿ ಅಬುಧಾಬಿ ಪ್ರಭಾಷಣ ಮಾಡಲಿದ್ದಾರೆ. ಫೆ.೮ ಸಂಜೆ ೭ ಗಂಟೆಗೆ ಅಬ್ದಲ್ ಲತೀಫ್ ಸಖಾಫಿ ಕಾಂತಪುರಂ ಅವರ ನೇತೃತ್ವದಲ್ಲಿ ಮದನಿಯಂ ನಡೆಯಲಿದೆ. ಫೆ.೯ ಮಧ್ಯಾಹ್ನ ಸಯ್ಯಿದ್ ಇಲ್ಯಾಸ್ ಅಲ್ ಹೈದರೂಸಿ ಎರುಮಾಡ್ ತಂಙಳ್ ನೇತೃತ್ವದಲ್ಲಿ ದುಆ ಮಸ್ಲಿಸ್ ಜರುಗಲಿದೆ ಎಂದು ಹೇಳಿದರು.

ಸಂಜೆ ೭ ಗಂಟೆಗೆ ಚೆರಿಯಪರಂಬು ಖತೀಬರಾದ ಮಹಮ್ಮದ್ ಶಫೀಕ್ ಅಲಿ ಸಿರಾಜಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಸಂಜೆ ೪ ಗಂಟೆಗೆ ಸಾರ್ವಜನಿಕರಿಗೆ ಅನ್ನದಾನ ನಡೆಯಲಿದೆ ಎಂದು ಸಿರಾಜ್ ತಿಳಿಸಿದರು. ಫೆ.೧೦ ರಂದು ಸಂಜೆ ೭ ಗಂಟೆಗೆ ಸಾರ್ವಜನಿಕ ಸಮ್ಮೇಳನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಅಧ್ಯಕ್ಷತೆಯನ್ನು ಜಮಾಅತ್ತಿನ ಅಧ್ಯಕ್ಷರಾದ ಅಹಮದ್ ವಹಿಸಲಿದ್ದಾರೆ.

ಜಮಾಅತ್ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್ ಸ್ವಾಗತಿಸಲಿದ್ದು, ಕೊಡಗು ನಾಇಬ್ ಖಾಝಿ ಶೈಖುನಾ ಎಂ.ಎಂ.ಅಬ್ದುಲ್ಲಾ ಫೈಝಿ ಎಡಪಾಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ ಪ್ರಾರ್ಥನೆಗೆ ನೇತೃತ್ವ ನೀಡಲಿದ್ದಾರೆ ಎಂದರು. ಹಾಫಿರ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸೇರಿದಂತೆ ಹಲವಾರು ರಾಜಕೀಯ ನಾಯಕರು ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ.

 ಪ್ರತೀ ದಿನ ರಾತ್ರಿ ಚೆರಿಯಪರಂಬು ದಫ್ ಸಂಗದ ನೇತೃತ್ವದಲ್ಲಿ ದಫ್ ಮುಟ್ ಪ್ರದರ್ಶನ ನಡೆಯಲಿದೆ ಪರವಂಡ.ಎ.ಸಿರಾಜ್ ಎಂದು ತಿಳಿಸಿದರು. ಚೆರಿಯಪರಂಬು ಜಮಾಅತ್ ಖತೀಬರಾದ ಪಿ.ಮೊಹಮ್ಮದ್ ಶಫಿಕ್ ಅಲಿ ಸಿರಾಜಿ ಅವರು ಮಾತನಾಡಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿಕೊಡಬೇಕಾಗಿ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಚೆರಿಯಪರಂಬು ಜಮಾಅತ್‌ನ ಅಧ್ಯಕ್ಷ ಪಿ.ಎ.ಅಹಮ್ಮದ್, ಉಪಾಧ್ಯಕ್ಷ ಪಿ.ಎಂ.ಇಬ್ರಾಹಿಂ, ಕೋಶಾಧಿಕಾರಿ ಪಿ.ಹೆಚ್.ಬಶೀರ್, ಸದಸ್ಯ ಪಿ.ಎಂ.ಮೊಹಿದು ಕುಞಿ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0