ಹೊದ್ದೂರು ಗ್ರಾಮ ಪಂಚಾಯಿತಿ ಪಿಡಿಓ ಎ.ಎ ಅಬ್ದುಲ್ಲ ವರ್ಗಾವಣೆ: ದೂರದೃಷ್ಟಿಯ ಅಭಿವೃದ್ಧಿ ಅಧಿಕಾರಿ ಎ.ಎ ಅಬ್ದುಲ್ಲ:ಬೀಳ್ಕೊಡುಗೆ ಸಮಾರಂಭದಲ್ಲಿ ಗಣ್ಯರ ಅಭಿಮತ

ಹೊದ್ದೂರು ಗ್ರಾಮ ಪಂಚಾಯಿತಿ ಪಿಡಿಓ ಎ.ಎ ಅಬ್ದುಲ್ಲ ವರ್ಗಾವಣೆ:  ದೂರದೃಷ್ಟಿಯ ಅಭಿವೃದ್ಧಿ ಅಧಿಕಾರಿ ಎ.ಎ ಅಬ್ದುಲ್ಲ:ಬೀಳ್ಕೊಡುಗೆ ಸಮಾರಂಭದಲ್ಲಿ ಗಣ್ಯರ ಅಭಿಮತ

ಮಡಿಕೇರಿ:2019ರಿಂದ 2025ರವರೆಗೆ ಹೊದ್ದೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಇದೀಗ ಹೊಸ್ಕೇರಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಯಾಗಿರುವ ಎ.ಎ ಅಬ್ದುಲ್ಲ ಅವರು ದೂರದೃಷ್ಟಿ ಹಾಗೂ ಕ್ರಿಯಾಶೀಲ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ ಎಂದು, ಹೊದ್ದೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

 ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಎಫ್.ಎಂ.ಸಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಚೌರೀರ ಜಗತ್ ತಿಮ್ಮಯ್ಯ, ಹೊದ್ದೂರು ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿದೆ.ಅಭಿವೃದ್ಧಿ ಕೆಲಸ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಗ್ರಾಮ ಪಂಚಾಯಿತಿ ಸುಸಜ್ಜಿತ ಕಟ್ಟಡ ಹೊಂದಿದೆ.ಇದೆಲ್ಲವೂ ಸಾಧಿಸಿಸಲು ದೂರದೃಷ್ಟಿ ಮತ್ತು ಅಭಿವೃದ್ಧಿಯ ಚಿಂತನೆ ಹೊಂದಿರುವ ಅಭಿವೃದ್ಧಿ‌ ಅಧಿಕಾರಿ ಅಬ್ದುಲ್ಲ ಅವರ ಕೆಲಸದಿಂದ ಸಾಧ್ಯವಾಗಿದೆ‌. ಅಬ್ದುಲ್ಲ ಅವರು ಒಬ್ಬ ಕೆಲಸಗಾರ.ಕೊಡಗಿನ ಅಭಿವೃದ್ಧಿ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ ಎಂದರು.

 ಮಡಿಕೇರಿ ತಾಲ್ಲೂಕು ಹಿಂದುಳಿ ವರ್ಗಗಳ ಅಧಿಕಾರಿ ಕವಿತಾ ಮಾತನಾಡಿ,ಇಡೀ ದೇಶವೇ ಹೊದ್ದೂರು ಗ್ರಾಮ ಪಂಚಾಯತಿಯತ್ತ ಮುಖ ಮಾಡಿ ನೋಡುವಂತೆ ಅಬ್ದುಲ್ಲ ಅವರು ಕಾರ್ಯನಿರ್ವಹಿಸಿದ್ದಾರೆ.ಡಿಜಿಟಲ್ ಲೈಬ್ರರಿ ಸ್ಥಾಪಿಸುವ ಮೂಲಕ ಇಡೀ ದೇಶಕ್ಕೆ ಪಿಡಿಓ ಅಬ್ದುಲ್ಲ ಅವರು ಮಾದರಿಯಾಗಿದ್ದಾರೆ. ಎಲ್ಲದರಲ್ಲೂ ಹೊಸತನ ಹುಡುಕುವ ಅಬ್ದುಲ್ಲ ಅವರ ಉತ್ತಮ ವ್ಯಕ್ತಿತ್ವದ ಒಡೆಯ ಎಂದು ಕವಿತ ಅವರು ಹೇಳಿದರು.

ಮಡಿಕೇರಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೇಖರ್ ಮಾತನಾಡಿ,ಅಬ್ದುಲ್ಲ ಅವರು ಶಕ್ತಿಯಾಗಿ ಕೆಲಸ ಮಾಡುವ ವ್ಯಕ್ತಿ. ಹುದ್ದೆ ಗೌರವ ತಂದುಕೊಟ್ಟ ವ್ಯಕ್ತಿ.ಅಬ್ದುಲ್ಲ ಅವರು ಜಿಲ್ಲೆಗೆ ಕಿರೀಟವಿದ್ದಂತೆ‌. ಸಮಸ್ಯೆಗೆ ಪರಿಹಾರ ಕಂಡುಕೊಂಡು ಸಾರ್ವಜನಿಕ ಸ್ನೇಹಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಅರಿವು ಪಡೆದು, ಆಡಳಿತ ಮಂಡಳಿಯ ವಿಶ್ವಾಸ ಪಡೆದು ದೂರದೃಷ್ಟಿಯಿಂದ ಕೆಲಸ ಮಾಡಿದ್ದಾರೆ.

ಡಿಜಿಟಲ್ ಗ್ರಂಥಾಲಯ ಸ್ಥಾಪಿಸುವ ಮೂಲಕ ಹೊದ್ದೂರು ದೇಶಕ್ಕೆ ಮಾದರಿಯಾಗಿದೆ. ಅಬ್ದುಲ್ಲ ಅವರ ಕನಸಿನ ಕಲ್ಪನೆ ಎಲ್ಲೆಡೆ ಪಸರಿಸಿದೆ ಎಂದು ಶೇಖರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ,ಗ್ರಾ.ಪಂ ಅಧ್ಯಕ್ಷ ಹಂಸ ಕೊಟ್ಟಮುಡಿ,ನಾನು ಕಳೆದ 25 ವರ್ಷಗಳಿಂದ ಸದಸ್ಯನಾಗಿ,ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ನನ್ನ ಸಾರ್ವಜನಿಕ ಜೀವನದಲ್ಲಿ ಅಬ್ದುಲ್ಲ ಅವರ ರೀತಿಯಲ್ಲಿ ಜನರಿಗಾಗಿ ದುಡಿಯುವ ಅಭಿವೃದ್ಧಿ ಅಧಿಕಾರಿ ಇದುವರೆಗೆ ನೋಡಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದುಕೊಂಡು,ಸಮನ್ವಯದಿಂದ ಕೆಲಸ ಮಾಡಿದ್ದಾರೆ‌. ಅಬ್ದುಲ್ಲ ಅವರು,ಸ್ವಂತ ಸಂಬಳದಿಂದ ಕೋವಿಡ್,ಪ್ರಕೃತಿ ಸಂದರ್ಭದಲ್ಲಿ ಕಿಟ್ ಕೊಟ್ಟಿದ್ದಾರೆ. ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಗ್ರಾ.ಪಂ ಹಲವು ಪ್ರಶಸ್ತಿ ಪಡೆಯಲು ಅಬ್ದುಲ್ಲ ಅವರ ದೂರದೃಷ್ಟಿಯ ಯೋಜನೆಗಳು ಕಾರಣ ಎಂದು ಹಂಸ ಕೊಟ್ಟಮುಡಿ ಹೇಳಿದರು.

ಗ್ರಾ.ಪಂ ಆಡಳಿತ ಮಂಡಳಿ,ಹೊದ್ದೂರು ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅಭಿವೃದ್ಧಿ ಅಧಿಕಾರಿ ಎಎ ಅಬ್ದುಲ್ಲ,ಹೊದ್ದೂರು ಗ್ರಾ.ಪಂ ನನ್ನ ಜೀವನದಲ್ಲಿ ಮರೆಯಲಾಗದ ನೆನಪುಗಳನ್ನು ಕೊಟ್ಟಿದೆ.ಇಲ್ಲಿಯ ಜನತೆ ಪ್ರೀತಿ ನೀಡಿದ್ದಾರೆ. ನನ್ನ ಸಿಬ್ಬಂದಿ ವರ್ಗ ಹಾಗೂ ಗ್ರಾ.ಪಂ ಆಡಳಿತ ಮಂಡಳಿಯವರ ಸಹಕಾರ ಮತ್ತು ಬೆಂಬಲದಿಂದ ಕಳೆದ ಏಳು ವರ್ಷಗಳಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ.

ಎಲ್ಲರಿಂದಾಗಿ ಹೊದ್ದೂರು ಗ್ರಾ.ಪಂ ಇಡೀ ದೇಶಕ್ಕೆ ಮಾದರಿಯಾಗಿದೆ. ಏಳು ವರ್ಷಗಳ ಕಾಲ ಹೊದ್ದೂರು ಗ್ರಾ.ಪಂ ಪಂಚಾಯಿತಿಯ ಸೇವೆ ಹಲವು ನೆನಪುಗಳು ಮತ್ತು ಅನುಭವವನ್ನು ನೀಡಿದೆ ಎಂದು ಅಬ್ದುಲ್ಲ ಅವರು ಹೇಳಿದರು.

 ಭಾವುಕರಾದ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು; ಕಳೆದ ಏಳು ವರ್ಷಗಳ ಕಾಲ ಹೊದ್ದೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಹೊಸ್ಕೇರಿ ಗ್ರಾಮ ಪಂಚಾಯಿತಿಗೆ ವರ್ಗಾವಣೆಗೊಂಡಿರುವ ಅಬ್ದುಲ್ಲ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗ,ಗ್ರಾಮ ಪಂಚಾಯತ್ ಸದಸ್ಯರು,ಗ್ರಾಮಸ್ಥರು ಅಬ್ದುಲ್ಲ ಅವರ ಸೇವೆಯನ್ನು ನೆನೆದು ಭಾವುಕರಾದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಹಮೀದ್,ಮೊಣ್ಣಪ್ಪ ಮಾತನಾಡಿದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಅನುರಾಧ, ಗ್ರಾಮಸ್ಥರಾದ ಪ್ರೀತಮ್ ಪೊನ್ನಪ್ಪ ,ಗ್ರಾಮ ಪಂಚಾಯತ್ ,ಸ್ಥಳ ದಾನಿಗಳಾದ ಪದ್ಮಾ ಕೋರನ,ರಾಜೇಂದ್ರ ಅಭಿವೃದ್ಧಿ ಅಧಿಕಾರಿ ವತ್ಸಲ, ಸಮಾಜ ಸೇವಕ ಸುಬ್ರಮಣಿ,ಗ್ರಾಮ ಆಡಳಿತಾಧಿಕಾರಿ ಸಂತೋಷ್ ಪಾಟೀಲ್, ಮಾಜಿ ಅಧ್ಯಕ್ಷ ದಿನೇಶ್,ಹಂಸ ಮುಸ್ಲಿಯಾರ್,ಜಿಲ್ಲಾ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ರವೀಶ್,ಅಹ್ಮದ್ ಹೊದವಾಡ,ಬಲ್ಲಮಾವಟಿ ಗ್ರಾ.ಪಂ ಪಿಡಿಓ ಶರತ್ ಪೂಣಚ್ಚ,ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯರು,ಸಿಬ್ಬಂದಿ ವರ್ಗದವರು,ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮಸ್ಥರು, ಪಿಡಿಓ ಅಬ್ದುಲ್ಲ ಅವರ ಕುಟುಂಬಸ್ಥರು ಹಾಜರಿದ್ದರು.