ಹೊಸ್ಕೇರಿ;ಕುಡಿದ ಮತ್ತಿನಲ್ಲಿ ತಂದೆಯನ್ನೇ ಹತ್ಯೆಗೈದ ಮಗ! ತೋಟದ ಮಾಲೀಕರು ಮಾಡಿದ್ದೇನು ಗೊತ್ತಾ!
ಮಡಿಕೇರಿ:ಮಗ ತನ್ನ ತಂದೆಯನ್ನೇ ಕುಡಿದ ಮತ್ತಿನಲ್ಲಿ ಹೊಡೆದು ಹತ್ಯೆ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಮರಗೋಡು ಸಮೀಪದ ಹೊಸ್ಕೇರಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಜ.11ರಂದು ಹೊಸ್ಕೇರಿ ಗ್ರಾಮದ ದೇವಯ್ಯ ಎಂಬುವವರಿಗೆ ಸೇರಿದ ಲೈನ್ ಮನೆಯಲ್ಲಿ ಘಟನೆ ನಡೆದಿದ್ದು,ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಲೈನ್ ಮನೆಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಳ ಮೂಲದ ಕಾರ್ಮಿಕ ಬೂರೋ ಎಂಬಾತನೊಂದಿಗೆ ಆತನ ಪುತ್ರ ಪ್ರಶಾಂತ್ ಎಂಬಾತ ಕುಡಿದ ಮತ್ತಿನಲ್ಲಿ ಜಗಳವಾಡಿ ದೊಣ್ಣೆಯಿಂದ ಹೊಡೆದು ಹತ್ಯೆಗೈದಿದ್ದ.ಬಳಿಕ ಈ ವಿಷಯ ತಿಳಿದ ತೋಟದ ಮಾಲೀಕ ದೇವಯ್ಯ ಹಾಗೂ ಅವರ ಪತ್ನಿ ಭಾರತಿ ಘಟನೆ ನಡೆದ ಬಳಿಕ ಕೊಲೆ ವಿಚಾರವನ್ನು ಯಾರಿಗೂ ಮಾಹಿತಿ ನೀಡದೆ ಇಡೀ ಘಟನೆಯನ್ನೇ ಮುಚ್ಚಿ ಹಾಕುವ ಭಾಗವಾಗಿ ಮೃತದೇಹವನ್ನು ಮಡಿಕೇರಿಯ ಹಿಂದೂ ರುದ್ರಭೂಮಿಯೊಂದಕ್ಕೆ ಸಾಗಿಸಿ ಸುಟ್ಟು ಹಾಕಿದ್ದಾರೆ.
ಈ ಬಗ್ಗೆ ದೊರೆತ ದೂರಿನ್ವಯ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ತನಿಖೆಕೈಗೊಂಡು ಬುರೋನನ್ನು ಹತ್ಯೆಗೈದ ಪ್ರಶಾಂತ್ ಹಾಗೂ ಕೊಲೆಯ ವಿಚಾರವನ್ನು ಯಾರಿಗೂ ತಿಳಿಸದೆ ಶವವನ್ನು ಸಾಗಿಸಿ ಸುಟ್ಟುಹಾಕಿದ ದೇವಯ್ಯ ಹಾಗೂ ಭಾರತಿ ಅವರುಗಳನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಶವ ಸಾಗಾಟಕ್ಕೆ ಸಹಕಾರ ನೀಡಿದ್ದ ಇತರ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.