ಕೊಡಗಿನಲ್ಲಿ ಮಾನವ-ವನ್ಯಜೀವಿ ಸಂಘರ್ಷ: ಕೊಡವ ಸಮಾಜ ಬೆಂಗಳೂರು ನಿಯೋಗದಿಂದ ಅರಣ್ಯಾಧಿಕಾರಿಗಳ ಭೇಟಿ
ಬೆಂಗಳೂರು:ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮನುಷ್ಯ-ವನ್ಯಜೀವಿ ಸಂಘರ್ಷ ಹಾಗೂ ನಾಗರಿಕರ ಸಾವಿನ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದ ಕೊಡವ ಸಮಾಜ ಬೆಂಗಳೂರು KSB ನಿಯೋಗವು ಶುಕ್ರವಾರ ಅರಣ್ಯ ಭವನದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಮೀನಾಕ್ಷಿ ನೇಗಿ, IFoS ಅವರನ್ನು ಭೇಟಿ ಮಾಡಿ ವಿವರವಾದ ಚರ್ಚೆ ನಡೆಸಿದರು.
ಕೊಡವ ಸಮಾಜ ಬೆಂಗಳೂರು ಇದರ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರ ನೇತೃತ್ವದ ನಿಯೋಗದಲ್ಲಿ ನಿರ್ವಹಣಾ ಸಮಿತಿ ಮತ್ತು ಕಾನೂನು ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು.
ಕೊಡಗಿನ ಸ್ಥಳೀಯ ವಾಸ್ತವ, ಜನರ ಸಂಕಷ್ಟ ಹಾಗೂ ಕೃಷಿ ನಾಶದ ಬಗ್ಗೆ ಇಲಾಖೆಗೆ ಮನವರಿಕೆ ಮಾಡಿಕೊಟ್ಟ ನಿಯೋಗವು ಸಮುದಾಯ ಮತ್ತು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರಮುಖ ಬೇಡಿಕೆಗಳು:*
. ರೈಲ್ವೆ ಬ್ಯಾರಿಕೇಡ್ ಬೇಲಿ*: ಆನೆಗಳ ದಾಳಿ ಹೆಚ್ಚಿರುವ ದುರ್ಬಲ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ ಬೇಲಿ ಅಳವಡಿಸಿ ಮಾನವ ವಸತಿ ಹಾಗೂ ಕೃಷಿ ಭೂಮಿಗೆ ಆನೆಗಳು ನುಗ್ಗುವುದನ್ನು ತಡೆಯಬೇಕು.
*2. ಸಫಾರಿ ತಾತ್ಕಾಲಿಕ ಸ್ಥಗಿತ*: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಚಟುವಟಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ವನ್ಯಜೀವಿಗಳು ಕಾಡಿನಿಂದ ಊರು ಮತ್ತು ತೋಟಗಳಿಗೆ ಬರಲು ಕಾರಣವಾದ ಮೂಲ ಕಾರಣಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಬೇಕು.
. *3. ಸಮಸ್ಯಾತ್ಮಕ ಪ್ರಾಣಿ ಸ್ಥಳಾಂತರ*: ಪದೇ ಪದೇ ಮಾನವ ವಸತಿಗಳಿಗೆ ನುಗ್ಗುವ ಅಭ್ಯಾಸ ಹೊಂದಿರುವ "ಹ್ಯಾಬಿಟ್ಯುಯಲ್ ಕಾನ್ಫ್ಲಿಕ್ಟ್" ಆನೆಗಳನ್ನು ಗುರುತಿಸಿ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಬೇಕು.
*4. ಹಿಂಡು ಸ್ಥಳಾಂತರ*: ಕಾಫಿ ಎಸ್ಟೇಟ್ ಪ್ರದೇಶಗಳಲ್ಲೇ ಶಾಶ್ವತವಾಗಿ ನೆಲೆಸಿ ಪದೇ ಪದೇ ಸಂಘರ್ಷ ಸೃಷ್ಟಿಸುತ್ತಿರುವ ಸಂಪೂರ್ಣ ಆನೆ ಹಿಂಡುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು.
*5. ಜನಸಂಖ್ಯೆ ನಿರ್ವಹಣೆ*: ವೈಜ್ಞಾನಿಕ ಮತ್ತು ಕಾನೂನುಬದ್ಧವಾಗಿ ಸಾಧ್ಯವಿರುವ ಕಡೆಗಳಲ್ಲಿ ವನ್ಯಜೀವಿ ಜನಸಂಖ್ಯೆ ನಿರ್ವಹಣಾ ಕ್ರಮಗಳನ್ನು ಜಾರಿಗೊಳಿಸಬೇಕು.
*6. ಮೇವು ಬೆಳೆ*: ಕಾಡಿನೊಳಗೆ ಮೇವು ಜಾತಿಯ ಸಸ್ಯಗಳು, ಬಿದಿರು, ಹಲಸು ಸೇರಿದಂತೆ ಸ್ಥಳೀಯ ಸಸ್ಯಗಳನ್ನು ಬೆಳೆಸಿ ವನ್ಯಜೀವಿಗಳಿಗೆ ನೈಸರ್ಗಿಕ ಆಹಾರ ಲಭ್ಯವಾಗುವಂತೆ ಮಾಡಬೇಕು.
*7. ಲಂಟಾನಾ ನಿಯಂತ್ರಣ*: ಕಾಡಿನ ಗುಣಮಟ್ಟ ಹಾಳು ಮಾಡಿ ವನ್ಯಜೀವಿಗಳ ಆವಾಸಸ್ಥಾನಕ್ಕೆ ಹಾನಿ ಉಂಟು ಮಾಡುತ್ತಿರುವ ಆಕ್ರಮಣಕಾರಿ ಲಂಟಾನಾ ಸಸ್ಯವನ್ನು ತುರ್ತಾಗಿ ನಿಯಂತ್ರಿಸಬೇಕೆಂದು ಮನವಿ ಮಾಡಿದರು.

