2 ಕೋಟಿ ವಿಮೆ ಹಣಕ್ಕಾಗಿ ಪತಿಯ ಕೊಲೆ: ಪ್ರಿಯಕರನೊಂದಿಗೆ ಪತ್ನಿಯ ಸಂಚು ಬಹಿರಂಗ

2 ಕೋಟಿ ವಿಮೆ ಹಣಕ್ಕಾಗಿ ಪತಿಯ ಕೊಲೆ: ಪ್ರಿಯಕರನೊಂದಿಗೆ ಪತ್ನಿಯ ಸಂಚು ಬಹಿರಂಗ

ಹೈದರಾಬಾದ್: ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿಮಾ ಹಣ ಪಡೆಯುವ ಉದ್ದೇಶದಿಂದ ಪತಿಯನ್ನು ಕೊಂದು, ಸಾವನ್ನು ಹೃದಯಾಘಾತ ಎಂದು ಬಿಂಬಿಸಿದ ಪತ್ನಿಯ ಸಂಚು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.

ಮಕ್ಲೂರು ಮಂಡಲದ ಬೋರ್ಗಮ್ (ಕೆ) ಗ್ರಾಮದ ನಿವಾಸಿ ಪಲ್ನಾಟಿ ರಮೇಶ್ (40) ಕೊಲೆಯಾದ ವ್ಯಕ್ತಿ. ಆರೋಪಿಯಾಗಿರುವ ಸೌಮ್ಯಾ ರಮೇಶ್ ಅವರನ್ನು ಸುಮಾರು 13 ವರ್ಷಗಳ ಹಿಂದೆ ಮದುವೆಯಾಗಿದ್ದಳು. ದಂಪತಿ ನಿಜಾಮಾಬಾದ್ ಜಿಲ್ಲೆಯಲ್ಲಿ ವಾಸವಾಗಿದ್ದರು.

ರಮೇಶ್ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಸೌಮ್ಯಾ ಖಾಸಗಿ ಶಾಲೆಯೊಂದರಲ್ಲಿ ಉದ್ಯೋಗದಲ್ಲಿದ್ದಳು. ತನಿಖೆಯಲ್ಲಿ ಸೌಮ್ಯಾ ಅದೇ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಿಲೀಪ್ ಜೊತೆ ಅಕ್ರಮ ಸಂಬಂಧ ಹೊಂದಿದ್ದದ್ದು ಬೆಳಕಿಗೆ ಬಂದಿದೆ. ಈ ಸಂಬಂಧದ ವಿಚಾರವಾಗಿ ಪತಿ–ಪತ್ನಿ ನಡುವೆ ಆಗಾಗ್ಗೆ ಕಲಹಗಳು ನಡೆಯುತ್ತಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಪತಿಯನ್ನು ದೂರ ಮಾಡುವ ಉದ್ದೇಶದಿಂದ ಸೌಮ್ಯಾ ಹಾಗೂ ದಿಲೀಪ್ ಸೇರಿ ಕೊಲೆಗೆ ಸಂಚು ರೂಪಿಸಿದ್ದರು. ಈ ಯೋಜನೆಯ ಭಾಗವಾಗಿ ದಿಲೀಪ್ ತನ್ನ ಸಂಬಂಧಿ ಅಭಿಷೇಕ್ ಮೂಲಕ ಜಿತೇಂದರ್ ಎಂಬ ಗುತ್ತಿಗೆ ಕೊಲೆಗಾರನನ್ನು ಸಂಪರ್ಕಿಸಿದ್ದಾನೆ. ಬಳಿಕ ಇನ್ನೂ ಮೂವರು ಸದಸ್ಯರನ್ನು ತಂಡಕ್ಕೆ ಸೇರಿಸಲಾಗಿತ್ತು. ಮುಂಗಡ ಹಣಕ್ಕಾಗಿ ಸೌಮ್ಯಾ ತನ್ನ ಉಂಗುರವನ್ನು ಅಡವಿಟ್ಟು 35 ಸಾವಿರ ರೂ. ನೀಡಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಮೊದಲ ಕೊಲೆ ಯತ್ನ 2025ರ ಆಗಸ್ಟ್‌ನಲ್ಲಿ ನಡೆದಿತ್ತು. ಅರ್ಮೂರ್‌ನಿಂದ ನಿಜಾಮಾಬಾದ್‌ಗೆ ತೆರಳುತ್ತಿದ್ದ ರಮೇಶ್ ಅವರ ಬೈಕ್‌ಗೆ ಕಾರು ಡಿಕ್ಕಿ ಹೊಡೆಯಲು ಯತ್ನಿಸಲಾಗಿತ್ತು. ಆದರೆ ಅವರು ಅಪಾಯದಿಂದ ಪಾರಾಗಿ ಮಕ್ಲೂರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿದ್ದರೂ ಆರೋಪಿಗಳು ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು.

ಡಿಸೆಂಬರ್ 19ರ ರಾತ್ರಿ ಊಟದ ಬಳಿಕ ಸೌಮ್ಯಾ ನಿದ್ರೆ ಮಾತ್ರೆಗಳನ್ನು ನೀರಿನಲ್ಲಿ ಬೆರೆಸಿ ಪತಿಗೆ ನೀಡಿದ್ದಾಳೆ ಎನ್ನಲಾಗಿದೆ. ರಮೇಶ್ ಗಾಢ ನಿದ್ರೆಗೆ ಜಾರಿದ ಬಳಿಕ ದಿಲೀಪ್ ಹಾಗೂ ಅಭಿಷೇಕ್ ಬೋರ್ಗಮ್ ಗ್ರಾಮಕ್ಕೆ ತೆರಳಿ, ಟವಲ್‌ನಿಂದ ಕತ್ತು ಹಿಸುಕಿ ಹಾಗೂ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ನಂತರ ಸೌಮ್ಯಾ ರಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿ ಯಾವುದೇ ಅನುಮಾನ ಉಂಟಾಗದಂತೆ ಅಂತ್ಯಕ್ರಿಯೆ ನಡೆಸಿದ್ದಾಳೆ. ಆದರೆ ಇಸ್ರೇಲ್‌ನಲ್ಲಿ ವಾಸವಾಗಿರುವ ರಮೇಶ್ ಅವರ ಸಹೋದರ ಕೇತಿರ್ ಅನುಮಾನ ವ್ಯಕ್ತಪಡಿಸಿ ಮಕ್ಲೂರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ತಿರುವು ದೊರಕಿತು.

ಡಿಸೆಂಬರ್ 24ರಂದು ಶವವನ್ನು ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸಿದಾಗ, ಕೊಲೆ ನಡೆದಿರುವುದು ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಸೌಮ್ಯಾ, ದಿಲೀಪ್, ಅಭಿಷೇಕ್ ಸೇರಿದಂತೆ ಗುತ್ತಿಗೆ ಹತ್ಯೆ ತಂಡದ ಹಲವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೊಹ್ಸಿನ್ ಎಂಬ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ವೇಳೆ ರಮೇಶ್ ಅವರ ಹೆಸರಿನಲ್ಲಿ 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹಲವು ವಿಮಾ ಪಾಲಿಸಿಗಳು ಇದ್ದುದನ್ನು ಸೌಮ್ಯಾ ಒಪ್ಪಿಕೊಂಡಿದ್ದಾಳೆ. ವಿಮಾ ಹಣಕ್ಕಾಗಿ ಹಾಗೂ ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸುವ ಉದ್ದೇಶದಿಂದ ಈ ಕೊಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.