ಕನ್ನಡ ಬಿಗ್ ಬಾಸ್ | ಶೋ ಸೆಟ್ ಗೆ ತಹಶೀಲ್ದಾರ್ ಬೀಗ, ಚಿತ್ರೀಕರಣ ಸ್ಥಗಿತ
ರಾಮನಗರ, ಅ.7: ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪದಲ್ಲಿ ಕನ್ನಡ ಬಿಗ್ ಬಾಸ್ ಶೋ ಸೆಟ್ ಗೆ ತಹಶೀಲ್ದಾರ್ ಬೀಗ ಹಾಕಿದ್ದಾರೆ.
ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದ್ದ ಜಾಲಿವುಡ್ ಎಂಟರ್ಟೈನ್ಮೆಂಟ್ ಪಾರ್ಕ್ಗೆ ಮಂಗಳವಾರ ತಹಶೀಲ್ದಾರ್ ತೇಜಸ್ವಿನಿ ಅವರು ಬೀಗ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀಡಿದ ನೋಟಿಸ್ ಹಿನ್ನೆಲೆಯಲ್ಲಿ, ತಾಲ್ಲೂಕು ಆಡಳಿತದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪಾರ್ಕ್ನಲ್ಲಿ ನಡೆಯುತ್ತಿದ್ದ ಶೋ ಚಿತ್ರೀಕರಣವೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.
ಸ್ಥಳೀಯ ಅಧಿಕಾರಿಗಳು ತಿಳಿಸಿದಂತೆ, ಪಾರ್ಕ್ ಕಾರ್ಯಾಚರಣೆಗಾಗಿ ಅಗತ್ಯ ಪರವಾನಗಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೇ ಚಟುವಟಿಕೆಗಳು ನಡೆಯುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ.