ಕಾನೂರು; ಬ್ರಹ್ಮಗಿರಿಪುರದಲ್ಲಿ ಮುತ್ತಪ್ಪ ದೇವರ ಉತ್ಸವ
ಕಾನೂರು: ವಿರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಬ್ರಹ್ಮಗಿರಿಪುರದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮುತ್ತಪ್ಪ ದೇವರ ಉತ್ಸವ ಇತ್ತೀಚೆಗೆ ವಿಜ್ರಂಭಣೆಯಿಂದ ಆಚರಿಸಲಾಯಿತು. ಭಾನುವಾರ ಸಂಜೆ ೬ ಗಂಟೆಗೆ ಮುತ್ತಪ್ಪನ ವೆಳ್ಳಾಟಂನೊಂದಿಗೆ ಆರಂಭವಾದ ಉತ್ಸವ, ರಾತ್ರಿ ೧೨ ಗಂಟೆಗೆ ಬಂದಂತಹ ಭಗವತಿ ದೇವರ ತೆರೆಯು ನೆರೆದಿದ್ದ ಭಕ್ತಾಧಿಗಳನ್ನು ಹಿಡಿದುಕೊಳ್ಳುವ ರೀತಿಯಲ್ಲಿ ಅಟ್ಟಾಡಿಸುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು.
ಮಂಗಳವಾರ ಬೆಳಗ್ಗೆ ೪ರ ವೇಳೆ ಎತ್ತರದ ಗರಿಗಳನ್ನು ಕಟ್ಟಿಕೊಂಡು ಎರೆಡು ಕೋಲುಗಳ ಮೇಲೆ ನಡೆಯುತ್ತಿದ್ದ ಗುಳಿಗ ದೇವರ ತೆರೆ, ಅಗ್ನಿ ಕುಂಡದ ಮೇಲೆ ಓಡುವ ಕುಟ್ಟಿಚಾತನ್ ಒಂದೆಡೆ ಕುಣಿಯುತ್ತಿದ್ದರೆ ಮತ್ತೊಂದೆಡೆ ಮುತ್ತಪ್ಪ ಮತ್ತು ತಿರುವಪ್ಪ ದೇವರ ಬಳಿ ಉತ್ಸವದಲ್ಲಿ ಭಾಗಿಯಾದ ಭಕ್ತಾದಿಗಳು ಆರ್ಶಿವಾದ ಪಡೆದುಕೊಂಡರು. ಮುತ್ತಪ್ಪ, ತಿರುವಪ್ಪ, ಸಾಸ್ತಪ್ಪನ್, ಕುಟ್ಟಿಚಾತನ್, ವಸೂರಿಮಲೆ, ಭಗವತಿ, ಗುಳಿಗನ್, ಕಂಡಕರ್ಣ ಹೀಗೆ ವಿವಿಧ ರೀತಿಯ ತೆರೆಗಳನ್ನು ಕಟ್ಟಲಾಗಿತ್ತು.
ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮದ ೧೦೦೦ ಕ್ಕೂ ಅಧಿಕ ಭಕ್ತಾದಿಗಳು ಆರ್ಶಿವಾದ ಪಡೆದರು. ಭಾನುವಾರ ರಾತ್ರಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ದೇವಾಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಈಶ್ವರ, ಕಾರ್ಯದರ್ಶಿ ಕಾರ್ತಿಕ್, ಸದಸ್ಯರಾದ ವಿನು, ರವಿ, ರಾಜೇಶ್, ವಿಜಯ್, ಸುನಿ, ಅನಿ, ಸಂತೋಷ್, ಮಂಜುನಾಥ್, ಮಣಿ, ರಘು ಸೇರಿದಂತೆ ಇತರರಿದ್ದರು.