ಶ್ರದ್ಧಾ-ಭಕ್ತಿಯಿಂದ ನೆರವೇರಿದ ಕರಡಿಗೋಡು ಶ್ರೀ ಬಸವೇಶ್ವರ ದೇವರ ವಾರ್ಷಿಕೋತ್ಸವ

ಶ್ರದ್ಧಾ-ಭಕ್ತಿಯಿಂದ ನೆರವೇರಿದ ಕರಡಿಗೋಡು ಶ್ರೀ ಬಸವೇಶ್ವರ ದೇವರ ವಾರ್ಷಿಕೋತ್ಸವ

ಸಿದ್ದಾಪುರ:- ಕರಡಿಗೋಡು ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವರ ವಾರ್ಷಿಕೋತ್ಸವವು ಮೂರು ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಭಕ್ತಿಭಾವದಿಂದ ವಿಜೃಂಭಣೆಯಿಂದ ನೆರವೇರಿತು.

ತಂತ್ರಿ ಬಿಳಿಗೇರಿ ಉದಯ ಕುಮಾರ್ ಅವರ ನೇತೃತ್ವದಲ್ಲಿ ಭಾನುವಾರ ಸಂಜೆ ಗೋ ಪೂಜೆ, ನಿತ್ಯ ಪೂಜೆ ಹಾಗೂ ತೆಕ್ಕರ ಮನೆಯಿಂದ ಭಂಡಾರ ಇಳಿಸುವ ಕಾರ್ಯಕ್ರಮಗಳು ನಡೆದವು. ಸೋಮವಾರ ಬೆಳಗ್ಗೆ 8.30ಕ್ಕೆ ಗಣಪತಿ ಹೋಮ, 10 ಗಂಟೆಗೆ ಕಲಶ ಪೂಜೆ, 11 ಗಂಟೆಗೆ ಗಂಗಾ ಸ್ನಾನ ನೆರವೇರಿತು. ಬಳಿಕ ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು.

ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಜರುಗಿ, ತೀರ್ಥ ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ನಡೆಯಿತು. ಮಧ್ಯಾಹ್ನ 3.30ಕ್ಕೆ ದೇವರ ಮನೆ ಮೆರವಣಿಗೆ ಹಾಗೂ ಸಂಜೆ 7 ಗಂಟೆಗೆ ಕೊಂಡ ಪೂಜೆ ನಡೆಯಿತು. ಮಂಗಳವಾರ ಬೆಳಗ್ಗೆ 8 ಗಂಟೆಗೆ ರುದ್ರಪಾರಾಯಣ, 10 ಗಂಟೆಗೆ ದೇವತಾ ಪ್ರಾರ್ಥನೆ, ಗಂಗಾ ಪೂಜೆ ಹಾಗೂ ಗಂಗಾ ಸ್ನಾನ ನೆರವೇರಿತು.

ನಂತರ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಕೊಂಡ ಸೇವೆ, ಮಹಾಪೂಜೆ, ಹರಕ್ಕೆ ಒಪ್ಪಿಸುವುದು, ತೀರ್ಥ ಪ್ರಸಾದ, ಅನ್ನ ಸಂತರ್ಪಣೆ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮಗಳು ಶ್ರದ್ದಾ ಭಕ್ತಿಯಿಂದ ನಡೆದವು. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪಡೆದುಕೊಂಡರು.