ಕುಶಾಲನಗರ;ಕಾವೇರಿ ನದಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಒಬ್ಬನ ಮೃತದೇಹ ಪತ್ತೆ
ಕುಶಾಲನಗರ, ಜೂ 11: ಬುಧವಾರ ಸಂಜೆ ಕಾವೇರಿ ನದಿಯಲ್ಲಿ ಈಜಲು ತೆರಳಿದ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಓರ್ವನ ಮೃತದೇಹ ಗುರುವಾರ ಸಂಜೆ ಪತ್ತೆಯಾಗಿದೆ. ನಾಗಾಲಾಂಡ್ ರಾಜ್ಯದ ಬಸೋಸೊ ಕುಂ ಚಂಗ್ (23) ಎಂಬಾತನ ಮೃತದೇಹ ಪತ್ತೆಯಾಗಿದೆ.
ಮೃತ ಚಂಗ್ ಹಾಗೂ ಈತನ ಸಂಗಡಿಗ ಯಾಂಕಾಂಗ್ (27) ಕುಶಾಲನಗರದ ಹೋಟೆಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಕೆಲಸಕ್ಕೆ ರಜೆ ಮಾಡಿ ಸಂಜೆ ನದಿಯತ್ತ ತೆರಳಿದ್ದಾರೆ.ನದಿ ದಡದಲ್ಲಿ ಪಾರ್ಟಿ ಮಾಡಿದ ಬಳಿಕ ಇಬ್ಬರು ಯುವಕರು ನದಿಗಿಳಿದಿದ್ದಾರೆ. ಈ ಸಂದರ್ಭಇಬ್ಬರು ಕಣ್ಮರೆಯಾಗಿದ್ದರು.
ಕಾಣೆಯಾದವರಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಸಂಜೆ ತನಕ ಶೋಧ ಕಾರ್ಯಾಚರಣೆ ನಡೆಸಿದರು. ಗುರುವಾರ ಸಂಜೆ ಓರ್ವನ ಮೃತದೇಹ ನೀರಿನಿಂದ ಮೇಲೆದ್ದಿದೆ. ಸಮಾಜ ಸೇವಕ ಆಟೋ ಚಾಲಕ ಮುನೀರ್ ಮೃತದೇಹ ನೀರಿನಿಂದ ಮೇಲಕ್ಕೆತ್ತಿದ್ದಾರೆ. ಕತ್ತಲೆಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಮತ್ತೊಬ್ಬನ ಮೃತದೇಹ ಪತ್ತೆಯಾಗಬೇಕಿದೆ.

