ಕುಶಾಲನಗರದ ವೀರಶೈವ ಮಹಾಸಭಾದಿಂದ ಶಾಮನೂರರಿಗೆ ಶ್ರದ್ಧಾಂಜಲಿ
ಕುಶಾಲನಗರ : ನಾಡು ಕಂಡ ಅಪರೂಪದ ರಾಜಕಾರಣಿ, ಶಿಕ್ಷಣ ಪ್ರೇಮಿ, ಸಮಾಜದ ಸಂಘಟಕ, ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರರ ಅಗಲಿಕೆ ಇಡೀ ನಾಡಿಗೆ ತುಂಬಲಾರದ ನಷ್ಟ ಎಂದು ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಹೆಚ್.ವಿ.ಶಿವಪ್ಪ ವಿಷಾದಿಸಿದರು.
ಕುಶಾಲನಗರದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಆವರಣದಲ್ಲಿ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಶಾಮನೂರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಅವರದ್ದೇ ಆದ ಕಲ್ಪನೆಯಲ್ಲಿ ದಾವಣಗೆರೆ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಿದ್ದಲ್ಲದೇ 50 ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಹಸ್ರ ಮಂದಿಗೆ ಬೆಳಕಾದವರು.
ವೀರಶೈವ ಸಮಾಜವನ್ನು ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸಿ ಸಮಾಜದ ಪ್ರಶ್ನಾತೀತ ನಾಯಕರಾಗಿದ್ದರು ಎಂದು ಶಿವಪ್ಪ ಬಣ್ಣಿಸಿದರು.
ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಶಾಂಭಶಿವಯ್ಯ ಮಾತನಾಡಿ, ವೀರಶೈವ ಸಮಾಜದಲ್ಲಿ ಗುಂಪುಗಳಾಗದಂತೆ ಎಚ್ಚರಿಕೆ ವಹಿಸಿ ಇಳಿ ವಯಸ್ಸನ್ನೂ ಲೆಕ್ಕಿಸದೇ ದಾವಣಗೆರೆಯಲ್ಲಿ ಪಂಚಪೀಠಗಳ ಶ್ರೀಗಳನ್ನು ಒಂದೆಡೆ ಸೇರಿಸಿ ನಡೆಸಿದ ಬೃಹತ್ ಸಮಾವೇಶ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ದಾವಣಗೆರೆ ಜಿಲ್ಲೆಯ ಅಜ್ಜಾ ಎಂದೇ ಖ್ಯಾತರಾಗಿದ್ದ ಶಾಮನೂರರ ಶೈಕ್ಷಣಿಕ, ಔದ್ಯೋಗಿಕ ಕ್ರಾಂತಿ ಅವಿಸ್ಮರಣೀಯ.
ತಮ್ಮ ಬಳಿ ಬರುವ ಎಲ್ಲಾ ಜಾತಿಯವರಿಗೂ ಸಹಾಯ ಹಸ್ತ ನೀಡುತ್ತಿದ್ದರು.
ಲಿಂಗಾಯತ ವೀರಶೈವ ಸಮಾಜದ ಧೀಶಕ್ತಿಯಾಗಿದ್ದ ಶಾಮನೂರರು ಸಂತನಂತೆ ಬದುಕು ನಡೆಸಿ ಮರೆಯಾಗಿದ್ದು ಸಮಾಜಕ್ಕೆ ಬಹಳ ನಷ್ಟ ಎಂದರು.
ವೀರಶೈವ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಿಕಾ ಕರುಣ, ವೀರಶೈವ ಸಮಾಜದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ನಂದೀಶ್, ಕುಶಾಲನಗರ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎಂ.ಮಧುಸೂದನ್, ಕಾರ್ಯದರ್ಶಿ ಧರ್ಮೇಂದ್ರ, ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್, ಪ್ರಮುಖರಾದ ಮನುದೇವಿ, ಲೇಖನಾ ಧರ್ಮೇಂದ್ರ, ಮಮತಾ ರವೀಶ್, ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಬಿ.ನಟರಾಜು, ಬಸವೇಶ್ವರ ಸಹಕಾರ ಸಂಘದ ಉಪಾಧ್ಯಕ್ಷ ಹೆಚ್.ಪಿ. ಉದಯಕುಮಾರ್, ಸಿಇಒ ಬಸವಣ್ಣಯ್ಯ, ದಯಾನಂದ ಇದ್ದರು.
