ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರ್ಕಾರಿ ಶುಶ್ರೂಷಾ ಕಾಲೇಜು ಮಡಿಕೇರಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಬೆಳಗುವಿಕೆ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ
ಮಡಿಕೇರಿ, ಮಾರ್ಚ್ 25: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರ್ಕಾರಿ ಶುಶ್ರೂಷಾ ಕಾಲೇಜಿನಲ್ಲಿ 6ನೇ ಬ್ಯಾಚ್ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ದೀಪ ಬೆಳಗುವಿಕೆ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಕಾರ್ಯಕ್ರಮವನ್ನು 4ನೇ ವರ್ಷದ ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ಆಶಿತಾ ರವರ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ನಂತರ ಗಣ್ಯ ಅತಿಥಿಗಳ ಸಾನಿಧ್ಯದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನಡೆಯಿತು.
ಡೀನ್ ಹಾಗೂ ನಿರ್ದೇಶಕರಾದ ಡಾ. ಲೋಕೆಶ್ ಎ.ಜೆ ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು
ಸರ್ಕಾರಿ ಶುಶ್ರೂಷಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಂಜುಳ ಎ.ಕೆ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ದೀಪ ಬೆಳಗುವಿಕೆ ಹಾಗೂ ಪ್ರತಿಜ್ಞಾ ವಿಧಿ ನರ್ಸಿಂಗ್ ವೃತ್ತಿಯ ಪವಿತ್ರ ಸಾಂಪ್ರದಾಯಿಕ ಆಚರಣೆ ಎಂದು ವಿವರಿಸಿ, ವಿದ್ಯಾರ್ಥಿಗಳು ಸೇವಾಭಾವನೆ ಮತ್ತು ಶಿಸ್ತಿನಿಂದ ವೃತ್ತಿಯನ್ನು ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ದೀಪ ಹಚ್ಚಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಸಹ ಪ್ರಾಧ್ಯಾಪಕರಾದ ಗುರುಪಾದ ಕೆ.ಪಿ ಅವರು ಕಾಲೇಜಿನ ಸಾಧನೆಗಳನ್ನು ಉಲ್ಲೇಖಿಸಿ, ಸಂಸ್ಥೆಯಿಂದ ವರ್ಷಂಪ್ರತಿ 100 ವಿದ್ಯಾರ್ಥಿಗಳು ನರ್ಸಿಂಗ್ ಕ್ಷೇತ್ರದಲ್ಲಿ ಪದವೀಧರರಾಗುತ್ತಿರುವರು ಹಾಗೂ ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಕಾಲೇಜಿನ ಹೆಮ್ಮೆಯ ವಿಷಯ ಎಂದು ಪ್ರಸ್ತಾಪಿಸಿದರು.
ಮತ್ತೊಬ್ಬ ಸಹ ಪ್ರಾಧ್ಯಾಪಕರಾದ ಮಾರ್ಟಿನ್ ಲೂಥರ್ ಕಿಂಗ್ ಅವರು ಆಸ್ಪತ್ರೆಗಳಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಪಾತ್ರ, ನಡವಳಿಕೆ ಮತ್ತು ರೋಗಿಗಳೊಂದಿಗೆ ಮಾನವೀಯತೆಯಿಂದ ವರ್ತಿಸುವ ಅಗತ್ಯವನ್ನು ವಿವರಿಸಿದರು.
ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ರೋಹಿಣಿ ಕೆ.ಎಂ ಅವರು ವಿದ್ಯಾರ್ಥಿಗಳೇ ಸಂಸ್ಥೆಯ ಬಲ ಎಂದು ತಿಳಿಸಿ, ಅವರ ಸಮರ್ಪಣೆ ಮತ್ತು ಶ್ರಮದಿಂದ ಸಂಸ್ಥೆ ಮತ್ತಷ್ಟು ಬೆಳೆದು ನಿಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪಾಂಶುಪಾಲರ ಅಧ್ಯಕ್ಷೀಯ ಭಾಷಣದಲ್ಲಿ ಡಾ. ವಿಶಾಲ್ ಕುಮಾರ್ ಅವರು ನರ್ಸಿಂಗ್ ವೃತ್ತಿಯ ಜವಾಬ್ದಾರಿಗಳು, ಆಸ್ಪತ್ರೆಗಳಲ್ಲಿ ಕಾರ್ಯವೈಖರಿ ಹಾಗೂ ನೈತಿಕ ಮೌಲ್ಯಗಳ ಮಹತ್ವವನ್ನು ವಿವರಿಸಿದರು
ಕಾರ್ಯಕ್ರಮದಲ್ಲಿ ಸರ್ಕಾರಿ ಶುಶ್ರೂಷ ಕಾಲೇಜಿನ ಪ್ರಾಧ್ಯಾಪಕರಾದ ದೀಪರಾಜ್ ಸಿ.ಎಂ, ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಕೆ.ಎನ್, ರಂಜಿನಿ ಎಸ್.ಎನ್, ಗೀತಾ ಕೆ.ಬಿ, ಕ್ರಿಯಾ ಶಾಸ್ತ್ರ ವಿಭಾಗದ ಡಾ. ಸುಹಾಸ್,ಸಮುದಾಯ ಆರೋಗ್ಯ ವಿಭಾಗದ ಡಾ. ಮಹೇಶ್, ಡಾ. ಶರವಣ, ಡಾ. ಕೃತಿಕಾ, ಗ್ರಂಥಪಾಲಕರಾದ ಡಾ. ಸ್ವಾಮಿ ನಾಯಕ್ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ನಾಲ್ಕನೇ ವರ್ಷದ ವಿದ್ಯಾರ್ಥಿಗಳಾದ ಚಂದನಾ ಹಾಗೂ ವೇದಾ ನಿರ್ವಹಿಸಿದರು, ನಾಲ್ಕನೇ ವರ್ಷದ ಬಿ ಎಸ್ಸಿ ನರ್ಸಿಂಗ್ ವಿದ್ಯಾರ್ಥಿ ಜೀವಿತಾ ಸ್ವಾಗತ ನಡೆಸಿ, ಕೃಷಿಕಾ ವಂದನಾರ್ಪಣೆ ಸಲ್ಲಿಸಿದರು.