ಬುಡಕಟ್ಟು ಕೊಡವ ಪರಂಪರೆಯ ಮೂಲ ಬೇರು ಜಾನಪದ ಇತಿಹಾಸ ಅಳಿಯದಿರಲಿ : ಚಾಮೆರ ದಿನೇಶ್ ಬೆಳ್ಯಪ್ಪ
ಮಡಿಕೇರಿ; ಬುಡಕಟ್ಟು ಪರಂಪರೆಯ ಕೊಡವ ಇತಿಹಾಸದ ಮೂಲ ಬೇರಾಗಿರುವ ಕೊಡವ ಜಾನಪದ ಆಚರಣೆಗಳು ಅಳಿಯದಂತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಸಕ್ತಿಯೊಂದಿಗೆ ಆಚರಣೆಗೂ ಮುಂದಾಗಬೇಕೆಂದು, ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಹೇಳಿದರು.
ಇತ್ತೀಚೆಗೆ ಮೈಸೂರಿನ ವಿಜಯನಗರದಲ್ಲಿರುವ ಪಡಿಪು ಕಯ್ಯಾಲೆ ಕಲಾ ಸಂಸ್ಥೆಯ ಸದಸ್ಯರಿಗೆ ಜಾನಪದೀಯ ಉಮ್ಮತ್ತಿರುವೊ ತರಬೇತಿ ಶಿಬಿರದಲ್ಲಿ ತರಬೇತುದಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಬುಡಕಟ್ಟು ಸಂಸ್ಕೃತಿಯ ಮೂಲದಿಂದ ಬಂದಿರುವ ಕೊಡವ ಇತಿಹಾಸದ ಮೂಲ ಬೇರು ಜಾನಪದ, ನಮ್ಮ ಸಂಸ್ಕೃತಿಯ ಪ್ರತೀ ಆಚರಣೆ ಮತ್ತು ಪದ್ಧತಿಗಳೂ ಕೂಡ ಜಾನಪದೀಯವಾಗಿ ಬಾಯಿಂದ ಬಾಯಿಗೆ, ಮತ್ತು ಪರಸ್ಪರ ಆಚರಣೆಯಿಂದ ಬಂದಂತವು.
ಅದರಂತೆ ಉಮ್ಮತ್ತಿರುವೊ ಪದ್ದತಿಕೂಡ ತಲತಲಾಂತರದಿಂದ ಆಚರಿಸಲ್ಪಡುತ್ತಿದ್ದರೂ, ಆಧುನೀಕತೆಯ ಹೊಡೆತದಲ್ಲಿ ಮರೆಯಾಗುವ ಹಂತದಲ್ಲಿದೆ. ಆದರೂ ಏಳ್ನಾಡಿನ ಸೂರ್ಲಬ್ಬಿ ಭಾಗದಲ್ಲಿ ಇಂದಿಗೂ ಜೀವಂತ ಇರುವ ಈ ಆಚರಣೆ, ಮುನ್ನೆಲೆಗೆ ಬಂದು ಮತ್ತೊಮ್ಮೆ ಜನಮಾನಸದಲ್ಲಿ ನೆಲೆಸಬೇಕು.
ಈ ನಿಟ್ಟಿನಲ್ಲಿ ಪಡಿಪು ಕಯ್ಯಾಲೆ ಕಲಾವಿದರ ಮುತುವರ್ಜಿ ಮತ್ತು ಆಸಕ್ತಿಯಿಂದ ತರಬೇತಿ ಪ್ರಾರಂಭಿಸಿದ್ದು ಕೊಡವ ಬುಡಕಟ್ಟು ಸಂಸ್ಕೃತಿಯ ಬೆಳವಣಿಗೆಗೆ ಪೂರಕ ಎಂದರು. ಮೈಸೂರು ವಿಜಯ ನಗರ ಮೂರನೇ ಹಂತದದಲ್ಲಿರು ವಿ.ಕೆ ಪಬ್ಲಿಕ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಡಿಪುಕಯ್ಯಾಲೆ ಸಂಸ್ಥೆಯ ಅಧ್ಯಕ್ಷೆ ಕುಲ್ಲಚಂಡ ವಿನುತಾ ಕೇಸರಿ ಸೇರಿದಂತೆ ಪದಾಧಿಕಾರಿಗಳು, ಕಲಾವಿದರು ಭಾಗವಹಿಸಿದ್ದರು.