ಸುಂದರನಗರ ಬಾವಿ ಕಟ್ಟೆಗೆ ಲಾರಿ ಡಿಕ್ಕಿ: ಪೊಲೀಸ್ ದೂರು
ಕುಶಾಲನಗರ,ಜ೨೯: ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಸುಂದರನಗರದ ಐತಿಹಾಸಿಕ ಬಾವಿ ಕಟ್ಟಿಗೆ ಅಂತರರಾಜ್ಯ ಲಾರಿಯೊಂದು ಡಿಕ್ಕಿಪಡಿಸಿದ ಹಿನ್ನಲೆ ಬಾವಿ ಕಟ್ಟೆಗೆ ಹಾನಿಯಾಗಿದ್ದು, ಕೂಡುಮಂಗಳೂರು ಗ್ರಾಮ ಪಂಚಾಯಿತಿ ವತಿಯಿಂದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ನಾಲ್ಕೈದು ದಶಕಗಳ ಇತಿಹಾಸವಿರುವ ಬಾವಿಕಟ್ಟೆಗೆ ಆಂದ್ರಪ್ರದೇಶದ ಕಾಫಿ ಸಾಗಿಸುತ್ತಿದ್ದ ಲಾರಿ ಡಿಕ್ಕಿಪಡಿಸಿದೆ. ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಿದ ಹಿನ್ನಲೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ಈ ಘಟನೆ ಬಗ್ಗೆ ಗ್ರಾಮಸ್ಥರು ಪಂಚಾಯಿತಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರಿಗೆ ಮಾಹಿತಿ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪಿಡಿಓ ಗೆ ಮಾಹಿತಿ ನೀಡಿ ದೂರು ನೀಡುವಂತೆ ತಿಳಿಸಿದರು.
ನಂತರ ಗ್ರಾಮಸ್ಥರಾದ ತಂಬಿ, ಕಾರ್ತಿಕ್, ಹರೀಶ್, ರಫೀಕ್, ಗಣೇಶ್ ಹಾಗೂ ಕೆ.ಬಿ.ಶಂಶುದ್ಧೀನ್ ಅವರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದರು. ನಂತರ ಪಿಡಿಓ ಸಂತೋಷ್ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಮಾತನಾಡಿದ ವಾರ್ಡ್ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ಸುಂದರನಗರದ ಐತಿಹಾಸಿಕ ಬಾವಿಕಟ್ಟೆಯನ್ನು ಅಂತರರಾಜ್ಯ ಲಾರಿ ಡಿಕ್ಕಿಪಡಿಸಿದೆ. ಚಾಲಕ ಪಾನಮತ್ತನಾಗಿ ವಾಹನ ಚಲಾಯಿಸಿದ ಹಿನ್ನಲೆ ಅಪಘಾತ ಸಂಭವಿಸಿದೆ. ಈ ಬಗ್ಗೆ ಪೊಲೀಸ್ ದೂರು ನೀಡಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಸುಂದರನಗರ ಸರ್ಕಲ್ ನಲ್ಲಿ ಕೆಲವು ಲಾರಿ ಹಾಗೂ ಭಾರೀ ವಾಹನಗಳು ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ.
ಈ ಬಗ್ಗೆ ಸಂಚಾರಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಹಿರಿಯರಾದ ಅಣ್ಣಯ್ಯ.ಎಚ್ ಮಾತನಾಡಿ, ಗುಂಡೂರಾವ್ ಅವರ ಕೃಪೆಯಿಂದ ಕೈಗಾರಿಕಾ ಪ್ರದೇಶ ಸ್ಥಾಪನೆಯಾಗಿದೆ. ಈ ಹಿನ್ನಲೆ ಸರ್ಕಲ್ ನಲ್ಲಿ ಅವರ ಪ್ರತಿಮೆ ನಿರ್ಮಾಣ ಮಾಡಬೇಕೆಂದಿದ್ದೆವು. ಆ ಸ್ಥಳದಲ್ಲಿದ್ದ ಬಾವಿಕಟ್ಟೆಗೆ ಲಾರಿ ಡಿಕ್ಕಿ ಹೊಡೆದಿದೆ. ಸೂಕ್ತ ರೀತಿಯಲ್ಲಿ ಬಾವಿಕಟ್ಟೆಯನ್ನು ಸರಿಪಡಿಸಿಕೊಡಬೇಕು ಎಂದರು.
ಅನಾಹುತ ತಡೆಗಟ್ಟುವ ಉದ್ದೇಶದಿಂದ ಬಾವಿ ಕಟ್ಟೆ ಬಳಿ ಯಾರೂ ಧಾವಿಸದಂತೆ ಪೊಲೀಸ್ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ತಂಬಿ, ಕಾರ್ತಿಕ್, ರಫೀಕ್, ಹರೀಶ್.ಎಸ್.ಎ, ಗಣೇಶ್, ಕುಮಾರ್, ಗೋವಿಂದ, ರಾಜಣ್ಣ, ಗೋವಿಂದ, ಕಾವೇರಮ್ಮ, ರವಿ ಹಾಗೂ ಇನ್ನಿತರರು ಇದ್ದರು.