ಲವ್ ಮ್ಯಾರೇಜ್ ಮಾಡಿಕೊಂಡಾಕೆಗೆ ಗಂಡನಿಂದ ವರದಕ್ಷಿಣೆ ಕಿರುಕುಳ; ಯುವತಿ ಆತ್ಮಹತ್ಯೆ | ಒಂದೇ ವರ್ಷಕ್ಕೆ ದಾಂಪತ್ಯ ಜೀವನ ಅಂತ್ಯ!
ಚಿಕ್ಕಬಳ್ಳಾಪುರ, ಅ. 13: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ರಾಮಲಿಂಗಾಪುರ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಶಿರಿಷಾ ಎಂ (20) ಎಂದು ಗುರುತಿಸಲಾಗಿದೆ. ಶಿರಿಷಾರ ಗಂಡ ಶ್ರಿನಾಥ್ ವಿರುದ್ಧ ಪೊಲೀಸರಿಗೆ ದೂರು ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಅತ್ತೆ ಹಾಗೂ ಇತರ ಆರೋಪಿಗಳು ಪರಾರಿಯಾಗಿದ್ದಾರೆ.
ಶಿರಿಷಾ ತನ್ನದೇ ಗ್ರಾಮದ ಶ್ರಿನಾಥ್ ಎಂಬ ಯುವಕನನ್ನು ಪ್ರೀತಿಸಿ, ಪೋಷಕರ ವಿರೋಧದ ನಡುವೆಯೇ ಸುಮಾರು ಒಂದು ವರ್ಷ ಹಿಂದೆ ಲವ್ ಮ್ಯಾರೇಜ್ ಮಾಡಿಕೊಂಡಿದ್ದರು. ಮದುವೆಯ ನಂತರ ಶಿರಿಷಾಗೆ ಗಂಡ ಹಾಗೂ ಅತ್ತೆ-ಮಾವರಿಂದ ನಿರಂತರ ಕಿರುಕುಳ ಮತ್ತು ಹಲ್ಲೆ ನಡೆಯುತ್ತಿತ್ತು ಎಂದು ಶಿರಿಷಾ ಕುಟುಂಬದ ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೆ ಕೆಲ ಗಂಟೆಗಳ ಮುನ್ನ ಶಿರಿಷಾ ತನ್ನ ತಂದೆಗೆ ಕರೆ ಮಾಡಿ, “ಗಂಡ ಪ್ರತಿದಿನ ಹಲ್ಲೆ ಮಾಡುತ್ತಾನೆ, ಅತ್ತೆ-ಮಾವ ಹಾಗೂ ನಾದಿನಿ, ಅಕ್ಕ ಕಿರುಕುಳ ಕೊಡುತ್ತಿದ್ದಾರೆ. ನಾನು ಡಿವೋರ್ಸ್ ಕೊಡುತ್ತೇನೆ” ಎಂದು ಕಣ್ಣೀರು ಹಾಕಿದ್ದಾರೆ. ತಂದೆ ಸಮಾಧಾನಪಡಿಸಿದರೂ, ಬೇಸರಗೊಂಡ ಶಿರಿಷಾ ಅತ್ತೆಯೊಂದಿಗೆ ವಾಗ್ವಾದಕ್ಕಿಳಿದು ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಆಕೆ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯ ನಂತರ ಗ್ರಾಮದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿ, ಮೃತಳ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಗಂಡನ ಮನೆ ಮುಂದೆ ಪ್ರತಿಭಟನೆ ನಡೆಸಿದರು. ಮೃತದೇಹವನ್ನು ರಸ್ತೆಯ ಮಧ್ಯೆ ಇಟ್ಟು ಪ್ರತಿಭಟಿಸಿದ ಅವರು, ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು.
ಈ ವೇಳೆ ಪೊಲೀಸರು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಸಿಯಿತು. ನಂತರ ಸ್ಥಳೀಯ ಮುಖಂಡರು ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ಶಮನಗೊಳಿಸಿದರು.
ಶಿಡ್ಲಘಟ್ಟ ಪೊಲೀಸರು ಶಿರಿಷಾ ಅವರ ಗಂಡನನ್ನು ಬಂಧಿಸಿದ್ದು, ಉಳಿದ ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಶಿರಿಷಾರ ಅಂತ್ಯಕ್ರಿಯೆ ಗ್ರಾಮದ ಸಮೀಪದಲ್ಲಿ ನಡೆಯಿತು.