ಎಂಎಸ್ಎಂಇ; ವಿವಿಧ ಯೋಜನೆ ಬಗ್ಗೆ ಜಾಗೃತಿ
ಮಡಿಕೇರಿ:-ಮಂಗಳೂರು ಶಾಖೆಯ ಮೈಕ್ರೋ, ಸಣ್ಣ ಮತ್ತು ಮಧ್ಯಮ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ, ಸಾಧಗುರು ಐಟಿಐ, ಮಡಿಕೇರಿ ಇವರ ಸಹಯೋಗದೊಂದಿಗೆ, ಇತ್ತೀಚೆಗೆ ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು. ಉದ್ಯಮ ಆರಂಭಿಸಲು ಹಾಗೂ ವಿಸ್ತರಿಸಲು ಆಸಕ್ತಿ ಹೊಂದಿರುವ ಹೊಸ ಹಾಗೂ ಇರುವ ಉದ್ಯಮಿಗಳಿಗೆ ಮಾರ್ಗದರ್ಶನ ಮತ್ತು ಸಬಲಿಕೆ ನೀಡುವ ಉದ್ದೇಶದಿಂದ ನಡೆದ ಈ ಕಾರ್ಯಕ್ರಮದಲ್ಲಿ 75 ಮಂದಿ ಉತ್ಸಾಹಭರಿತವಾಗಿ ಭಾಗವಹಿಸಿದ್ದರು.
ಮಂಗಳೂರು ಶಾಖೆಯ ಎಂಎಸ್ಎಂಇ ಮತ್ತು ಕಾರ್ಯಕ್ರಮ ಸಂಯೋಜಕರಾದ ಸುಮನ್ ಎಸ್.ರಾಜು, ಐಇಡಿಎಸ್ ಅವರು ನೀಡಿದರು. ನಂತರ ಸುಮನ್ ಎಸ್.ರಾಜು ಅವರು ಕಾರ್ಯಕ್ರಮವನ್ನು ಅಧಿಕೃತವಾಗಿ ಉದ್ಘಾಟಿಸಿ ಮಾತನಾಡಿದರು. ಸಣ್ಣ ಮತ್ತು ಮಧ್ಯಮ ಅಭಿವೃದ್ಧಿ ಮತ್ತು ಸೌಲಭ್ಯ ವತಿಯಿಂದ ವಿವಿಧ ಖಾತೆಗಳ ಅಡಿಯಲ್ಲಿ ಜಾರಿಗೆ ಬರುವ ಎಂಎಸ್ಎಂಇ ಯೋಜನೆಗಳ ಅನುಷ್ಠಾನ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಜೊತೆಯಾಗಿಸಿ ಜಾಗೃತಿ ಕಾರ್ಯಕ್ರಮದ ಮೂಲಕ ಉದ್ಯಮಿಗಳಿಗೆ ನೆರವು ಒದಗಿಸಲಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಮಂತ್ರಿತ ಅತಿಥಿಗಳು ಮತ್ತು ಗಣ್ಯರು ತಮ್ಮ ತಾಂತ್ರಿಕ ಕ್ಷೇತ್ರಗಳಲ್ಲಿ ಭಾಗವಹಿಸಿದವರಿಗೆ ಅಮೂಲ್ಯ ಮಾಹಿತಿಯನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗ, ಮಡಿಕೇರಿ ವಿಭಾಗದ ಕುಮಾರಿ ಮಮತಾ ಅವರು ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಲಭ್ಯವಿರುವ ವಿವಿಧ ಯೋಜನೆಗಳ ಕುರಿತು ವಿವರಣೆ ನೀಡಿದರು. ಸಾಮಾಜಿಕ ಕಲ್ಯಾಣ ಇಲಾಖೆ, ಮಡಿಕೇರಿಯ ಬಾಲಕೃಷ್ಣ ರೈ ಅವರು ಸಾಮಾಜಿಕ ಕಲ್ಯಾಣ ಇಲಾಖೆಯಿಂದ ಜಾರಿಗೊಳ್ಳುವ ವಿವಿಧ ಹಣಕಾಸು ಮತ್ತು ಅಭಿವೃದ್ಧಿ ಸಂಬಂಧಿತ ಯೋಜನೆಗಳ ಕುರಿತು ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿದಂತೆ ವಿವರಿಸಿದರು.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸುಪರಿಂಟೆಂಡೆಂಟ್ ರಾಮಕೃಷ್ಣ ಅವರು ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ ಕುರಿತು ಅದರ ಮುಖ್ಯ ವೈಶಿಷ್ಟ್ಯಗಳು ಮತ್ತು ಅರ್ಜಿ ಪ್ರಕ್ರಿಯೆಯನ್ನು ವಿವರಿಸಿದರು.
ಇದರ ನಂತರ ನಡೆದ ಉದ್ಯಮಶೀಲತೆ ಮತ್ತು ಮಾರುಕಟ್ಟೆ ಕುರಿತು ನಡೆದ ವಿಶೇಷ ಸತ್ರದಲ್ಲಿ ಬಾಲಕೃಷ್ಣ ಅವರು ಉದ್ಯಮ ಆರಂಭಿಸುವ ವಿಚಾರಗಳನ್ನು ಹಂಚಿಕೊಂಡರು. ದೊಡ್ಡ ಮಟ್ಟದಲ್ಲಿ ಉದ್ಯಮ ಆರಂಭಿಸಬೇಕೆಂಬ ಅಗತ್ಯವಿಲ್ಲ, ಸಣ್ಣ ಸೃಜನಶೀಲ ಉತ್ಪನ್ನಗಳಿಂದಲೂ ಯಶಸ್ವಿ ಪ್ರಾರಂಭ ಮಾಡಬಹುದೆಂದು ಅವರು ಪ್ರೇರಣೆ ತುಂಬುವ ರೀತಿಯಲ್ಲಿ ಸಲಹೆ ನೀಡಿದರು.
ಭಾಗವಹಿಸಿದವರು ಫ್ಯಾಷನ್ ಡಿಸೈನಿಂಗ್ ಹಿನ್ನೆಲೆಯವರಾಗಿರುವುದರಿಂದ, ಹ್ಯಾಂಡ್ಕರ್ಚೀಫ್ ಅಥವಾ ಪೆಟ್ಟಿಕೋಟ್ ನಂತಹ ಸರಳ ಉತ್ಪನ್ನದಿಂದಲೂ ಉದ್ಯಮ ಆರಂಭಿಸಬಹುದು ಎಂದು ಉದಾಹರಣೆ ನೀಡಿ ವಿವರಿಸಿದರು. ಇಂದಿನ ಸಾಮಾಜಿಕ ಜಾಲತಾಣಗಳಾದ ಮುಂತಾದವು ಅತಿ ಕಡಿಮೆ ಖರ್ಚಿನಲ್ಲಿ ಅಥವಾ ಶೂನ್ಯ ವೆಚ್ಚದಲ್ಲಿಯೇ ಮಾರುಕಟ್ಟೆ ಸಾಧ್ಯವಾಗುತ್ತಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಫ್ಯಾಷನ್ ಡಿಸೈನಿಂಗ್ ವಿಷಯದಲ್ಲಿ 6 ವಾರಗಳ ಉದ್ಯಮಶೀಲತೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು ವಿತರಿಸುವ ಮೂಲಕ ದಿನದ ಕಾರ್ಯಕ್ರಮ ಸಂಪನ್ನಗೊಂಡಿತು.