ಮಡಿಕೇರಿ:ಹಿರಿಯ ಸಮಾಜಸೇವಕ ಬಾಬು ಚಂದ್ರ ಉಳ್ಳಾಗಡ್ಡಿ ಇನ್ನಿಲ್ಲ

ಮಡಿಕೇರಿ:ಹಿರಿಯ ಸಮಾಜಸೇವಕ ಬಾಬು ಚಂದ್ರ ಉಳ್ಳಾಗಡ್ಡಿ ಇನ್ನಿಲ್ಲ

ಮಡಿಕೇರಿ: ಹಿರಿಯ ವಾಣಿಜ್ಯೋದಿಮಿಗಳು, ವಿವಿಧ ಸಂಘ ಸಂಸ್ಥೆಗಳಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ, ಪರೋಪಕಾರಿ ಆತ್ಮ ಲಯನ್ ಬಾಬುಚಂದ್ರ ಉಳ್ಳಾಗಡ್ಡಿ (76) ಶನಿವಾರ ರಾತ್ರಿ 9:30 ಗಂಟೆ ಸಮಯದಲ್ಲಿ ಮಡಿಕೇರಿಯ ಖಾಸಗಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.

 ಶನಿವಾರ ರಾತ್ರಿ ಮನೆಯಲ್ಲಿದ್ದ ಇವರಿಗೆ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ತೆರಳುವ ಸಂದರ್ಭ ಆಸ್ಪತ್ರೆಯ ಆವರಣದಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಮೂಲತ ಹುಬ್ಬಳ್ಳಿಯವರಾದ ಇವರು ಮಡಿಕೇರಿಯಲ್ಲಿ ನೆಲೆಸಿ ತಮ್ಮ ಇಡೀ ಜೀವನವನ್ನು ಸಮಾಜಸೇವೆಗಾಗಿ ಮೂಡಿಪಾಗಿಟ್ಟಿದ್ದರು.

 ಮಡಿಕೇರಿಯ ಏಲಕ್ಕಿ ವ್ಯಾಪಾರಿಯಾಗಿದ್ದ ಇವರು ಏಲಕ್ಕಿ ಸಹಕಾರ ಸಂಘದ ಸ್ಥಾಪಕ ನಿರ್ದೇಶಕರಾಗಿ, ಮಡಿಕೇರಿ ಚೇಂಬರ್ ಆಫ್ ಕಾಮರ್ಸ್ ನ ಸ್ಥಾನಿಯ ಸಮಿತಿಯ ಅಧ್ಯಕ್ಷರಾಗಿ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ನಿರ್ದೇಶಕರಾಗಿ, ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ( ಚೇಂಬರ್ ಆಫ್ ಕಾಮರ್ಸ್ ಬ್ಯಾಂಕ್ ) ಅಧ್ಯಕ್ಷರಾಗಿ, ಜಿಲ್ಲಾ ವಾಣಿಜ್ಯೋದಿಮಿಗಳ ಸಂಕೀರ್ಣ ಕಟ್ಟಡ ಟ್ರಸ್ಟಿನ ಅಧ್ಯಕ್ಷರಾಗಿ, ಲಯನ್ ಸಂಸ್ಥೆಯ ಅಧ್ಯಕ್ಷರಾಗಿ,ಹೀಗೆ ಹಲವಾರು ಸಂಘ-ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ, ಕೋವಿಡ್, ಸುನಾಮಿ ಸಂದರ್ಭದಲ್ಲಿ ಚೇಂಬರ್ ಮೂಲಕ ನಿಧಿ ಸಂಗ್ರಹಿಸಿ ಸಂತ್ರಸ್ತರಿಗೆ ನೆರವಾಗಿದ್ದರು.

ಸೌಮ್ಯ ಸ್ವಭಾವದ ವ್ಯಕ್ತಿತ್ವವುಳ್ಳ ಬಾಬುಚಂದ್ರ ಉಳ್ಳಾಗಡ್ಡಿ ಎಲ್ಲ ಜನಪರ ಹೋರಾಟಗಳಲ್ಲೂ ಕೂಡ ಭಾಗವಹಿಸುತ್ತಿದ್ದರು. ಮಡಿಕೇರಿಯ ಜನತೆಗೆ ಬಾಬಣ್ಣ ಎಂದೆ ಪರಿಚಿತರಾಗಿದ್ದ ಇವರು ನಾಲ್ಕು ಬಾರಿ ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಚುನಾವಣೆ ಮೂಲಕ ಆಯ್ಕೆಗೊಂಡಿದ್ದರು. ಬಾಬು ಚಂದ್ರ ಉಳ್ಳಾಗಡ್ಡಿ ರವರು ಮಡಿಕೇರಿಯಲ್ಲಿರುವ ತನಲ್ ವೃದ್ಧಾಶ್ರಮದಲ್ಲೂ ಕೂಡ ಅಲ್ಲಿನ ನಿರ್ದೇಶಕರಾಗಿ ಸೇವಿಸಲಿಸುತ್ತಿದ್ದಾರೆ.

ಮೂಲತಹ ಹುಬ್ಬಳ್ಳಿಯವರಾದ ಇವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಬಂಧು ಬಳಗ, ಸ್ನೇಹಿತರನ್ನು ಬಿಟ್ಟು ಅಗಲಿದ್ದಾರೆ. ನಾಳೆ ಮೃತರ ಅಂತಿಮ ಸಂಸ್ಕಾರ ಮಡಿಕೇರಿಯಲ್ಲಿ ನಡೆಯಲಿದೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಸಂತಾಪ: ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್, ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಗಿರೀಶ್ ಗಣಪತಿ, ಸ್ಥಾಪಕ ಅಧ್ಯಕ್ಷರಾದ ಜಿ. ರಾಜೇಂದ್ರ, ಸ್ಥಾಪಕ ಕಾರ್ಯದರ್ಶಿಗಳಾದ ಟಿ ಪಿ ರಮೇಶ್, ಮಾಜಿ ಅಧ್ಯಕ್ಷರಾದ ಜಿ. ಚಿದ್ವಿಲಾಸ್, ಕೆ ಎಂ ಬಿ.ಗಣೇಶ್,ಮೃತರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.