ಅಕ್ರಮ ಸಂಬಂಧ ತೊರೆದಿದ್ದಕ್ಕೆ ಬ್ಲಾಕ್ ಮೇಲ್; ವಿವಾಹಿತ ವ್ಯಕ್ತಿ ಸಾವು

ಅಕ್ರಮ ಸಂಬಂಧ ತೊರೆದಿದ್ದಕ್ಕೆ ಬ್ಲಾಕ್ ಮೇಲ್; ವಿವಾಹಿತ ವ್ಯಕ್ತಿ ಸಾವು
Photo credit: TV09

ಚಿಕ್ಕಬಳ್ಳಾಪುರ, ಡಿ. 27: ಜಿಲ್ಲೆಯ ಗುಡಿಬಂಡೆ ಪಟ್ಟಣದ ಬಾಪೂಜಿ ನಗರದಲ್ಲಿ ವಿವಾಹಿತ ವ್ಯಕ್ತಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಬೆಳಕಿಗೆ ಬಂದಿದೆ. ಮೃತರನ್ನು ಬಾಲಾಜಿ ಸಿಂಗ್ (30) ಎಂದು ಗುರುತಿಸಲಾಗಿದೆ.

ಬಾಲಾಜಿ ಸಿಂಗ್ ಅವರಿಗೆ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದು, ಆರು ವರ್ಷದ ಮಗಳು ಇದ್ದಾಳೆ. ಕಾರುಗಳನ್ನು ಬಾಡಿಗೆಗೆ ಓಡಿಸುವ ಮೂಲಕ ಜೀವನ ಸಾಗಿಸುತ್ತಿದ್ದ ಅವರು ಆರ್ಥಿಕವಾಗಿ ಸ್ಥಿರವಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಲಾಜಿ ಸಿಂಗ್ ಅವರಿಗೆ ಶಿಡ್ಲಘಟ್ಟ ಮೂಲದ ಮಹಿಳೆಯೊಂದಿಗಿನ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರ ಪತ್ನಿಗೆ ತಿಳಿದ ನಂತರ ದಂಪತಿ ನಡುವೆ ಕಲಹಗಳು ನಡೆದಿದ್ದವು. ಬಳಿಕ ಬಾಲಾಜಿ ಸಿಂಗ್ ಆ ಸಂಬಂಧದಿಂದ ದೂರ ಉಳಿದು, ಪತ್ನಿ ಹಾಗೂ ಮಕ್ಕಳೊಂದಿಗೆ ಜೀವನ ಮುಂದುವರಿಸಲು ನಿರ್ಧರಿಸಿದ್ದರು ಎಂದು ಹೇಳಲಾಗಿದೆ.

ಆದರೆ, ಆ ಮಹಿಳೆ ಪದೇಪದೆ ದೂರವಾಣಿ ಕರೆ ಮೂಲಕ ಕಿರುಕುಳ ನೀಡುತ್ತಿದ್ದರು ಹಾಗೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂಬ ಆರೋಪವನ್ನು ಮೃತನ ಪತ್ನಿ ಮಾಡಿದ್ದಾರೆ. ಈ ನಿರಂತರ ಮಾನಸಿಕ ಒತ್ತಡವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.