ಸಮಾಜದ ಎಲ್ಲಾ ಕಾರ್ಯ ಚಟುವಟಿಕೆಗಳು ನಾಡಿನ ಏಳಿಗೆಗೆ ಹಾಗೂ ಸಮಾಜದ ಸಂಸ್ಕೃತಿ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗಿರಲಿ:ಶಾಸಕ ಎಎಸ್ ಪೊನ್ನಣ್ಣ
ಮಡಿಕೇರಿ; ಕೊಡಗು ಗೌಡ ಸಮಾಜಗಳ ಒಕ್ಕೂಟ ಹಾಗೂ ಕೊಡಗಿನ ಎಲ್ಲಾ ಗೌಡ ಸಮಾಜಗಳ ವತಿಯಿಂದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣರವರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕೊಡಗು ಗೌಡ ಸಮಾಜಕ್ಕೆ ಮದೆನಾಡಿನಲ್ಲಿ ಸರಕಾರದ ವತಿಯಿಂದ ಆರು ಎಕರೆಯನ್ನು ಮಂಜೂರು ಮಾಡಿಸಿಕೊಟ್ಟ ಶಾಸಕರಿಗೆ ಕೃತಜ್ಞತಾ ಪೂರ್ವಕವಾಗಿ ಈ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಎಲ್ಲರಿಗೂ ಕೊಡಗು ಗೌಡ ಸಮಾಜಕ್ಕೆ ಸರ್ಕಾರಿ ಜಮೀನನ್ನು ಮಂಜೂರು ಮಾಡಿಸಿ ಕೊಟ್ಟಿರುವುದು ಇಲ್ಲಿಯ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ಇತರ ಚಟುವಟಿಕೆಗಳಿಗೆ ಪೂರಕವಾಗಲಿದೆ.
ಹಲವು ಸಮಯದಿಂದ ಗೌಡ ಸಮುದಾಯದವರು ಈ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದು ತನ್ನ ಬಳಿಗೆ ಗೌಡ ಸಮುದಾಯದ ಮುಖಂಡರು ಆಗಮಿಸಿ ಇದನ್ನು ಮಂಜೂರು ಮಾಡಿಸಿಕೊಡಬೇಕೆಂದು ಬೇಡಿಕೊಂಡಾಗ ಸಂತೋಷದಿಂದ ಒಪ್ಪಿಕೊಂಡು ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಿಗೆ ನೀಡಿದ್ದಕ್ಕಾಗಿ ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರು ತಿಳಿಸಿದರು. ಮುಂದುವರೆದು ಮಾತನಾಡಿದ ಮಾನ್ಯ ಶಾಸಕರು ಸರಕಾರದ ಜಾಗ ಮಂಜೂರು ಮಾಡಿಸುವಲ್ಲಿ ಯಾವ ರೀತಿಯಲ್ಲ ಅಡೆತಡೆಗಳು ಅನುಭವಿಸಬೇಕಾಯಿತು ಎಂಬುದನ್ನು ಸಭಿಕರಿಗೆ ವಿವರಿಸಿದರು.
ಜಾಗ ಮಂಜೂರು ಮಾಡಲು ಸಹಕರಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ, ಮಾನ್ಯ ಕಂದಾಯ ಸಚಿವರಿಗೆ ಹಾಗೂ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಿದ ಮಾನ್ಯ ಶಾಸಕರು ಮುಂದೆ ಸಮಾಜದ ಎಲ್ಲಾ ಕಾರ್ಯ ಚಟುವಟಿಕೆಗಳು ನಾಡಿನ ಏಳಿಗೆಗೆ ಹಾಗೂ ಸಮಾಜದ ಸಂಸ್ಕೃತಿ ಹಾಗೂ ಸಾಹಿತ್ಯದ ಅಭಿವೃದ್ಧಿಗೆ ಪೂರಕವಾಗಿರಲಿ ಎಂದು ಕಿವಿಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರು ಆನಂದ್ ಕರಂದ್ಲಾಜೆ,ಕೊಡಗು ಅರೆಭಾಷೆ ಅಕಾಡೆಮಿಯ ಅಧ್ಯಕ್ಷರು ಸದಾನಂದ ಮಾವಜಿ, ವಿರಾಜಪೇಟೆ ಗೌಡ ಸಮಾಜದ ಅಧ್ಯಕ್ಷರು ಮುಕ್ಕಾಟಿ ವಾಸು ಗಣಪತಿ, ಚಿದಾನಂದ, ಅಂಬೆಕಲ್ ನವೀನ್, ಪಕ್ಷದ ಮುಖಂಡರು ರಮಾನಾಥ್ ಬೇಕಲ್, ಗೌಡ ಸಮಾಜದ ಒಕ್ಕೂಟದ ಸರ್ವ ಸದಸ್ಯರು ಹಾಗೂ ಗೌಡ ಸಮುದಾಯದ ಅಧ್ಯಕ್ಷರುಗಳು, ಸದಸ್ಯರುಗಳು, ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.