ಮಾಧ್ಯಮಗಳು ಸಮಾಜದ ಅಭಿವೃದ್ದಿಯ ಭಾಗ:ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಭಿಪ್ರಾಯ
ಗೋಣಿಕೊಪ್ಪ ; ಮಾಧ್ಯಮಗಳು ಸಮಾಜದ ಅಭಿವೃದ್ದಿಯ ಭಾಗ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಭಿಪ್ರಾಯಪಟ್ಟರು.
ಕಿರುಗೂರು ಗ್ರಾಮದ ನೋಮೇಡ್ಸ್ ನೂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಅವರವರ ಬದುಕಿನಲ್ಲಿ ಪ್ರೋತ್ಸಾಹ ಮುಖ್ಯ. ಈ ನಿಟ್ಟಿನಲ್ಲಿ ಮಾಧ್ಯಮಗಳ ಕೊಡುಗೆ ಸಮಾಜದ ಅಭಿವೃದ್ದಿಯ ಭಾಗವಾಗಿದೆ ಎಂಬ ನಂಬಿಕೆ ನನ್ನದು. ನನ್ನ ಸಾಮಾಜಿಕ ಕಾರ್ಯದಲ್ಲಿ ಮಾಧ್ಯಮಗಳ ಪ್ರೋತ್ಸಾಹ ಮುಖ್ಯ ಘಟ್ಟ. ಪತ್ರಕರ್ತರನ್ನು ವರದಿಗಳ ಆಧಾರದಲ್ಲಿ ವರ್ಷಕ್ಕೊಮ್ಮೆ ಪ್ರಶಸ್ತಿ ನೀಡಿ ಗೌರವಿಸುವುದು ಪತ್ರಕರ್ತರ ಪ್ರೋತ್ಸಾಹಕ್ಕೂ ವೇದಿಕೆ ಎಂದರು.
ಮಾಧ್ಯಮ ಸ್ಪಂದನ ಕಾರ್ಯಕ್ಕೆ ಆರ್ಟ್ ಆಫ್ ಲಿವಿಂಗ್ ವತಿಯಿಂದ ಅನುದಿನ ತೆರೆಮರೆಯ ಸಾಧಕ ಪ್ರಶಸ್ತಿಗೆ ಭಾಜನವಾಗಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ವರನ್ನು ಸನ್ಮಾನಿಸಲಾಯಿತು. ನಂತರ ಅವರು ಮಾತನಾಡಿ, ಸಮಾಜಮುಖಿ ಚಟುವಟಿಕೆಗಳ ಮೂಲಕ ಪತ್ರಕರ್ತರು ಸಮಾಜದ ಭಾಗವಾಗಿ ಮುಂದುವರಿಯಬೇಕಿದೆ. ಮಾಧ್ಯಮ ಸ್ಪಂದನ ಕಾರ್ಯ ಸಮಾಜಕ್ಕೆ ನೆರವಾಗುತ್ತಿದೆ. ಕನಿಷ್ಟ ತಿಂಗಳಿಗೊಮ್ಮೆ ಒಬ್ಬ ಪತ್ರಕರ್ತ ಸಮಾಜದ ನೊಂದವರಿಗೆ ಸ್ಪಂದಿಸುವ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಜಿಲ್ಲಾಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ ಮಾತನಾಡಿ, ಉತ್ತಮ ವರದಿಗಾರಿಕೆ ನೀಡಲು ಪ್ರಯತ್ನ ಮುಖ್ಯ ಸಮಾಜ ಕೂಡ ಇದನ್ನೇ ಬಯಸುತ್ತಿದೆ ಎಂದರು.
ರಾಜ್ಯ ಸಮಿತಿ ಸದಸ್ಯೆ ಬಿ. ಆರ್. ಸವಿತಾ ರೈ ಮಾತನಾಡಿ, ಪ್ರಶಸ್ತಿಗಳು ಸಮಾಜದಲ್ಲಿ ಗೌರವ ಹೆಚ್ಚಿಸುತ್ತದೆ ಎಂದರು.
ರಾಷ್ಟಿçÃಯ ಸಮಿತಿ ಸದಸ್ಯ ಪಳೆಯಂಡ ಪಾರ್ಥ ಚಿಣ್ಣಪ್ಪ ಮಾತನಾಡಿ, ಚಟುವಟಿಕೆಗಳಿಂದ ಸಂಘದ ಕಾರ್ಯಕ್ರಮಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು.
ತಾಲೂಕು ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ತಾಲೂಕು ಮಟ್ಟಕ್ಕೆ ಸೀಮಿತವಾಗಿದ್ದ ದತ್ತಿ ಪ್ರಶಸ್ತಿಗಳಲ್ಲಿ ಎರಡು ಪ್ರಶಸ್ತಿ ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿರುವುದು ಜಿಲ್ಲೆಯ ಪತ್ರಕರ್ತರಿಗೂ ಪ್ರೋತ್ಸಾಹ ಸಿಗುವಂತಾಗಿದೆ. ಗುಣಮಟ್ಟದ ಸ್ಪರ್ಧೆ ಮುಖ್ಯ ಎಂದರು.
ದೇಯಂಡ ಪೂಣಚ್ಚ ಹಾಗೂ ಉಮೇಶ್ ಜ್ಞಾಪಕಾರ್ಥದ ಗ್ರಾಮೀಣ ವರದಿ ಪ್ರಶಸ್ತಿ ಹಾಗೂ ಗಣೇಶ್ ಜ್ಞಾಪಕಾರ್ಥದ ಕ್ರೀಡಾ ವರದಿಗೆ ಜಗದೀಶ್ ಜೋಡುಬೀಟಿ, ಸಣ್ಣುವಂಡ ಮಾದಪ್ಪ, ತಾಯಿ ಜಾನಕಿ ಮಾದಪ್ಪ ಜ್ಞಾಪಕಾರ್ಥದ ಪರಿಸರ ಪ್ರಶಸ್ತಿಗೆ ಚೀರಂಡ ಎಂ. ಚಂಗಪ್ಪ ಅವರುಗಳಿಗೆ ಪ್ರದಾನ ಮಾಡಲಾಯಿತು.
ಮೇರು ನಟಿ ಸಣ್ಣುವಂಡ ಶಶಿಕಲಾ ಕಾವೇರಪ್ಪ ಜ್ಞಾಪಕಾರ್ಥದ ಚಿತ್ರರಂಗ ಜಿಲ್ಲಾ ಪ್ರಶಸ್ತಿಯನ್ನು ಕೆ. ಎಂ. ಇಸ್ಮಾಯಿಲ್ ಕಂಡಕೆರೆ, ಬಿ. ವಿ. ಸುಮತಿ ರೈ ಜ್ಞಾಪಕಾರ್ಥದ ಮಾನವೀಯ ಜಿಲ್ಲಾ ಪ್ರಶಸ್ತಿಯನ್ನು ಎಚ್. ಕೆ. ಜಗದೀಶ್ ಅವರಿಗೆ ಪ್ರದಾನ ಮಾಡಲಾಯಿತು.
ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೋಳೇರ ಸಿ. ದಿನು ಸನ್ಮಾನ ಸ್ವೀಕರಿಸಿದರು.
ಕೊಡಗು ಪ್ರೆಸ್ ಕ್ಲಬ್ ಸೌಹಾರ್ಧ ಸಂಘದ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಉಳಿಕೆಯಾದ ಹಣದಲ್ಲಿ ರೂ. 50 ಸಾವಿರ ಚೆಕ್ ಅನ್ನು ತಾಲೂಕು ಸಂಘದ ಕ್ಷೇಮಾಭಿವೃದ್ದಿ ನಿಧಿಗೆ ನೀಡಲಾಯಿತು. ತಾಲೂಕು ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಅವರಿಗೆ ಸಹಕಾರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಸ್ತಾಂತರ ಮಾಡಿದರು. ಸಿಂಗಿ ಸತೀಶ್ ಸ್ವಾಗತಿಸಿದರು. ಎಂ. ಎಂ. ಚನ್ನನಾಯಕ ನಿರೂಪಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಎನ್. ದಿನೇಶ್, ಉಪಾಧ್ಯಕ್ಷ ಮಚ್ಚಮಾಡ ಅನೀಶ್ ಮಾದಪ್ಪ, ಸದಸ್ಯ ಮನೋಜ್ ಕುಮಾರ್, ಜಿಲ್ಲಾ ನಿರ್ದೇಶಕ ಸಂತೋಷ್ ರೈ ಉಪಸ್ಥಿತರಿದ್ದರು.
ಮಹಾಸಭೆ ; ತಾಲೂಕು ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಅಧ್ಯಕ್ಷತೆಯಲ್ಲಿ ಮಹಾಸಭೆ ನಡೆಯಿತು. ಖಜಾಂಚಿ ವಿ. ವಿ. ಅರುಣ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ಜಗದೀಶ್ ಜೋಡುಬೀಟಿ ವಾರ್ಷಿಕ ವರದಿ ಮಂಡಿಸಿದರು. ವೀಕ್ಷಕರಾಗಿ ಜಿಲ್ಲಾ ಉಪಾಧ್ಯಕ್ಷ ನವೀನ್ ಸುವರ್ಣ ಭಾಗವಹಿಸಿದ್ದರು.

