ನಾಪೋಕ್ಲು :ಗುಂಡಿಬಿದ್ದ ರಸ್ತೆಗೆ ಮಣ್ಣು ಹಾಕಿ ಮುಚ್ಚಿದ ಕೊಟ್ಟಮುಡಿಯ ಯುವಕರ ತಂಡ
ವರದಿ:ಝಕರಿಯ ನಾಪೋಕ್ಲು
ನಾಪೋಕ್ಲು: ಹದಗೆಟ್ಟ ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚುವ ಮೂಲಕ ಸಂಘ ಒಂದರ ಸದಸ್ಯರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಾಪೋಕ್ಲು ಬಳಿಯ ಕೊಟ್ಟ ಮುಡಿಯ ಝೀನತ್ ಯುವಕ ಸಂಘದ ಪದಾಧಿಕಾರಿಗಳು ಹದಗೆಟ್ಟ ಮುಖ್ಯ ರಸ್ತೆಯಲ್ಲಿ ಶ್ರಮದಾನ ನಡೆಸಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಡಿಕೇರಿ ನಾಪೋಕ್ಲು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಕೊಟ್ಟಮುಡಿ ಬಳಿಯಿಂದ ಸೇತುವೆ ಬಳಿಯವರೆಗಿನ ರಸ್ತೆಗಳು ಗುಂಡಿ ಬಿದ್ದು ವಾಹನ ಸವಾರರ ಸಾರ್ವಜನಿಕರ ಸಂಚಾರಕ್ಕೆ ಅಯೋಗ್ಯವಾಗಿತ್ತು.ಈ ಹದಗೆಟ್ಟ ರಸ್ತೆಯಲ್ಲಿ ನಿತ್ಯವೂ ಒಂದಲ್ಲ ಒಂದು ರೀತಿ ಅಪಘಾತ ಸಂಭವಿಸುತ್ತಿತ್ತು. ರಸ್ತೆ ದುರಸ್ತಿಪಡಿಸಬೇಕೆಂದು ಒತ್ತಾಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ರಸ್ತೆ ದುರಸ್ತಿಗೆ ಅಧಿಕಾರಿಗಳ ಸ್ಪಂದನೆ ಸಿಗದಿದ್ದರಿಂದ ಕೊಟ್ಟ ಮುಡಿಯ ಝೀನತ್ ಯುವಕ ಸಂಘದ ಪದಾಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾದರು. ಗುಂಡಿಗಳಿಗೆ ಮಣ್ಣು, ಕಲ್ಲು ತುಂಬಿ ದುರಸ್ತಿ ಕಾರ್ಯನಡೆಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶ್ರಮದಾನದಲ್ಲಿ ಝೀನತ್ ಯುವಕ ಸಂಘದ ಅಧ್ಯಕ್ಷ ಶೌಕತ ಅಲಿ, ಉಪಾಧ್ಯಕ್ಷ ನೌಶಾದ್,ಕಾರ್ಯದರ್ಶಿ ರಹೀಮ್,ಸಹ ಕಾರ್ಯದರ್ಶಿ ಮಹಮ್ಮದ್ ಸೇರಿದಂತೆ ಸಂಘದ ಸದಸ್ಯರು ಪಾಲ್ಗೊಂಡಿದ್ದರು.