ನಾಪೋಕ್ಲು :ಸ್ಥಳದಾನಿ ಮೊಯಿದ್ದೀನ್ ಕುಂಞಿ ಹಾಜಿ ನಿಧನ; ಚೆರಿಯಪರಂಬು ಶಾಲೆಯ ಆಡಳಿತ ಮಂಡಳಿ, ವಿದ್ಯಾರ್ಥಿಗಳಿಂದ ಶ್ರದ್ಧಾಂಜಲಿ
ವರದಿ:ಝಕರಿಯ ನಾಪೋಕ್ಲು ನಾಪೋಕ್ಲು: ಚೆರಿಯಪರಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣಕ್ಕೆ ಸ್ಥಳವನ್ನು ದಾನವಾಗಿ ನೀಡಿದ್ದ ಪಿ. ಪಿ.ಮೊಯಿದ್ದೀನ್ ಕುಂಞಿ ಹಾಜಿ ಅವರು ಇತ್ತೀಚಿಗೆ ನಿಧನ ಹೊಂದಿದ್ದು ಅವರ ಅಗಲಿಕೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಮೊಯಿದ್ದೀನ್ ಕುಂಞಿ ಹಾಜಿ ಅವರು ಚೆರಿಯಪರಂಬು ಗ್ರಾಮದಲ್ಲಿ ಶಾಲೆ ನಿರ್ಮಾಣಕ್ಕೆ ಅಂದಿನ ಕಾಲದಲ್ಲಿ ಸೂಕ್ತ ನಿವೇಶನ ಇಲ್ಲದಿರುವುದನ್ನು ಮನಗಂಡು 1975ರಲ್ಲಿ ಚೆರಿಯಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 25ಸೆಂಟ್ ಜಾಗವನ್ನು ದಾನವಾಗಿ ನೀಡಿದ್ದರು.
ದಾನವಾಗಿ ನೀಡಿದ ಸ್ಥಳದಲ್ಲಿ ಸರ್ಕಾರದಿಂದ ಶಾಲೆ ನಿರ್ಮಾಣವಾಗಿದ ಬಳಿಕ ಅಲ್ಲಿನ ವಿದ್ಯಾರ್ಥಿಗಳಿಗೆ ಬಟ್ಟೆ ಪುಸ್ತಕವನ್ನು ಕೂಡ ಇವರು ಉದರವಾಗಿ ನೀಡುತ್ತಾ ಬಂದಿದ್ದರು. ದಾನಿಗಳಾದ ಮೊಯಿದ್ದೀನ್ ಕುಂಞಿ ಹಾಜಿ ಅವರು ಇತ್ತೀಚೆಗೆ ನಿಧನ ಹೊಂದಿದರು.
ಇವರ ಆತ್ಮಕ್ಕೆ ಶಾಂತಿಯನ್ನು ಕೋರಿ ಚೆರಿಯಪರಂಬು ಸರ್ಕಾರಿಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ, ಅಂಗನವಾಡಿ ಕೇಂದ್ರ, ಶಾಲೆಯ ಹಳೆಯ ವಿದ್ಯಾರ್ಥಿ ಸಂಘ,ಹಾಗೂ ವಿದ್ಯಾರ್ಥಿಗಳಿಂದ ಮೊಯಿದ್ದೀನ್ ಕುಂಞಿ ಹಾಜಿ ಅವರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ರಶೀದ್ ಅವರು ಮಾತನಾಡಿ ದಾನಿಗಳ ಸಹಕಾರ ಇರುವುದರಿಂದ ಇಲ್ಲಿ ಶಾಲೆ ನಿರ್ಮಾಣವಾಗಿ ನಾವು ವಿದ್ಯೆ ಕಲಿತಿದ್ದೇವೆ.ಮೊಯಿದ್ದೀನ್ ಕುಂಞಿ ಹಾಜಿ ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆ ಆಶಲತಾ ರವರು ಮಾತನಾಡಿ ಮೊಯಿದ್ದೀನ್ ಕುಂಞಿ ಹಾಜಿ ಅವರು ಸ್ಥಳ ದಾನ ಮಾಡುವ ಮೊದಲು ಇಲ್ಲಿನ ಮಸೀದಿಯ ಹತ್ತಿರ ಒಂದು ಸಣ್ಣ ಕೊಠಡಿಯಲ್ಲಿ ಪೂವಯ್ಯ ಎಂಬ ಒಬ್ಬರು ಶಿಕ್ಷಕರಿಂದ ಪಾಠ ಅಭ್ಯಾಸ ಮಾಡುತ್ತಿದ್ದರು. ಬಳಿಕ ಇವರು ದಾನ ನೀಡಿದ ಜಾಗದಲ್ಲಿ ಸರ್ಕಾರ ಹಾಗೂ ಪೋಷಕರಿಂದ ಶಾಲೆ ನಿರ್ಮಾಣವಾಗಿ ಮೂರು ತಲೆಮಾರಿನಿಂದ ಇಲ್ಲಿ ವಿದ್ಯೆಕಲಿತು ಉನ್ನತ ಸ್ಥಾನದಲ್ಲಿರುವವರು ಇದ್ದಾರೆ.
ಇವರ ಆದರ್ಶ ದಾನ, ಧರ್ಮ,ಗೌರವ ಗುಣಗಳು ಎಲ್ಲರಲ್ಲೂ ಬರಬೇಕು ಎಂದ ಅವರು ಗ್ರಾಮಸ್ಥರು ಆದಷ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ವಿನಂತಿಸಿದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶಾರದ, ಆಡಳಿತ ಮಂಡಳಿ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿಗಳಾದ, ಭವಾನಿ, ರುಕಿಯ, ಲೀಲಾವತಿ, ಅಂಗನವಾಡಿ ಕಾರ್ಯಕರ್ತೆ ಸ್ವಾತಿ ಶಾಲೆಯ ಶಿಕ್ಷಕವೃಂದ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.